
ಮಡಿಕೇರಿ NEWS DESK ಅ.21 : ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವ ಎಂದು ದಾಖಲೀಕರಣಗೊಂಡರೆ ಮಾತ್ರ ಕೊಡವರು ಸಂವಿಧಾನಬದ್ಧವಾದ ಹಕ್ಕುಗಳನ್ನು ಸಾಧಿಸಲು ಸಾಧ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ಉಮ್ಮತ್ ನಾಡಿನ ಅಮ್ಮತ್ತಿಯಲ್ಲಿ ಸಿಎನ್ಸಿ ವತಿಯಿಂದ ನಡೆದ 16ನೇ ಕೊಡವ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. ಆದಿಮಸಂಜಾತ, ಇಂಡಿಜಿನಸ್, ಆನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಕೊಡವರ ಪ್ರತ್ಯೇಕ ಗುರುತು ನೋಂದವಣೆಯ ಪ್ರಕ್ರಿಯೆ ರಾಷ್ಟ್ರೀಯ ಜನಗಣತಿಯಲ್ಲಿ ದಾಖಲಿಕರಣವಾದರೆ ಮಾತ್ರ ನಮಗೆ ಸಂವಿಧಾನ ಬದ್ಧ ಹಕ್ಕು ದೊರೆಯಲಿದೆ. ಕೊಡವರ ಪೂರ್ವಾರ್ಜಿತ ಭೂಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಲಿದೆ ಎಂದರು. 2026-27 ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆಯ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು, ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದು ತಿಳಿಸಿದರು. ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಇಂದು ಜನಗಣತಿಯೂ ಸೇರಿದಂತೆ ರಾಜ್ಯ ದಾಖಲೆಗಳ ಎಲ್ಲಾ ಕಾಲಂಗಳಲ್ಲಿ ಈ ದೇಶದ ಬಹುಧರ್ಮ, ಪ್ರಭಲಧರ್ಮ ಮತ್ತು ಬಲಾಡ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟು ರಚಿಸಲ್ಪಟ್ಟಿರುವ ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಆನಿಮಿಸ್ಟಿಕ್ ನಂಬಿಗೆಯ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
1871-72 ರಿಂದ 1931ರ ವರೆಗೆ ನಡೆದ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಧರ್ಮೇತರ ಮತ್ತು ಜಾತಿಯೇತರ ಜನಾಂಗ/ಮೂಲವಂಶಸ್ಥ (ರೇಸ್) ಎಂದು ದಾಖಲಿಸಲ್ಪಡುವ ಮೂಲಕ ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ಗುರುತಿಸಿ ನಮ್ಮ ಹೆಗ್ಗುರುತು ರಾಜ್ಯ ದಾಖಲೆಯಲ್ಲಿ ನಳನಳಿಸುವಂತಾಗಿತ್ತು. ತದನಂತರ ನಮ್ಮನ್ನು 2021ರ ವರೆಗೆ ಪ್ರತಿ ದಶಮಾನಗಳಿಗೊಮ್ಮೆ ನಡೆಸುವ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಬಲಾಡ್ಯ ಧಾರ್ಮಿಕ ಮತ್ತು ಜಾತಿಯೊಂದಿಗೆ ವಿಲೀನಗೊಳಿಸಿ ನಮ್ಮ ಅಸ್ತಿತ್ವ ಮತ್ತು ಹೆಗ್ಗುರುತು ವಿನಾಶದೊಂದಿಗೆ ಕೊಡವರ ಅಸ್ಮಿತೆ ಮತ್ತು ಸತ್ವವನ್ನು ಧ್ವಂಸ ಮಾಡಲಾಯಿತು. ಮುಂದೆ ಅದು ಕೊಡವರ ಸ್ವಯಂ ನಿರ್ಣಯ ಹಕ್ಕು ಹಾಗೂ ಸಂವಿಧಾನಿಕ ಹಕ್ಕುಗಳ ಧ್ವನಿಯೂ ಪ್ರತಿಪಾಧಿಸಲು ಆಗಲಾರದಷ್ಟು ಕ್ಷೀಣಗೊಂಡು ಧಮನಕ್ಕೊಳಗಾಯಿತು. ಕೊಡವರ ವಿರಳ ಸಂಖ್ಯೆಯು ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಹೆಗ್ಗುರುತನ್ನು ಜೋಪಾನ ಮಾಡಲು ವಿಶೇಷ ಹಕ್ಕು ಕೇಳಲೆಬಾರದು, ಕೊಡವರೇನಿದ್ದರು ಬಲಾಡ್ಯ ