
ಕಾರ್ಕಳ ಆ.6 NEWS DESK : ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಕ್ರಿಯೇಟಿವ್ ಕೆಸರ್ಡೊಂಜಿ ದಿನ’ ಹಸಿರಿನೊಡನೆ ಕಲಿಕೆಯ ಕಾರ್ಯಕ್ರಮ ನಡೆಯಿತು. ಹಿರ್ಗಾನ ಗ್ರಾಮದ ಬೆಂಗಾಲ್ ಗದ್ದೆಯಲ್ಲಿ ನಡೆದ ನಡೆದ ಕಾರ್ಯಕ್ರಮವನ್ನು ಬೆಂಗಳೂರು ಫೆಡರೇಷನ್ ಆಫ್ ಕ್ವಾರಿ ಮತ್ತು ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಕೃತಿಯ ಮಹತ್ವ, ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆ ಮತ್ತು ಯುವ ಪೀಳಿಗೆಗೆ ಉತ್ತಮವಾದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಅಗತ್ಯಗಳ ಬಗ್ಗೆ ಜಾಗೃತಿ ಮೂಡಿಸಿದರು. “ಕೆಸರಿನಲ್ಲಿ ಆಡೋದು ಕೇವಲ ಆಟವಲ್ಲ, ಅದು ಒಂದು ಅನುಭವ, ಜೀವನಕ್ಕೆ ಪಾಠ ಕಲಿಸುವ ಕ್ರಿಯೆ”ಎಂದು ತಿಳಿಸಿದರು. ಸಹ ಸಂಸ್ಥಾಪಕರಾದ ಡಾ.ಗಣನಾಥ ಶೆಟ್ಟಿ. ಬಿ. ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವ ಉದ್ದೇಶಗಳ ಬಗ್ಗೆ ತಿಳಿಸಿದರು. ಸರ್ವರನ್ನು ಸ್ವಾಗತಿಸಿದರು. ಸ್ಥಳ ದಾನಿ ಯೋಗೀಶ್ ಕಿಣಿ, ಶಿಕ್ಷಕರು, ಸ.ಕಿ.ಪ್ರಾ ಶಾಲೆ ಪಲಾಯಿ ಬಾಕ್ಯಾರು, ತೆಳ್ಳಾರು ಸಭೆಯನ್ನು ಉದ್ದೇಶಿಸಿ “ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಕ್ರೀಡೆ, ಮಣ್ಣು, ಪ್ರಕೃತಿಯ ಸಂಪರ್ಕ ಕಡಿಮೆ ಆಗುತ್ತಿದೆ. ಇಂತಹ ಕೆಸರ್ಡೊಂಜಿ ದಿನ ಕಾರ್ಯಕ್ರಮಗಳು ಮಕ್ಕಳಿಗೆ ನೈಜ ಅನುಭವಗಳನ್ನು ನೀಡುವ ಮೂಲಕ ಪ್ರಕೃತಿಯೊಂದಿಗೆ ಅವರ ಸಂಬಂಧವನ್ನು ಪುನರ್ ಸ್ಥಾಪಿಸುತ್ತದೆ” ಎಂದು ತಿಳಿಸಿದರು. ಸಹ ಸಂಸ್ಥಾಪಕರಾದ ಎಂ.ಕೆ.ಆದರ್ಶ ಹಾಗೂ ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಉದ್ಯಮಿಗಳಾದ ಸರ್ವೋತ್ತಮ ಕಡಂಬರವರು ಈ ಕಾರ್ಯಕ್ರಮದ ತಾತ್ಪರ್ಯವನ್ನು ಹಂಚಿಕೊಂಡರು. ಹಿರ್ಗಾನ ಗ್ರಾಮದ ಪ್ರಗತಿಪರ ಕೃಷಿಕರಾದ ಸತ್ಯನಾರಾಯಣ ಪಡ್ರೆ, ಸದಾನಂದ ಶೆಟ್ಟಿಗಾರ್, ವಿಠಲ್ ನಾಯಕ್ ಅವರನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ ಎಲ್ಲರಿಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಖಾದ್ಯಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. :: ಸಮಾರೋಪ :: ಅಪರಾಹ್ನ ಸಮಾರೋಪ ಕಾರ್ಯಕ್ರಮ ಜರುಗಿತು. ಸಹ ಸಂಸ್ಥಾಪಕರಾದ ಎಸ್.