
ಮಡಿಕೇರಿ NEWS DESK ಜು.2 : ಒಂದಕ್ಕಿoತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದುವ ಮೂಲಕ ಮತದಾನದ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಮಣಿ, ಭಾರತೀಯ ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮತದಾರರ ಗುರುತಿನ ಚೀಟಿ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭ ಆದಿಮಸಂಜಾತ ಕೊಡವ ಮತದಾರರನ್ನು ರಕ್ಷಿಸಲು ಮತ್ತು ಕೊಡವಲ್ಯಾಂಡ್ನಲ್ಲಿ ಹೊರಗಿನವರು ಹೊಂದಿರುವ ಒಂದಕ್ಕಿoತ ಹೆಚ್ಚು ವೋಟರ್ ಐಡಿಗಳನ್ನು ರದ್ದುಗೊಳಿಸಲು ತುರ್ತು ಹಸ್ತಕ್ಷೇಪ ಮಾಡಬೇಕೆಂದು ಕೋರಿದ್ದಾರೆ. ಒಂದಕ್ಕಿoತ ಹೆಚ್ಚು ವೋಟರ್ ಐಡಿ ಹೊಂದಿರುವವರ ಕಾರ್ಡ್ಗಳನ್ನು ಕಟ್ಟುನಿಟ್ಟಾಗಿ ರದ್ದುಗೊಳಿಸಬೇಕು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 31ರ ಅಡಿಯಲ್ಲಿ ಅಂತಹ ಅಪರಾಧಿಗಳ ವಿರುದ್ಧ ಕಠಿಣ ದಂಡನಾತ್ಮಕ ಕ್ರಮವನ್ನು ಕೈಗೊಳ್ಳಬೇಕು. ಕೊಡಗಿನ ಕಾನೂನುಬದ್ಧ ಆದಿಮಸಂಜಾತ ಮತದಾರರಾಗಿರುವ ಕೊಡವರನ್ನು ಮತದಾರರ ಪಟ್ಟಿಗೆ ಸೇರಿಸಲು ವಿಶೇಷ ಕಾಳಜಿ ವಹಿಸಬೇಕು. 2026ರ ಜೂನ್ 30 ರಿಂದ 2026ರ ಜುಲೈ 29 ರವರೆಗೆ ನಡೆಯುತ್ತಿರುವ ಈ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಎಲ್ಲಾ ಕೊಡವರು ಕಡ್ಡಾಯವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಮತ್ತು ಗುರುತನ್ನು ಪರಿಶೀಲಿಸಿಕೊಳ್ಳಬೇಕು. ಏಕ-ಜನಾಂಗೀಯ, ಪ್ರಕೃತಿ ಆರಾಧಕರಾದ ಕೊಡವರು, ಕೊಡವಲ್ಯಾಂಡ್ (ಕೊಡಗು)ನ ಆದಿಮಸಂಜಾತರಾಗಿದ್ದರೆ. ಕೊಡಗನ್ನು ಹೊರತುಪಡಿಸಿ, ಕೊಡವರಿಗೆ ಕೊಡವಲ್ಯಾಂಡ್ನಿoದ ಹೊರಗೆ ಯಾವುದೇ ಸಾಂಸ್ಕೃತಿಕ ಬೇರುಗಳಿಲ್ಲ. ಈ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಚುನಾವಣಾ ಪಟ್ಟಿಯಲ್ಲಿ ಕೊಡವರ ಅನನ್ಯ ಗುರುತನ್ನು ಮರುಸ್ಥಾಪಿಸಬೇಕು.
