ವಿರಾಜಪೇಟೆ ಅ.18 NEWS DESK : ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿ ನಗರದ ಅಂದವನ್ನು ಕೆಡಿಸುತ್ತಿರುವವರನ್ನು ಪತ್ತೆ ಹಚ್ಚಿ ಅವರ ಭಾವಚಿತ್ರವನ್ನು ಪ್ರಚಾರ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಭಾಗವಾಗಿ ಪುರಸಭಾ ವತಿಯಿಂದ ವಿನೂತನ ಮಾರ್ಗ ಒಂದನ್ನು ಅಳವಡಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಹೇಳಿದರು. ಅಧಿಕೃತವಾಗಿ ಫೇಸ್ಬುಕ್ ಪೇಜ್ ಖಾತೆ ತೆರೆಯಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದನ್ನು ಯಾರೇ ಕಂಡರೂ ಕೂಡಲೇ ಫೋಟೋ ಕ್ಲಿಕ್ಕಿಸಿ ಈ ಫೇಸ್ಬುಕ್ ಪೇಜ್ನಲ್ಲಿ ಹಾಕಬಹುದು. ವ್ಯಕ್ತಿ ಹಾಗೂ ವಾಹನದಲ್ಲಿ ತಂದು ಹಾಕುವವರ ವಾಹನದ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ನಗರದ ನಿರ್ದಿಷ್ಟವಾದ ಕೆಲವು ಸ್ಥಳಗಳನ್ನು ಗುರುತಿಸಿ ಸಿ,ಸಿ. ಕ್ಯಾಮರಾ ಅಳವಡಿಸಲಾಗುವುದು. ಶಾಸಕರ ನಿರ್ದೇಶನದ ಮೇರೆಗೆ ‘ಕ್ಲೀನ್ ವಿರಾಜಪೇಟೆ” ಯೋಜನೆಯಂತೆ ಪುರಸಭೆ ಈ ವಿನೂತನ ಮಾರ್ಗವನ್ನು ಅನುಸರಿಸಿದೆ. ಈ ಕುರಿತು ಸಹಾಯವಾಣಿ ಸಂಖ್ಯೆ 9986096362 ಅನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಕಸ ಬಿಸಾಡುವವರು ಅಂಗಡಿ ಮಾಲೀಕರಾಗಿದ್ದಲ್ಲಿ ವ್ಯಾಪಾರ ಪರವಾನಗಿ ಹಾಗೂ ನೀರಿನ ಸಂಪರ್ಕವನ್ನು ರದ್ದುಪಡಿಸುವ ಕಟ್ಟುನಿಟ್ಟಿನ ಕ್ರಮಕ್ಕೂ ಮುಂದಾಗುವುದಾಗಿ ಹೇಳಿದರು. https://www.facebook.com/share/17pxj4vxcl ಇದರಲ್ಲಿ ಮಾಹಿತಿ ಹಂಚಿಕೊಳ್ಳಬಹುದು.