ಎಲ್.ಅಶ್ವತ್ ಆಗಮಿಸಿದ ಸರ್ವರನ್ನು ಸ್ವಾಗತಿಸುತ್ತ ಕಾರ್ಯಕ್ರಮ ಯಶಸ್ವಿಗೆ ಕಾರಣರಾದ ಎಲ್ಲರನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥಾಪಕರಾದ ವಿಮಲ್ ರಾಜ್. ಜಿ. ಅವರು, “ಗ್ರಾಮೀಣ ಜೀವನ ಶೈಲಿಯು ಪಾಠ ಪುಸ್ತಕದ ಹೊರಗಿನ ಶಿಕ್ಷಣವನ್ನು ನೀಡುತ್ತದೆ. ಆಧುನಿಕ ದಿನಚರಿಯಲ್ಲಿ ಮಕ್ಕಳಿಗೆ ಶಾರೀರಿಕ ಚಟುವಟಿಕೆ ಕಡಿಮೆಯಾಗಿದೆ. ಆದರೆ ಈ ಕೆಸರಿನ ಆಟಗಳು ಕೇವಲ ಮನರಂಜನೆ ಮಾತ್ರವಲ್ಲ, ಶಕ್ತಿಯ ಪೂರಕವೂ ಹೌದು” ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ನವೀನ್ ಚಂದ್ರ ಶೆಟ್ಟಿ, ಅಧ್ಯಕ್ಷರು, ರೋಟರಿ ಕ್ಲಬ್, ಕಾರ್ಕಳ ಮತ್ತು ನಿರ್ದೇಶಕರು, ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್, ಕಾರ್ಕಳ ಇವರು “ನಮ್ಮ ಬಾಳಿನಲ್ಲಿ ಮಣ್ಣು ಎಂಬುದು ಅತ್ಯಂತ ಪ್ರಾಥಮಿಕ ಅಂಶ. ಮಣ್ಣಿನ ಜೊತೆ ನಮ್ಮ ಸಂಬಂಧ ಗಟ್ಟಿಯಾಗಿರಬೇಕೆಂದರೆ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ “ಎಂದರು. ಇನ್ನೋರ್ವ ಅತಿಥಿ ಂಡಿ. ಸುನಿಲ್ ಕುಮಾರ್. ಜಿ. “ಕಲಿಕೆ ಎಂದರೆ ಪಾಠ ಮಾತ್ರವಲ್ಲ. ಅನುಭವವೂ ಕೂಡ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಶಿಸ್ತು, ಸಹಕಾರ ಮತ್ತು ಆತ್ಮವಿಶ್ವಾಸವನ್ನು ಕಲಿಯುತ್ತಾರೆ ಎಂದು ಅತಿಥಿ ನುಡಿಗಳನ್ನಾಡಿದರು. ಸಂಸ್ಥಾಪಕರಲ್ಲಿ ಓರ್ವರಾದ ವಿದ್ವಾನ್ ಗಣಪತಿ ಭಟ್, ಹಿರಿಯರೂ, ಉದ್ಯಮಿಗಳೂ ಆಗಿರುವ ಜಗದೀಶ್ ರವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಎಲ್ಲಾ ಅತಿಥಿವರೇಣ್ಯರನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅತಿಥಿಗಳಾದ ಚೇತನ್, ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ. ಬಿ., ಆದರ್ಶ ಎಂ.ಕೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಬೋಧಕ ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಲೋಹಿತ್ ಎಸ್.ಕೆ ಹಾಗೂ ಪ್ರಿಯಾಂಕ ತೀರ್ಥರಾಮ ರವರು ಕಾರ್ಯಕ್ರಮ ನಿರ್ವಹಿಸಿಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.








