
ವಿರಾಜಪೇಟೆ ಅ.10 NEWS DESK : ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪುರಸಭೆ ಸದಸ್ಯರಾದ ಎಸ್.ಹೆಚ್.ಮತೀನ್ ಹೇಳಿದರು. ವಿರಾಜಪೇಟೆಯ ಮೌಂಟೇನ್ ವ್ಯೂವ್ ಶಾಲೆಯಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಐಎಎಸ್ ಮತ್ತು ಐಪಿಎಸ್ ತರಬೇತಿ ಕೇಂದ್ರ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತರಬೇತಿ ತಯಾರಿ ನಡೆಸುವ ಕುರಿತು ಮತ್ತು ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯನ್ನು ಹೊಂದಬೇಕೆಂಬ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇದು ಕೊಡಗಿನಲ್ಲಿಯೇ ಮೊಟ್ಟಮೊದಲು ನಮ್ಮ ವಿರಾಜಪೇಟೆಯಲ್ಲಿ ಪ್ರಾರಂಭವಾಗಿದೆ ಎಂದು ಭಾವಿಸುವುದಾಗಿ ಹೇಳಿದರಲ್ಲದೆ. ನಮ್ಮ ಕಾಲದಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಸ ಕೇವಲ ಕನಸಾಗಿತ್ತು. ಈಗಿನ ವಿದ್ಯಾರ್ಥಿಗಳಿಗೆ ಇದು ಕೈಗೆಟುಕುವಂತ್ತಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಸಾಹಿತಿಗಳಾದ ರಜಿತ ಕಾರ್ಯಪ್ಪ ಮಾತನಾಡಿ, ಬಹುತೇಕ ಕೇಂದ್ರಗಳಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪದವಿ ಹಂತದಲ್ಲಿ ತರಬೇತಿ ನೀಡಿದರೆ ಈ ಶಾಲೆ ಪ್ರೌಢಶಾಲೆಯಲ್ಲಿ ತರಬೇತಿಯನ್ನ ನೀಡುತ್ತಿದೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಶಾಲೆಯಾಗಿ ಹೊರಹೊಮ್ಮಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ತರಬೇತಿ ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಬೇಕು. ದುಶ್ಟಟಗಳಿಗೆ ಬಲಿಯಾಗದೆ ಉತ್ತಮ ಜೀವನ ನಡೆಸುವಂತಾಗಬೇಕು. ಸಮಾಜಕ್ಕೆ ಮಾದರಿಯಾಗಬೇಕು. ವಿದ್ಯೆಯಿಂದ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಹಾಗಾಗಿ ವಿದ್ಯೆಗೆ ಮಹತ್ವ ನೀಡಿ ಎಂದು ಹೇಳಿದರು. ಶಾಲಾ-ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿದರೆ ಹೊಸ ಯೋಚನಾ ಲಹರಿ ಬೆಳೆಯಲಿದೆ ಯುಪಿಎಸ್ಸಿ ಕೆಪಿಎಸ್ಸಿ ಐಎಎಸ್ ಪರೀಕ್ಷೆ ಬರೆಯುವ ಪದವೀಧರರಲ್ಲಿ ನಿರಂತರ ಅಧ್ಯಯನಶೀಲತೆ ಇರಬೇಕು. ಪುಸ್ತಕಗಳನ್ನು ಓದಿ ಪ್ರಸಕ್ತ ವಿದ್ಯಾಮಾನಗಳನ್ನು ಅರಿತುಕೊಳ್ಳಬೇಕು ಎಂದರು. ಪುರಸಭೆಯ ಮಾಜಿ ಸದಸ್ಯೆ ತಸ್ಲಿಂ ಅಕ್ತರ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡದೆ ವಿದ್ಯೆಯೆಡೆಗೆ ಗಮನ ಹರಿಸಬೇಕು. ಇಂತಹ ಒಂದು ಉತ್ತಮ ತರಬೇತಿಯನ್ನು ಶಾಲೆಯಲ್ಲಿ ನೀಡುತ್ತಿರುವುದು ಶ್ಲಾಘನೀಯವೆಂದರು. ಸಹಕಾರ ಸಂಘದ ಅಧ್ಯಕ್ಷ ಅಲ್ತಾಫ್ ಮಾತನಾಡಿ ಮೌಂಟೇನ್ ವ್ಯೂ ಶಾಲೆ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಶಾಫಿ ಅವರು ವಿದ್ಯಾರ್ಥಿಗಳಿಗೆ ಶುಭ ಕೋರಿ ತರಬೇತಿ ಕಾರ್ಯದ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭ ತಂತ್ರಜ್ಞಾನದ ಬಗೆಗಿನ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಮತ್ತು ತಂತ್ರಜ್ಞಾನ ಯಂತ್ರದ ಉದ್ಘಾಟನೆ ಮಾಡಲಾಯಿತು. ರೋಬೋಟ್ ತಯಾರಿಕೆಯಲ್ಲಿ ವಿಜೇತ ಇಬ್ಬರೂ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಸಯ್ಯದ್ ನೆಕಾತ್ ಅಸ್ಮಾ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಕಲಿಕೆಯ ಹಂತದಲ್ಲಿ ಕೌಶಲ ಶಿಕ್ಷಣ ನೀಡುವುದು, ಉದ್ಯಮದ ಕೌಶಲಗಳನ್ನು ವೃದ್ಧಿಸುವ ಮೂಲಕ ಉತ್ತಮ ಉದ್ಯೋಗ ಅವಕಾಶ ಕಲ್ಪಿಸುವುದು ಪ್ರಾಯೋಗಿಕ ಕಲಿಕೆಗೂ ಉತ್ತೇಜನ ನೀಡುವುದು ಮುಂದಿನ ವೃತ್ತಿಗಳ ಆಯ್ಕೆಗೆ ನೆರವಾಗುತ್ತದೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಕಶ್ಮೀರಾ ಸಿಮ್ರಾನ್ ಮಾತನಾಡಿ, ಬಡವರು ಹಿಂದುಳಿದವರ ಮಕ್ಕಳು ಪಾಲಕರ ವೃತ್ತಿಯನ್ನೇ ಮೆಚ್ಚಿ ಕೂರಬೇಕಿಲ್ಲ. ಸರಕಾರಿ ಹುದ್ದೆ ಅಥವಾ ಸ್ವಾವೋದ್ಯಮ ಶುರು ಮಾಡುವ ಬಗ್ಗೆ ಕನಸು ಕಾಣಬೇಕು ಸೋಲನ್ನು ಕೂಡ ಸ್ವೀಕರಿಸುವ ಮನೋಭಾವ ರೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆಯ ಕನಸು ನನಸು ಮಾಡುವ ಉದ್ದೇಶದಿಂದ ಈ ತರಬೇತಿ ನೀಡಲು ಯೋಜನೆ ಹಾಕಿದ್ದೇವೆ ಎಂದರು. ಈ ಸಂದರ್ಭ ಆಡಳಿತಾಧಿಕಾರಿ ಕರೀನಾ ಸರೋಶ್ ಸೇರಿದಂತೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.









