
ಮಡಿಕೇರಿ ಆ.16 NEWS DESK : ಕುಶಾಲನಗರದ ಜ್ಞಾನಗಂಗಾ ವಸತಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಮಳೆಯ ನಡುವೆಯು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ಸೈನಿಕರು ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿ ನವೀನ್ ರಾವ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿಕೊಳ್ಳುತ್ತಾ ಅವರಿಗೆ ಗೌರವ ಸೂಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ನಾವೆಲ್ಲರೂ ಇಂದು ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಸ್ವಾತಂತ್ರ್ಯ ಹಲವು ಮಹಾನ್ ನಾಯಕರ ಹೋರಾಟ ಮತ್ತು ತ್ಯಾಗ ಬಲಿದಾನಗಳಿಂದ ಬಂದಿದೆ. ಸ್ವಾತಂತ್ರ್ಯಕ್ಕಾಗಿ ಭಾರತೀಯರು ನಡೆಸಿದ ಹೋರಾಟ ಮತ್ತು ಅನುಭವಿಸಿದ ಸಂಕಷ್ಟಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ವಿವರಿಸಿದರು. ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳನ್ನು ಕಿತ್ತೊಗೆದು ಸಕಾರಾತ್ಮಕ ಭಾವನೆಯನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯದ ಗುರಿಯ ಕಡೆಗೆ ಸಾಗಬೇಕು. ಆ ಮೂಲಕ ಭಾರತದ ಅಮೂಲ್ಯ ರತ್ನಗಳಾಗಬೇಕೆಂದು ಕರೆ ನೀಡಿದರು. ಮಾಜಿ ಸೈನಿಕ ಸಿ.ಕೆ.ಪ್ರಭಾಕರ್ ಅವರು ಮಾತನಾಡಿ, ವಿದ್ಯಾರ್ಥಿಗಳು ನಿಷ್ಠೆ, ಪ್ರಾಮಾಣಿಕತೆ ಸಂಯಮವನ್ನು ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಎಂಬುವುದು ಒಂದು ದಿನದ ಸಂಭ್ರಮಾಚರಣೆಯಲ್ಲ. ಪ್ರತಿಯೊಬ್ಬರು ಪ್ರತಿಕ್ಷಣವು ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಹಿರಿಯರಾದ ನೀಲಕಂಠ ಅವರು ಮಾತನಾಡಿ, ಸರ್ವರ ಪ್ರಯತ್ನದಿಂದ ಸ್ವಾತಂತ್ರ್ಯ ಲಭಿಸಿದೆ, ಆದರೆ ಇಂದಿಗೂ ಶತ್ರುಗಳ ದಾಳಿಯನ್ನು ನೋಡುತ್ತಲೇ ಬಂದಿದ್ದೇವೆ. ಇಂತಹ ಸಂದರ್ಭದಲ್ಲಿ ಸೈನಿಕರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರ ಶ್ರಮವು ನಿಷ್ಪಲವಾಗಲು ಬಿಡದೆ ಎಲ್ಲರೂ ದೇಶದ ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದರು. ವಿದ್ಯಾರ್ಥಿಗಳ ಪಥಸಂಚಲನದ ಶಿಸ್ತನ್ನು ಶ್ಲಾಘಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ.ಸುಧೀರ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು. ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದರು. ನಮ್ಮವರಲ್ಲದವರನ್ನು ನಾವು ನಮ್ಮ ಮನೆಯಲ್ಲಾಗಲಿ, ದೇಶದೊಳಗಾಗಲಿ ಬಿಟ್ಟುಕೊಳ್ಳಬಾರದು. ನಾವೆಲ್ಲರೂ ದೇಶಭಕ್ತರಾಗುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ, ಸದಸ್ಯರಾದ ಅನಂತ ಪದ್ಮನಾಭ, ಶೋಭಾ ಅನಂತ ಪದ್ಮನಾಭ, ಮನು, ಇತರ ಸದಸ್ಯರು, ಪ್ರಾಂಶುಪಾಲರಾದ ಎಸ್.ಎಂ.ಸುಲೋಚನ, ಉಪ ಪ್ರಾಂಶುಪಾಲರಾದ ಸಿ.ಕೆ.ನಾಗರಾಜ್, ಶಿಕ್ಷಕ, ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. 2024-25ನೇ ಶೈಕ್ಷಣಿಕ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಗಳಿಸಲು ಕಾರಣಕರ್ತರಾದ ಸಮಾಜ ವಿಜ್ಞಾನ ಶಿಕ್ಷಕಿ ಕೆ.ನಮಿತ ಹಾಗೂ ಕನ್ನಡ ಶಿಕ್ಷಕ ಹೆಚ್.ಭಾಸ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಲಾಯಿತು.








