
ಕೊಡಗು ಸೆ.15 NEWS DESK : ಪಿರಿಯಾಪಟ್ಟಣದ ಮಲಬಾರ್ ಜುಮಾ ಮಸೀದಿ ಕಮಿಟಿ ವತಿಯಿಂದ ಎರಡು ದಿನಗಳ ಕಾಲ ನಡೆದ
ಮಜ್ದೇ ಮದೀನ ಮಿಲಾದ್ ಫೆಸ್ಟ್ ಸಮ್ಮೇಳನ ಸಂಭ್ರಮದಿಂದ ನಡೆಯಿತು.ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ವಾಗ್ಮಿ ಉಸ್ತಾದ್ ನೌಶಾದ್ ಬಾಖವಿ ಮಾತನಾಡಿ, ಗ್ರಾಮಗಳಲ್ಲಿ ನಡೆಯುವ ಹಬ್ಬ ಆಚರಣೆಗಳ ಮೂಲಕ ಶಾಂತಿ ಸಹ ಬಾಳ್ವೆಯ ಸಂದೇಶದೊಂದಿಗೆ ಸೌಹಾರ್ದತೆ ನೆಲಸುವಂತಾಗಲಿ. ಮಿಲಾದ್ ಆಚರಣೆ ಸಂದರ್ಭದಲ್ಲಿ ಎಲ್ಲಾ ಬಾಂಧವರು ಪಾಲ್ಗೊಳ್ಳುವಿಕೆಯೊಂದಿಗೆ ಪಿರಿಯಾಪಟ್ಟಣ ಗ್ರಾಮ ಮಾದರಿಯಾಗಿದೆ. ಪ್ರತಿಯೊಬ್ಬರು ಶಾಂತಿ ಸಹ ಬಾಳ್ವೆಯೊಂದಿಗೆ ನೆಮ್ಮದಿಯ ಜೀವನ ನಡೆಸಿದ್ದಲ್ಲಿ ಸೌಹಾರ್ದತ್ತ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ ಅವರು ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಜಾಗೃತಿ ಮೂಡಿಸಬೇಕಾಗಿದೆ. ಯುವ ಸಮೂಹ ದುಶ್ಚಟಗಳಿಂದ ದೂರವಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು. ಸಮಸ್ತ ಕೇಂದ್ರ ಮುಸಾವರ ಸದಸ್ಯ ಹಾಗೂ ಕೊಡಗು ಉಪ ಖಾಝಿ ಎಂ.ಎಂ.ಅಬ್ದುಲ್ಲಾ ಫೈಝಿ
ಕಾರ್ಯಕ್ರಮ ಉದ್ಘಾಟಿಸಿ ದುವಾ ನೇತೃತ್ವ ವಹಿಸಿದ್ದರು. ಮಲಬಾರ್ ಮಸೀದಿ ಕಮಿಟಿ ಅಧ್ಯಕ್ಷ ಎಂ.ಪಿ.ಮಹಮ್ಮದ್ ರಾಫಿ ಮಾತನಾಡಿ, ಹಲವು ವರ್ಷಗಳಿಂದಲೂ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ಧಾರ್ಮಿಕ ಪಂಡಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಾದಿಯವರ ಜೀವನ ಸಂದೇಶವನ್ನು ಸಾರುವ ಮೂಲಕ ಮಾದಕ ವ್ಯಸನ ಮುಕ್ತ ಗ್ರಾಮವನ್ನಾಗಿಸಲು ಸಲಹೆ ನೀಡಿದರು. ವಿದ್ಯಾರ್ಥಿಗಳ ದಪ್ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಎಲ್ಲಾ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು. ಮಸೀದಿಯ ಖತೀಬ್ ಮಜೀದ್ ಬಾಖವಿ, ಮಸೀದಿ ಸಮಿತಿ ಉಪಾಧ್ಯಕ್ಷ ಕೆ.ಎ.ಅಬ್ಬಾಸ್ , ಪ್ರಧಾನ ಕಾರ್ಯದರ್ಶಿ ಪಿ.ಹೆಚ್. ಸೈದು, ಕಾರ್ಯದರ್ಶಿ ರಾಶೀದ್, ಖಜಾಂಚಿ ಸಮೀರ್ ಸೇರಿದಂತೆ ಕೊಡಗು ಜಿಲ್ಲೆಯ ಹಲವು ಮುಖಂಡರುಗಳು ಸೇರಿದಂತೆ ಗ್ರಾಮದ ಗಣ್ಯರು ಮತ್ತಿತರರು ಹಾಜರಿದ್ದರು.









