
ಕಣಿವೆ ಅ.13 NEWS DESK : ಓಣಂ ಆಚರಣೆ ಕೇರಳೀಯರ ಪ್ರಮುಖ ಹಬ್ಬವಾಗಿದ್ದು, ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸಿ ಸಾಮರಸ್ಯ ಬೆಸೆಯುವ ಹಾಗೂ ಸಂಬಂಧಗಳನ್ನು ಉದ್ದೀಪನಗೊಳಿಸುವ ಆಚರಣೆಯಾಗಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು. ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ಕಾನ್ ಬೈಲ್ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂರನೇ ವರ್ಷದ ಓಣಂ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಯಾವುದೇ ಜಾತಿ ಜನಾಂಗದ ಆಚರಣೆಗಳು ಅವರ ಸಂಪ್ರದಾಯಗಳನ್ನು ಬಿಂಬಿಸುವಂತಿರಬೇಕು. ಮನುಷ್ಯ ಮನುಷ್ಯರಲ್ಲಿ ಉತ್ತಮ ಸಂಬಂಧಗಳ ಉದ್ದೀಪನದ ಜೊತೆಗೆ ದೇಶಭಕ್ತಿ ಹಾಗೂ ದೇಶ ಪ್ರೇಮ ಮೊಳಗಿಸಲು ಇಂತಹ ಅಚರಣೆಗಳು ಕಾರಣೀಭೂತವಾಗುತ್ತವೆ ಎಂದರು. ನಾಕೂರು ಶಿರಂಗಾಲ ಗ್ರಾಪಂ ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ ಓಣಂ ಆಚರಣೆ ಹಿಂದೂ ಧರ್ಮೀಯ ಎಲ್ಲರನ್ನು ಒಂದೆಡೆ ಸೇರಿಸುವ ಹಾಗೂ ಸಾಮರಸ್ಯ ಉಂಟುಮಾಡುವ ಆಚರಣೆಯಾಗಿದೆ ಎಂದರು. ಹಿಂದೂ ಮಲೆಯಾಳಿ ಸಮಾಜದ ಸಲಹೆಗಾರ ಟಿ.ಆರ್.ವಾಸುದೇವನ್ ಮಾತನಾಡಿ, ಓಣಂ ಆಚರಣೆಯ ಮೂಲಕ ಮಲೆಯಾಳಿ ಭಾಷಿಗರು ಒಂದೆಡೆ ಸೇರಿ ನಮ್ಮ ಆಚಾರ, ವಿಚಾರಗಳು, ಕಲೆ, ಸಂಸ್ಕೃತಿಗಳನ್ನು ಬಿಂಬಿಸುವ ಕೆಲಸವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಕೆ.ಬಿ.ರಾಜ, ಉಪಾಧ್ಯಕ್ಷ ಬಿ.ಇ.ಸತೀಶ್, ಸದಸ್ಯರಾದ ಪ್ರೇಮ, ಅರುಣಕುಮಾರಿ, ಸೀತೆ, ಪಿಡಿಒ ಅಸ್ಮಾ, ಕಾನ್ ಬೈಲ್ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ಮೂರ್ತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಬಾಲಕೃಷ್ಣರೈ, ಸೋಮವಾರಪೇಟೆ ತಾಲ್ಲೂಕು ಹಿಂದೂ ಮಲೆಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಕೆ.ಡಿ.