
ಮಡಿಕೇರಿ ಆ.12 NEWS DESK : ಭಾರತ ಸ್ವಾತಂತ್ರ್ಯದ 78ನೇ ವರ್ಷಾಚರಣೆಯ ಪ್ರಯುಕ್ತ ಆ.15ರಂದು “ವಾಯ್ಸ್ ಆಫ್ ಕೊಡವ- (ವಿಒಕೆ)” ಮತ್ತು ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಸಹಯೋಗದಲ್ಲಿ ” ನೆಪ್ಪುರ ನಳತ್ ಮಾಂಜತ ಮೊಟ್ಟ್” – ”ever lasting footprints inthe shadow of memories’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಯುನೈಟೆಡ್ ಕೊಡವ ಆರ್ಗನೈಜೇಷನ್ – ಯುಕೊ, ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ನೀಡಿರುವ ಅವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಈ ನಾಡಿನ ಹಿರಿಯರು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ, ಭಾರತ ಸ್ವಾತಂತ್ರ್ಯದ ಇತಿಹಾಸದಲ್ಲಿ ಕೊಡಗು ತನ್ನದೇ ಅಧ್ಯಾಯವನ್ನು ಹೊಂದಿದೆ. ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ಹೋರಾಟಗಾರರನ್ನು ಕೊಡಗು ದೇಶಕ್ಕೆ ನೀಡಿದೆ. ಆದರೆ ಅವರಿಗೆ ಸರ್ಕಾರದಿಂದಾಗಲೀ, ಸಾರ್ವಜನಿಕರಿಂದಾಗಲಿ ಸೂಕ್ತವಾದ ಗೌರವ ನೀಡಲಾಗುತ್ತಿಲ್ಲ. ಸರ್ಕಾರದಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೆಲವೇ ಕೆಲವು ಹೋರಾಟಗಾರರನ್ನು ಗುರ್ತಿಸಿ ಗೌರವ ನೀಡಲಾಗುತ್ತಿದೆ. ಆದರೆ ಇಲ್ಲಿನ ನೈಜ ಹೋರಾಟಗಾರರಿಗೆ ಸ್ಥಳೀಯವಾಗಿ ಸಾರ್ವಜನಿಕರು ಹಾಗು ಸರ್ಕಾರದಿಂದ ಗೌರವ ನೀಡಿ ಸ್ಮರಿಸುವ ಕೆಲಸವಾಗಬೇಕಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಡಳಿತದವು ಸ್ಥಳೀಯ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು, ಸತ್ಯಾಗ್ರಹಿಗಳನ್ನು ಗುರ್ತಿಸಿ ಗೌರವಿಸಿ ಸ್ಮರಿಸಬೇಕು, ಇಲ್ಲವಾದಲ್ಲಿ ಈ ಮಣ್ಣಿನ ನೈಜ ಇತಿಹಾಸಗಳು ಅಳಿಸಿಹೋಗಲಿದೆ, ಇದು ಸಮಾಜವನ್ನುಅತ್ಯಂತ ಕೆಟ್ಟದಾದ ಪರಿಸ್ಥಿತಿಗೆ ಕಾರಣವಾಗಬಹುದಾದ ಆತಂಕವಿದೆ ಈ ನಿಟ್ಟಿನಲ್ಲಿ, ಕೊಡಗಿನ ನೈಜ ಹೋರಾಟಗಾರರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಿಚಾರ ವಿನಿಮಯ, ದೇಶಭಕ್ತಿ ಗೀತೆಗಳು ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೆನಪಿನ ನೆರಳಲ್ಲಿ ಹುದುಗಿರುವ ಆ ಸ್ವಾತಂತ್ರ್ಯದ ಹೆಜ್ಜೆಗುರುತುಗಳನ್ನು ಸರ್ಕಾರಕ್ಕೆ ನೆನಪಿಸುವ ಹಾಗು ಇಂದಿನ ಪೀಳಿಗೆಗೆ ಪರಿಚಯಿಸುವ ಪುಟ್ಟ ಪ್ರಯತ್ನ ಇದಾಗಿದೆ. ಹಾಗೆಯೇ ಆ ಹಿರಿಯರ ನೆನಪುಗಳು ಹಾಗು ಅವರ ತ್ಯಾಗ ಬಲಿದಾನಗಳನ್ನು ಮೆಲುಕು ಹಾಕುವ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಸಲಾಗಿದ್ದು ಇದು ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಯಾಗಲಿದೆ ಎಂದರು. ಆ.15 ರಂದು ಅಪರಾಹ್ನ 2 ಗಂಟೆಗೆ ಪೊನ್ನಂಪೇಟೆ ಸಾಯಿಶಂಕರ ಶಾಲೆಯ ಪಕ್ಕದಲ್ಲಿರುವ ‘ಕೇವ್ ಇನ್ನ್’ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಕೊಡಗಿನ ಗಾಂಧಿ ಪಂದ್ಯಂಡ ಬೊಳ್ಯಪ್ಪ ಹಾಗೂ ಸೀತಮ್ಮ ಬೊಳ್ಯಪ್ಪ ಅವರ ಮಗಳು ಬುಟ್ಟಿಯಂಡ ಕುಸುಮ್ ಅಯ್ಯಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆ. ಹೆಸರಾಂತ ಗಾಯಕರಾದ, ಚೆಕ್ಕೇರ ಪಂಚಮ್ ಬೋಪಣ್ಣ, ಬೊಟ್ಟೋಳಂಡ ಅಶಿತಾ ಬೋಪಣ್ಣ, ಪಳಂಗಂಡ ಮೇಘನಾ ನಾಚಪ್ಪ ಹಾಗು ರೀಟಾ ನಾಚಪ್ಪ,ಮತ್ತು ಜೂ.ಕಿಶೋರ್ ಕುಮಾರ್ ಖ್ಯಾತಿಯ ಮಾಳೇಟಿರ ಅಜಿತ್ ಪೂವಣ್ಣ ದೇಶಭಕ್ತಿ ಗೀತೆಗಳು ಮತ್ತು ಸಾಯಿ ಶಂಕರ್ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದು, ಬೋಡಂಗಡ ಜಗದೀಶ್, ಕೋಪುಡ ಸೌಮ್ಯ ಚಿಣ್ಣಪ್ಪ, ಕೋಟ್ರಮಾಡ ಶೀತಲ್ ಸುಮಂತ್ ಹಾಗು ಕಳ್ಳಿಚಂಡ ತನ್ವಿ ಉತ್ತಪ್ಪ, ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರಿಗೆ ನುಡಿ ನಮನಗಳನ್ನು ಸಮರ್ಪಿಸಲಿದ್ದಾರೆ. ಹಾಗೆಯೇ ಯುಕೊ ಹಾಗೂ ವಾಯ್ಸ್ ಆಫ್ ಕೊಡವ ಸದಸ್ಯರು ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.









