
ಮಡಿಕೇರಿ ಅ.14 NEWS DESK : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ನ (ನೀಮಾ) ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ್ವಂತರಿ ಜಯಂತಿ ಮತ್ತು ಬೆಳ್ಳಿ ಮಹೋತ್ಸವ ಸಮಾರಂಭ ಅ.18 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ನೀಮಾ ಅಧ್ಯಕ್ಷ ಡಾ.ರಾಜಾರಾಮ ಎ.ಆರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ಮತ್ತು ಧನ್ವಂತರಿ ಹವನ ನಡೆಯಲಿದೆ. 10 ಗಂಟೆಗೆ ಗಣ್ಯರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನೀಮಾದ ಮಾಜಿ ಅಧ್ಯಕ್ಷರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಸಹಸ್ರಾಕ್ಷ, ಉಕ್ಕಿನಡ್ಕ ಡಾ.ಜಯ ಗೋವಿಂದ ಯು. ‘ಸಮಾಜದ ಮೇಲೆ ನೀಮಾ’ದ ಪ್ರಭಾವ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಅಲ್ಲದೆ ‘ನೀಮಾ’ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ಹೊರ ತರಲಾಗುತ್ತಿರುವ ಸ್ಮರಣ ಸಂಚಿಕೆಯನ್ನೂ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರು ಕೆಎಯುಪಿಯ ಡಾ.ಎಂ.ಡಿ.ರಫಿ ಹಕೀಂ ಹಾಗೂ ಕೆಎಸ್ಬಿ ನೀಮಾ ಅಧ್ಯಕ್ಷರು ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ. *ಸನ್ಮಾನ* ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಮಾಜ ಸೇವೆ ರವೀಂದ್ರ ರೈ, ಯೋಗ ಗುರು ಕೆ.ಕೆ.ಮಹೇಶ್, ತಣಲ್ ಸಂಸ್ಥೆಯ ಮಹಮ್ಮದ್, ವನ್ಯಜೀವಿ ಪಶುವೈದ್ಯ ಡಾ.ಬಿ.ಸಿ.ಚಿಟ್ಟಿಯಪ್ಪ, ಲೀಡ್ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ, ಲೇಖನಿ ಮೂಲಕ ಶಾಂತಿ ಸಾರುವ ಕೆ.ಟಿ.ವತ್ಸಲಾ, ಕೊಡಗು ರಕ್ತದಾನಿಗಳ ಸಂಘದ ಎಂ.ಎ.ರಫೀಕ್, ಕಾಮಧೇನು ಗೋ ಶಾಲೆಯ ಕಾವಾಡಿ ಕಾನ ಕೃಷ್ಣ ಭಟ್, ಪಕ್ಷಿ ಮತ್ತು ವನ್ಯಜೀವಿ ಸಂರಕ್ಷಣೆಯ ಅಭಿಯಾನದ ಡಾ.ಎಸ್.ವಿ.ನರಸಿಂಹನ್, ಮೇಕೇರಿಯ ಸಾಯಿ ಮಂದಿರದ ಅಧ್ಯಕ್ಷ ಸೋಮಣ್ಣ, ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಜ್ಯೋತಿ ಸೋಮಯ್ಯ, ನೀಮಾ ಹರ್ಬಲ್ ಗಾರ್ಡನ್ ನ ಭೂದಾನಿ ಗಜರಾಜ ನಾಯ್ಡು, ಲಯನ್ಸ್ ಬಿಲ್ಡಿಂಗ್ ಸಮಿತಿಯ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಅಕ್ಷಯ ಡಿಸ್ಟಿಬ್ಯೂಟರ್ಸ್ನ ಚಂದ್ರಶೇಖರ್ ಭಟ್, ಪ್ರಮುಖರಾದ ಆಮಿಲ್, ಚರಕ್ ಫಾರ್ಮ, ಡಾ.ಮಹೇಶ್ ಶರ್ಮ, ಡಾ.ಮಮತ ಕೆ.ವಿ, ಡಾ.ಪುಷ್ಪಕಲಾ ಬದರಿ ನಾರಾಯಣ, ಡಾ.ಅದ್ವೈತ್ ಗೋಹಿಲ್, ಡಾ.ಕೀರ್ತನ, ಡಾ.ನವೀನ್ ವರ್ಗೀಸ್, ಡಾ.ರವಿ ಪ್ರಕಾಶ್ ಕಜೆ, ಡಾ.ದೀಪಾಮಾಲ ತ್ರಿಪತಿ ಹಾಗೂ ಡಾ.ಮುಮ್ತಾಜ್ ಆಲಿ ಅವರುಗಳನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 3.30 ಗಂಟೆಗೆ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸ್ತ್ರೀ ರೋಗ ತಜ್ಞೆ ಡಾ.ಜಯಲಕ್ಷ್ಮಿ ಪಾಟ್ಕರ್, ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್, ಕೆವಿಜಿ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ್ ಹಾಗೂ ಕೊಡಗು ಡಿಎಒ ಡಾ.ಎಂ.ಶೈಲಜಾ ಪಾಲ್ಗೊಳ್ಳಲಿದ್ದಾರೆ. ಸಂಜೆ 4.30 ಗಂಟೆಯಿಂದ 5 ಗಂಟೆಯ ವರೆಗೆ ‘ವೈದ್ಯಕೀಯ ನಿರ್ಲಕ್ಷ್ಯ ಮತ್ತು ವೈದ್ಯರ ಅರಿವು’ ವಿಷಯದ ಕುರಿತು ಕೊಡಗು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿ.ಕೆ.ಬಸವರಾಜ್ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಲಿದ್ದಾರೆ. ನಂತರ ನೀಮಾ ಕೊಡಗು ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಡಾ.ರಾಜಾರಾಮ ಎ.ಆರ್. ಮಾಹಿತಿ ನೀಡಿದ್ದಾರೆ. *ಆರೋಗ್ಯ ಶಿಬಿರ* ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ನ ಸಹಯೋಗದೊಂದಿಗೆ ‘ಆಯುರ್ವೇದ ಆರೋಗ್ಯ ಶಿಬಿರ’ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಆಯುರ್ವೇದಿಕ್ ಪೋಸ್ಟರ್ಸ್, ಸ್ಟಾಲ್ಸ್ ಮತ್ತು ಔಷಧೀಯ ಸಸ್ಯಗಳ ಪ್ರದರ್ಶನ ಕೂಡ ಇರಲಿದೆ ಎಂದು ತಿಳಿಸಿದ್ದಾರೆ.