ಪ್ರಕಾಶ್, ಕಾಫಿ ಬೆಳೆಗಾರರಾದ ನೀಲಮ್ಮ ಪೆಮ್ಮಯ್ಯ, ಅಡಿಕೇರಿ ಧರ್ಮಪ್ಪ, ಧರ್ಮಸ್ಥಳ ಯೋಜನೆಯ ಸೇವಾ ಪ್ರತಿನಿಧಿ ಯಶೋಧ, ನಾಕೂರು ಶಿರಂಗಾಲ ಕೊಡವ ಕೂಟದ ಅಧ್ಯಕ್ಷ ಯಶು ತಮ್ಮಯ್ಯ, ಗೌಡ ಸಮಾಜದ ಅಧ್ಯಕ್ಷ ಎಂ.ಎಂ.ಕಾರ್ಯಪ್ಪ, ಬೆಳ್ಳರಿಕಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ.ಬೋಪಯ್ಯ, ಮಳೂರು ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಬಿ.ಗಣೇಶ್, ಕಾಂಗ್ರೆಸ್ ಮುಖಂಡರಾದ ಪಿ.ಎಂ.ಬಿಜು, ಸ್ಯಾಮ್ಸನ್, ಕಾನ್ ಬೈಲ್ ರಾಮಮಂದಿರ ಅಧ್ಯಕ್ಷ ಬಿ.ಜಿ.ನರೇಂದ್ರ, ವಿ.ಕೆ.ಗಂಗಾಧರ್ ಇದ್ದರು. ಇದೇ ಸಂದರ್ಭ ಮಲೆಯಾಳಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಳಿಕ ಸಮಾಜದ ಮಕ್ಕಳಿಗೆ ನೃತ್ಯ ಸ್ಪರ್ಧೆ ಹಾಗೂ ಮಹಿಳೆಯರಿಗೆ ಪೂಕಳಂ ಬಿಡಿಸುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ತಾಪಂ ಮಾಜಿ ಸದಸ್ಯ ರಾದ ಶಂಕರನಾರಾಯಣ ಸ್ವಾಗತಿಸಿದರು. ಕೆ.ಎಂ.ವಿನೀಶ್ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನಾ ಬೆಳಗ್ಗೆ ಕಲ್ಲೂರು ಗ್ರಾಮದ ಬಸವೇಶ್ವರ ದೇವಾಲಯದ ಆವರಣದಿಂದ ಚಂಡೆವಾದ್ಯದೊಂದಿಗೆ ಹಮ್ಮಿಕೊಂಡಿದ್ದ ಓಣಂ ಮೆರವಣಿಗೆಯನ್ನು ಸಮಾಜದ ಅಧ್ಯಕ್ಷ ಕೆ.ಬಿ.ರಾಜ. ಹಾಗೂ ಗ್ರಾಪಂ ಸದಸ್ಯೆ ರಾಧಾಮಣಿ ಉದ್ಘಾಟಿಸಿದರು. ಕಲ್ಲೂರಿನಿಂದ ಹೊರಟ ಮೆರವಣಿಗೆ ಕಾನ್ ಬೈಲು ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಮಲೆಯಾಳಿ ಸಮಾಜದ ಮಹಿಳೆಯರು,ಮಕ್ಕಳು ಹಾಗೂ ಪುರುಷರು ಸಾಂಪ್ರದಾಯಿಕ ಉಡುಗೆ ತೊಟ್ಟು ಹೆಜ್ಜೆ ಇಟ್ಟರು. ಕಾರ್ಯಕ್ರಮದಲ್ಲಿ ಮಾವೇಲಿ ಛದ್ಮವೇಶಧಾರಿಯಾಗಿ ಕೇರಳದ ಮಟ್ಟಾನೂರಿನ ಅಭಿ ಗಮನ ಸೆಳೆದರು. ಕಾರ್ಯಕ್ರಮಕ್ಕೂ ಮುನ್ನಾ ಶಾಲಾ ಕೊಠಡಿಯಲ್ಲಿ ಸಮಾಜದ ಮಹಿಳೆಯರು ಹಾಗೂ ಮಕ್ಕಳು ಶ್ರದ್ಧಾಭಕ್ತಿಯಿಂದ ಬಿಡಿಸಿದ್ದ ಪೂಕಳಂ ನೋಡುಗರ ಗಮನ ಸೆಳೆಯಿತು. ಕೇರಳದ ರಾಧಾಕೃಷ್ಣನ್ ತಂಡದವರು ಸಿದ್ದಪಡಿಸಿದ್ದ ಓಣಂ ಸದ್ಯ ನೆರೆದಿದ್ದ ಸಮಸ್ತರ ಬಾಯಿ ರುಚಿ ಇಮ್ಮಡಿಗೊಳಿಸಿತು.









