
ಮಡಿಕೇರಿ NEWS DESK ಅ.15 : ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ರಚಿಸಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರಕಥೆ ಪುಸ್ತಕ ಮತ್ತು ಚಿತ್ರಪಟ ಕಾವೇರಿ ನದಿಯ ಉಗಮಸ್ಥಾನ ಪವಿತ್ರ ಕ್ಷೇತ್ರ ತಲಕಾವೇರಿಯ ಸನ್ನಿಧಿಯಲ್ಲಿ ಪೂಜಾವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆಗೊಂಡಿತು. ಮಡಿಕೇರಿ ಐಶ್ವರ್ಯ ಕ್ರಿಯೇಶನ್ಸ್ ನ ದ್ವಿತೀಯ ಪ್ರಕಟಣೆಯಾಗಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರಕಥೆ ಪುಸ್ತಕ 1995 ರಲ್ಲಿ ಕನ್ನಡ, ಕೊಡವ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಜಲವರ್ಣ ಕಲಾಕೃತಿಯೊಂದಿಗೆ ನಿರ್ಮಾಣವಾಗಿದ್ದ ಚಿತ್ರಕಥೆ ಪುಸ್ತಕ ಇದೀಗ ದ್ವಿತೀಯ ಮುದ್ರಣ ಹಾಗೂ ಪ್ರಕಟಣೆ ನವ್ಯ ತಂತ್ರಜ್ಞಾನದೊAದಿಗೆ ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಈ ಬಾರಿ ಕನ್ನಡ, ಅರೆಭಾಷೆ, ಇಂಗ್ಲೀಷ್ ಮತ್ತು ತಮಿಳು ಭಾಷೆಯಲ್ಲಿ ಮುದ್ರಣವಾಗಿರುವುದು ವಿಶೇಷ. ವಿವಿಧ ಭಾಷಿಕರಿಗೆ ಹಾಗೂ ಮಕ್ಕಳಿಂದ, ವಯೋವೃದ್ಧರವರೆಗೂ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರಕಥೆ ಅತ್ಯಂತ ಸರಳವಾಗಿ ತಿಳಿದುಕೊಳ್ಳುವಂತಾಗಿದೆ. 2025ರ ಮಹಾಶಿವರಾತ್ರಿಯಂದು ಕಾವೇರಿಮಾತೆಯ ಶ್ಲೋಕವನ್ನು ಆಧರಿಸಿ ಬಿ.ಕೆ.ಗಣೇಶ್ ರೈ ಅವರು ರಚಿಸಿದ ಪದ್ಮಾಸಿನ ಕುಳಿತಿರುವ ಭಂಗಿಯ ಶ್ರೀ ಕಾವೇರಿಮಾತೆಯ ವರ್ಣರಂಜಿತ ಚಿತ್ರ ಲೋಕಾರ್ಪಣೆಯಾಗಿತ್ತು. ಇದೀಗ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರಕಥೆಯೊಂದಿಗೆ, ನಿಂತಿರುವ ಭಂಗಿಯಲ್ಲಿ ಶ್ರೀ ಕಾವೇರಿ ತಾಯಿಯ ಚಿತ್ರಪಟ ಕೂಡ ಲೋಕಾರ್ಪಣೆಯಾಗಿದೆ. ಶ್ರೀಕ್ಷೇತ್ರ ತಲಕಾವೇರಿಗೆ ಪವಿತ್ರ ತೀರ್ಥೊದ್ಭವ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ತಲಕಾವೇರಿ, ಭಾಗಮಂಡಲ ಮತ್ತು ಮಡಿಕೇರಿಯ ವಿವಿಧ ಮಳಿಗೆಗಳಲ್ಲಿ ಪುಸ್ತಕ ಹಾಗೂ ಚಿತ್ರಪಟ ಖರೀದಿಗೆ ಲಭ್ಯವಿದೆ. *ಉಡುಗೊರೆ ನೀಡಿ* ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರಕಥೆಯನ್ನು ಇಂದಿನ ಮಕ್ಕಳಿಗೆ ಹಾಗೂ ಯುವ ಪೀಳಿಗೆಗೆ ತಿಳಿದುಕೊಳ್ಳುವಂತಾಗಿದೆ. ವಿಶೇಷವಾಗಿ ತಂದೆ, ತಾಯಿ ಹಾಗೂ ಹಿರಿಯರು ಈ ಪುರಾಣ ಚಿತ್ರಕಥಾ ಪುಸ್ತಕವನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡುವಂತಾಗಬೇಕು ಎಂದು ಕಲಾವಿದ, ಲೇಖಕ ಗಣೇಶ್ ರೈ ಅವರು ಆಶಯ ವ್ಯಕ್ತಪಡಿಸಿದರು. ಕಳೆದ 4 ದಶಕಗಳಿಂದ ತಮ್ಮ ರಚನೆಯ ಮೂಲಕ ಶ್ರೀ ಕ್ಷೇತ್ರ ತಲಕಾವೇರಿಗೆ ಸಂಬಂಧಿಸಿದ ಗ್ರೀಟಿಂಗ್ಸ್ ಕಾರ್ಡ್, ಪಿಕ್ಚರ್ ಕಾರ್ಡ್ ಮತ್ತು ಪ್ರವಾಸಿ ಕೈಪಿಡಿಯನ್ನು ಪ್ರಕಟಿಸಲಾಗಿದೆ. ಶ್ರೀ ಕಾವೇರಿ ಮಾತೆಯ ಚಿತ್ರಪಟವನ್ನು 1980ರ ದಶಕದಲ್ಲಿ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಲೋಕಾರ್ಪಣೆ ಮಾಡಿರುವುದನ್ನು ಸ್ಮರಿಸಿಕೊಂಡರು. ಈ ಬಾರಿಯ ಕಾವೇರಿ ತುಲಾಸಂಕ್ರಮಣಕ್ಕೆ ಆಗಮಿಸುವ ದರ್ಶನಾರ್ಥಿಗಳಿಗೆ ಶ್ರೀ ಕಾವೇರಿ ಪುರಾಣ ಚಿತ್ರಕಥಾ ಪುಸ್ತಕ ಓದುಗರ ಸಂಗ್ರಹದಲ್ಲಿ ವಿಶೇಷವಾಗಿ ಸೇರ್ಪಡೆಯಾಗಲಿದೆ ಎಂದರು.