ಕೊಡವಲ್ಯಾಂಡ್ನಲ್ಲಿ ಆಶ್ರಯ ಪಡೆದಿರುವ ಹೊರಗಿನವರು ತಮ್ಮ ಹೆಸರಿನಲ್ಲಿ ಅಸಂಖ್ಯಾತ ವೋಟರ್ ಐಡಿಗಳನ್ನು ಹೊಂದಿದ್ದಾರೆ. ಅಂತಹ ಎಲ್ಲಾ ಕಾನೂನುಬಾಹಿರ ಐಡಿಗಳನ್ನು ರದ್ದುಗೊಳಿಸಬೇಕು. ಇದಕ್ಕೆ ಸಹಕರಿಸುತ್ತಿರುವ ಪಂಚಾಯತ್ ಪಿಡಿಒಗಳು ಹಾಗೂ ಸದಸ್ಯರನ್ನು ಐಪಿಸಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಶಿಕ್ಷೆಗೆ ಒಳಪಡಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಭಾರತದಲ್ಲಿ ಗಣಿಗಾರಿಕೆ, ಮದ್ಯ, ಶಿಕ್ಷಣ, ಡ್ರಗ್ಸ್, ಕಲ್ಲಿದ್ದಲು, ಗ್ರಾನೈಟ್, ಸಕ್ಕರೆ, ಕೃಷಿ, ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಮತ್ತು ಪೆಟ್ರೋಲಿಯಂ ಲಾಬಿಗಳು ಮಾಫಿಯಾಗಳು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತವೆ. ಅದೇ ರೀತಿ ಕೊಡಗಿನಲ್ಲಿ ಕಾಫಿ, ಮೆಣಸು ವ್ಯಾಪಾರ ಲಾಬಿ, ಮರಳು, ಮರಮುಟ್ಟುಗಳ ಲಾಬಿ, ರಿಯಲ್ ಎಸ್ಟೇಟ್ ಲಾಬಿ ಮತ್ತು ಈಗ ರೆಸಾರ್ಟ್ ಲಾಬಿಗಳು, ಮಾಫಿಯಾಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಲಾಬಿಗಳು, ಮಾಫಿಯಾಗಳನ್ನು ಹೊರಗಿನ ಲೇವಾದೇವಿಗಾರರು, ವ್ಯಾಪಾರ ಸಂಸ್ಥೆಗಳು, ಅನಿವಾಸಿ ಭಾರತೀಯ ಹಣವಂತರು, ಬಹುರಾಷ್ಟ್ರೀಯ ಕಂಪನಿಗಳ ಉದ್ಯಮಿಗಳು, ಕಾಳಸಂತೆಕೋರರು, ಆರ್ಥಿಕ ಅಪರಾಧಿಗಳು, ಭ್ರಷ್ಟ ಅಧಿಕಾರಶಾಹಿ ಹಾಗೂ ಕಳಂಕಿತ ರಾಜಕಾರಣಿಗಳು ನಡೆಸುತ್ತಿದ್ದಾರೆ. ಇವರು ಕೊಡಗಿನಲ್ಲಿ ಹೂಡಿಕೆ ಮಾಡುವಾಗ, ಅವರ ಮೊದಲ ಕೆಲಸವೇ ಕೊಡಗಿನ ಮತದಾರರ ಪಟ್ಟಿಗೆ ಸೇರ್ಪಡೆಯಾಗುವುದು. ಆ ಮೂಲಕ ತಮ್ಮ ವಾಸ್ತವ್ಯದ ಅಸ್ತಿತ್ವ ಮತ್ತು ಗುರುತನ್ನು ಕಾನೂನುಬದ್ಧಗೊಳಿಸಲು ವೋಟರ್ ಐಡಿ ಪಡೆದುಕೊಂಡು, ಚುನಾಯಿತ ಪ್ರತಿನಿಧಿಗಳು ತಮ್ಮ ಇಷ್ಟದಂತೆ ನಡೆಯುವಂತೆ ನಿರ್ದೇಶಿಸುತ್ತಾರೆ. ಹೊರಗಿನ ಈ ಅತ್ಯಂತ ಶ್ರೀಮಂತ ವರ್ಗದ ಬಂಡವಾಳ ಶಾಹಿಗಳು ಹೊರಗಿನಿಂದ ಸಿಬ್ಬಂದಿ ಮತ್ತು ಕೆಲಸಗಾರರನ್ನು ಕರೆತರುತ್ತಾರೆ, ತಮಗೆ ಮಾತ್ರವಲ್ಲದೆ ಹೀಗೆ ಕರೆತಂದ ಅವರಿಗೂ ಕೊಡಗಿನಲ್ಲಿ ವೋಟರ್ ಐಡಿಗಳನ್ನು ಕೊಡಿಸಲಾಗುತ್ತದೆ. ಈ ಗುಂಪುಗಳು ಬೇರೆ ಬೇರೆ ರಾಜ್ಯಗಳಲ್ಲಿ 5 ರಿಂದ 6 ವೋಟರ್ ಐಡಿಗಳನ್ನು ಹೊಂದಿರುತ್ತಾರೆ ಎಂದು ಆರೋಪಿಸಿದ್ದಾರೆ. ಟಿ.