
ವಿರಾಜಪೇಟೆ ಅ.20 NEWS DESK : ವಿರಾಜಪೇಟೆ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು. ವಿರಾಜಪೇಟೆಯ ಶಾಸಕರ ಕಛೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಜಾನ್ಸನ್, ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸೂಚಿಸಿದರು. ಯೋಜನೆಗಳ ಅನುಷ್ಠಾನವನ್ನು ಶೇ.100ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಫಲಾನುಭವಿಗಳ ಅಹವಾಲು ಸ್ವೀಕರಿಸಲು ಸಂವಾದ ನಡೆಸಲಾಗುವುದು. ಶಕ್ತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಚರ್ಚಿಸಲಾಯಿತು. ಅರ್ಹ ಫಲಾನುಭವಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಿರಲಿ. ಪಂಚ ಗ್ಯಾರಂಟಿಗಳು ಕರ್ನಾಟಕ ಸರಕಾರದ ಅತ್ಯಂತ ಮಹತ್ವದ ಯೋಜನೆಗಳಾಗಿದ್ದು, ಅರ್ಹತೆ ಹೊಂದಿರುವ ಯಾವುದೇ ಫಲಾನುಭವಿಗಳು ತಂತ್ರಾಂಶದ ನೋಂದಣಿ ಸೇರಿದಂತೆ ಯಾವುದೇ ಕಾರಣದಿಂದ ವಂಚಿತರಾಗದಂತೆ ಅನುಷ್ಠಾನ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಗ್ಯಾರಂಟಿ ಯೋಜನೆಗಳು ನಾಗರಿಕರ ಜೀವನದ ಗುಣಮಟ್ಟ ಸುಧಾರಣೆಗೆ ಪೂರಕವಾಗಿದ್ದು, ನಮ್ಮ ಭಾಗದಲ್ಲಿಶೇ.100 ರ ಅನುಷ್ಠಾನಕ್ಕೆ ಮುಂದಾಗುವಂತೆ ಸೂಚಿಸಿದರು. ಪಂಚಾಯಿತಿ ಹಂತದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಅಹವಾಲು ಸ್ವೀಕರಿಸುವುದರೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಯೋಜಿಸಿರುವುದಾಗಿ ಈ ಸಂಧರ್ಭ ತಿಳಿಸಿದರು. ಸಮಿತಿ ಸದಸ್ಯರುಗಳು ಮಾತನಾಡಿ, ತಾಲೂಕಿನ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಪೈಕಿ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಅನುಷ್ಠಾನದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಾಗಿದ್ದು, ಗ್ರಾಮೀಣ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸದ ಹೊರತು ಗ್ರಾಮೀಣ ಮಹಿಳೆಯರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೂ ಈ ಯೋಜನೆಯ ಅನುಕೂಲ ದೊರಕುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳಾಗಿದ್ದು, ಗ್ರಾಮೀಣ ಭಾಗದ ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ಸಲ್ಲಿಸಲಾಗಿದೆ ಎಂದರು. ಪ್ರತಿಬಾರಿ ಸಭೆ ನಡೆಸುವಾಗಲೂ ಡಿಪೋ ವ್ಯವಸ್ಥಾಪಕರು ಗೈರು ಹಾಜರಾಗುತ್ತಾರೆ. ಇದರಿಂದ ಮಾಹಿತಿ ಹಂಚಿಕೊಳ್ಳು ಕಷ್ಟವಾಗುತ್ತದೆ. ಈ ಹಿಂದೆ ಇದ್ದ ಕೆಲವು ಸರಕಾರಿ ಬಸ್ಸುಗಳು ಸ್ಥಗಿತಗೊಂಡಿದೆ. ಇದೇ ಸಮಯದಲ್ಲಿ ಖಾಸಗಿ ಬಸ್ಸಿನವರು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇಲಾಖೆಯವರು ಖಾಸಗಿ ಬಸ್ಸು ಮಾಲೀಕರೊಂದಿಗೆ ಶಾಮೀಲಾಗಿರುವಂತಿದೆ ಎಂದು ಮಹದೇವ ದೂರಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಶೀಘ್ರವಾಗಿ ಈ ಸಮಸ್ಯೆಗಳನ್ನು ಪರಿಹರಿಸುವಂತೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು. ಪಡಿತರ ಚೀಟಿ ರದ್ಧತಿ ಸಮಸ್ಯೆಯ ಕುರಿತು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಇಲಾಖೆಯ ಅಧಿಕಾರಿಗಳು ಐಟಿ ರಿಟರ್ನ್ ಮಾಡುತ್ತಿರುವ ಬಿಪಿಎಲ್ ಕಾರ್ಡ್ದಾರರೂ ಸೇರಿದಂತೆ ನಿಯಮಗಳನು ಸಾರ ಪರಿಶೀಲನಾ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಅಲ್ಲದೆ ಬಹುತೇಕ ನ್ಯಾಯಾಬೆಲೆ ಅಂಗಡಿಗಳಲ್ಲಿ ಹಣ ವಸೂಲಾತಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ಎರಡು ಮೂರು ಕಡೆಗಳಲ್ಲಿ ನ್ಯಾಯಾಬೆಲೆ ಅಂಗಡಿ ನಡೆಸುತ್ತಿರುವವರ ಪರವಾನಗಿ ರದ್ದುಮಾಡಿ. ಏಕೆಂದರೆ ಇದರಿಂದ ಕೂಲಿ ಕಾರ್ಮೀಕರು ಸೇರಿದಂತೆ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಸರಿಯಾದ ಸಮಯಕ್ಕೆ ರೇಷನ್ ಕೊಡದೆ ಇರುವುದರಿಂದ ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇದೆ. ಕೂಲಿ ಮಾಡುವವರು ಒಂದುದಿನ ಪೂರ್ತಿ ಇದಕ್ಕಾಗಿ ವ್ಯಯ ಮಾಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಪಡಿತರ ವಿತರಣೆ ಮಾಡಲು ಸೂಚಿಸುವಂತೆ ತಿಳಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ನಿರಂತರವಾಗಿ ಬೇರೆ ಬೇರೆ ಕಾರಣಗಳಿಂದ ಸೌಲಭ್ಯ ವಂಚಿತರಾಗುತ್ತಿರುವ ಫಲಾನುಭವಿಗಳ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳುವುದು ಅಗತ್ಯ ಎಂಬ ಸದಸ್ಯರ ಅಭಿಪ್ರಾಯಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು ಫಲಾನುಭವಿವಾರು ಆದ್ಯತೆ ನೀಡುವುದಾಗಿ ಸಭೆಗೆ ತಿಳಿಸಿದರು. ಯುವನಿಧಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜುಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಯುವಜನತೆಗೆ ನೋಂದಣಿಗೆ ಹೆಚ್ಚಿನ ಮಾಹಿತಿ ನೀಡಲು ಮಾಹಿತಿ ಶಿಬಿರಗಳನ್ನು ಆಯೋಜಿಸುವಂತೆ ಅಧ್ಯಕ್ಷರು ಸಂಬಂಧಿಸಿದ ಇಲಾಖೆಗೆ ಸೂಚಿಸಿದರು. ಗ್ಯಾರಂಟಿ ಯೋಜನೆಯ ಅನುಷ್ಠಾನ ಇಲಾಖೆಗಳಾದ ಚೆಸ್ಕಾಂ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಅವಧಿಯಲ್ಲಿ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳು ಮತ್ತು ಅನುದಾನದ ವಿವರವನ್ನು ಸಭೆಗೆ ಮಂಡಿಸಿದರು. ಸಭೆಯಲ್ಲಿತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಾದ ವಿನಿತಾ ಕಾವೇರಮ್ಮ, ಮಹಾದೇವಾ, ಬಷೀರ್, ವಿಶ್ವ, ಆಲಿ, ಮಹೇಶ್, ಹರೀಶ್, ಗಣೇಶ್, ವಿರಾಜಪೇಟೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸಿ ಅಪ್ಪಣ್ಣ, ವಿಷಯ ನಿರ್ವಹಣಾಧಿಕಾರಿ ಮೋಹನ್ ವಿ.ಟಿ., ಕೆಎಸ್ಆರ್ಟಿಸಿ ಇಲಾಖೆಯ ಸಂಚಾರ ನಿಯಂತ್ರಕರು, ಯುವ ನಿಧಿ ಘಟಕದ ಅಧಿಕಾರಿ ಮಂಜುನಾಥ್, ಶಿಶು ಅಭಿವೃದ್ದಿ ಇಲಾಖೆಯ ಅಧಿಕಾರಿ ರೇಣುಕಾ ಹೊಸಮನಿ, ಚೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸುರೇಶ್, ಆಹಾರ ಇಲಾಖೆಯ ಅಧಿಕಾರಿ ಸೀನಾ ಕುಮಾರಿ, ತಾಲೂಕು ಪಂಚಾಯಿತಿಯ ಕುಟ್ಟಂಡ ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು.









