
ಸುಂಟಿಕೊಪ್ಪ, ಜು.22 NEWS DESK : ನಾವು ಮಾನವ ಸೇರಿದಂತೆ ಎಲ್ಲಾ ಜೀವಿಗಳ ಅಗತ್ಯತೆಗಳನ್ನು ಪೂರೈಸಲು ಮತ್ತು ಮುಂದಿನ ಭವಿಷ್ಯದ ಬಳಕೆಗಾಗಿ ನೀರನ್ನು ಉಳಿಸುವ ಅಭ್ಯಾಸವನ್ನು ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ. ಈ ದಿಸೆಯಲ್ಲಿ ನಾವು ವೈಜ್ಞಾನಿಕ ಕ್ರಮದಲ್ಲಿ ನೀರಿನ ಸಂರಕ್ಷಣೆಗೆ ವಿಶೇಷ ಗಮನಹರಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆದ ಪರಿಸರ ಕಾರ್ಯಕ್ರಮಗಳ ಸಂಘಟಕರೂ ಆದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೇಳಿದರು. ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿಯಿಂದ ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಮತ್ತು ಪಾವನಿ ಇಕೋ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ: 2026 ಅಂಗವಾಗಿ “ನೀರಿನ ಸಂರಕ್ಷಣೆ” ಕುರಿತು ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ “ಉತ್ತಮ ಭವಿಷ್ಯಕ್ಕಾಗಿ ಜಲ ಸಂರಕ್ಷಣೆ” ಕುರಿತು ಮಾಹಿತಿ ನೀಡಿದರು. ನಾವು ಯಾವುದೇ ಸಂದರ್ಭದಲ್ಲೂ ನೀರನ್ನು ಪೋಲು ಮಾಡದೇ ನೀರನ್ನು ಮಿತ ಬಳಕೆ ಮಾಡುವ ಮೂಲಕ ನೀರಿನ ಯಥಾಸ್ಥಿತಿ ಕಾಪಾಡುವ ದಿಸೆಯಲ್ಲಿ ಜನರಲ್ಲಿ ನೀರಿನ ಸಂರಕ್ಷಣೆ ಮತ್ತು ಪರಿಸರ ಕಾಳಜಿ ಬಗ್ಗೆ ಜಾಗತಿ ಮೂಡಿಸುವ ದಿಸೆಯಲ್ಲಿ ಇಂತಹ ಜಾಗೃತಿ ಅಭಿಯಾನ ಸಂಘಟಿಸಲಾಗಿದೆ ಎಂದರು. ನೀರು ಅಮೂಲ್ಯವಾಗಿದ್ದು, ಉಳಿಸಿ ಬಳಸುವುದು ಅತೀ ಮುಖ್ಯ. ನೀರಿನ ಮಿತ ಬಳಕೆಯಿಂದ ಮಾನವನ ಉಳಿವು ಸಾಧ್ಯ. ನೀರಿನ ಮಿತಬಳಕೆ ಮತ್ತು ಮರು ಬಳಕೆಯಲ್ಲಿ ಎಲ್ಲರೂ ಪಾಲ್ಗೊಂಡು ನಾಳೆಯ ಉತ್ತಮ ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸಲು ಸಂಕಲ್ಪ ಮಾಡಬೇಕು ಎಂದು ಪ್ರೇಮಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನೀರಿನ ಸಂರಕ್ಷಣೆ ಎಂದರೆ ನಮ್ಮ ಶುದ್ಧ ನೀರಿನ ಸಂಪನ್ಮೂಲಗಳನ್ನು ಅತ್ಯಂತ ಸುಸ್ಥಿರ ರೀತಿಯಲ್ಲಿ ನಿರ್ವಹಿಸುವ ಮೂಲಕ ಮತ್ತು
ಶುದ್ಧ ನೀರಿನ ಲಭ್ಯತೆಯ ಆಧಾರದ ಮೇಲೆ ಭವಿಷ್ಯದ ನೀರಿನ ಬೇಡಿಕೆಗಳನ್ನು ಪೂರೈಸಲು ಜಲಗೋಳವನ್ನು ರಕ್ಷಿಸುವ ವಿಧಾನ ಎಂದರು. ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ (RAA) ವು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ಗುರಿ ಹೊಂದಿದ್ದು, ಅವರಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದೊಂದಿಗೆ ಅವರಲ್ಲಿ ಸಂಶೋಧನಾ ಪ್ರವೃತ್ತಿ ಮತ್ತು ಪ್ರೋತ್ಸಾಹ ಬೆಳೆಸಲು ಉತ್ತೇಜಿಸಲಾಗುತ್ತಿದೆ ಎಂದು ಟಿ.ಜಿ.