ಎನ್.ಶೇಷನ್ ಅವರು ಪರಿಣಾಮಕಾರಿ ಸುಧಾರಣೆಗಳನ್ನು ತಂದಿದ್ದರೂ, ಅವರು ಪರಿಚಯಿಸಿದ ಒಂದು ಅಸಮರ್ಪಕ ವ್ಯವಸ್ಥೆಯೆಂದರೆ 5 ರಿಂದ 6 ಹಂತಗಳಲ್ಲಿ ಚುನಾವಣೆ ನಡೆಸುವುದು. ಇದರ ಅನಗತ್ಯ ಲಾಭವನ್ನು ಪಡೆದುಕೊಳ್ಳುವ ಹೊರಗಿನವರು, ಕೊಡಗಿನಲ್ಲಿ ಕಳ್ಳ ವೋಟರ್ ಐಡಿಗಳ ಮೂಲಕ ಮತ ಚಲಾಯಿಸಿ, ನಂತರ ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳ, ತಮಿಳುನಾಡು, ದೆಹಲಿ, ಮುಂಬೈ, ಹೈದರಾಬಾದ್ಗೆ ಪ್ರಯಾಣಿಸಿ ಅಲ್ಲಿಯೂ ಮತ್ತೆ ಮತ ಚಲಾಯಿಸುತ್ತಾರೆ.ಇದನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಶುದ್ಧೀಕರಿಸಬೇಕು. ಆಗ ಮಾತ್ರ “ಒಂದು ಮತ – ಒಂದು ಚುನಾವಣೆ” ಪರಿಕಲ್ಪನೆ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅಂತಿಮವಾಗಿ ಸಂಕಷ್ಟಕ್ಕೆ ಸಿಲುಕುವವರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಆದಿಮಸಂಜಾತ ಕೊಡವರು. ಈ ಕಾನೂನುಬಾಹಿರ ಚುನಾವಣಾ ವಶಪಡಿಸಿಕೊಳ್ಳುವಿಕೆಯು ಕೇವಲ ಸ್ಥಳೀಯ ಕಿಡಿಗೇಡಿತನವಲ್ಲ. ಈ ವಿಷಯವು ಜನಸಂಖ್ಯಾ ಬದಲಾವಣೆಗೆ ಸಂಬoಧಿಸಿದ್ದಾಗಿದ್ದು, ಆಯಾಕಟ್ಟಿನ ಸೂಕ್ಷ್ಮ ಪಶ್ಚಿಮ ಘಟ್ಟಗಳ ಗಡಿ ಜಿಲ್ಲೆಯಾದ ಕೊಡಗಿನಲ್ಲಿ ರಾಷ್ಟ್ರೀಯ ಭದ್ರತೆಗೆ ಇರುವ ಅಪಾಯದ ಭೀತಿಯಾಗಿದೆ. ಆದ್ದರಿಂದ, ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳಾದ ಅನ್ಬುಮಣಿ ಹಾಗೂ ಕೊಡಗಿನ ಜಿಲ್ಲಾ ಚುನಾವಣಾ ಅಧಿಕಾರಿಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಂದ್, ದೇವಕಾಡ್ ವಕ್ಕ, ಬಲ್ಯಮನೆ, ಪ್ರಮಾಣೀಕರಣದೊಂದಿಗೆ ಆದಿಮಸಂಜಾತ ಕೊಡವ ಮತದಾರರ ಮನೆ-ಮನೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.