ಪ್ರೇಮಕುಮಾರ್ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಸೋಮಯ್ಯ ಮಾತನಾಡಿ, ನೀರನ್ನು ಸಂರಕ್ಷಣೆ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಎಲ್ಲರೂ ಇದರಲ್ಲಿ ಭಾಗಿಯಾಗುವ ಮೂಲಕ ನೀರನ್ನು ಉಳಿಸಲು ಪಣ ತೊಡಬೇಕು ಎಂದರು. ತಮ್ಮನ್ನು ಸದಾ ಪರಿಸರ ಸಂರಕ್ಷಣಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿರುವ ಪರಿಸರ ಪ್ರೇಮಿ ಟಿ.ಜಿ.ಪ್ರೇಮಕುಮಾರ್ ಅವರು ಹಮ್ಮಿಕೊಳ್ಳುವ ಪರಿಸರ ಜಾಗೃತಿ ಕಾರ್ಯಕ್ರಮಗಳಿಗೆ ಎಲ್ಲರೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. :: ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ :: ಜಲ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದ ಟಿ.ಜಿ.ಪ್ರೇಮಕುಮಾರ್, ನೀರಿನ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು
ಕೈಗೊಳ್ಳಬೇಕಾದ ದೃಢ ಸಂಕಲ್ಪ ಕುರಿತು ವಿವರ ಮಾಹಿತಿ ನೀಡಿದರು. ಮಡಿಕೇರಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಎನ್.ಪಿ.ನವೀನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಪ್ರತಿನಿತ್ಯ ಉತ್ತಮ ಪರಿಸರ ಹವ್ಯಾಸ ಚಟುವಟಿಕೆಗಳಲ್ಲಿ ಪಾಲ್ಹೊಂಡು ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು. ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಂ.ರಮೇಶ್ ಮಾತನಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಎಚ್.ಪಿ. ಸೈದಾಲವಿ, ಪಾವನಿ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಡಿ.ಯು.ಬಿಂದುಕುಮಾರಿ, ಶಿಕ್ಷಕರಾದ ಕೆ.ಬಿ.ರಾಧಾಕೃಷ್ಣ, ಪಿ.ಎಚ್ .ರಜಿಯಾ, ಆರ್.ಯಶೋರಾಣಿ, ಕೆ. ಎಚ್ . ಗಾಯಿತ್ರಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ
ದೇಲಂಪಾಡಿ ಎಂ.ಚಿನ್ನಪ್ಪ, ಅತಿಥಿ ಶಿಕ್ಷಕರಾದ ಪಿ ಆರ್ .ವಿಮಲಾ, ಎನ್. ಪಿ. ವಾಣಿಶ್ರೀ ಇದ್ದರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. :: ಪರಿಸರಕ್ಕಾಗಿ ನಾವು : ಸಂಭ್ರಮ :: ಇದೇ ವೇಳೆ “ನಮ್ಮ ನಡೆ ಹಸಿರೆಡೆಗೆ” : “ಪರಿಸರಕ್ಕಾಗಿ ನಾವು” ಕಾರ್ಯಕ್ರಮ: ದಡಿ ಮಕ್ಕಳ ಪರಿಸರ ಸಂಭ್ರಮ: 2026 ರ ಅಂಗವಾಗಿ ವಿದ್ಯಾರ್ಥಿಗಳು ನೆಲ- ಜಲ, ಪರಿಸರ, ಜೀವ- ವೈವಿಧ್ಯ ಹಾಗೂ ಜಲ ಸಂರಕ್ಷಣೆ ಕುರಿತು ಮಾಹಿತಿ ನೀಡುವ ಫಲಕಗಳು ಹಾಗೂ ಘೋಷ ವಾಕ್ಯ ಹಿಡಿದಿದ್ದ ವಿದ್ಯಾರ್ಥಿಗಳು ಶಾಲಾ ಅಂಗಳದಲ್ಲಿ ಹೆಜ್ಜೆ ಹಾಕಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೇ ಉಸಿರು- ಜಲವೇ ಜೀವಜಲ, ಉಳಿಸಿರಿ ಅಂತರ್ಜಲ , ಕುಡಿಯಿರಿ ಶುದ್ಧಜಲ, ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಮೊಳಗಿಸಿ ಗ್ರಾಮದಲ್ಲಿ ಜನಜಾಗೃತಿ ಮೂಡಿಸಿದರು.









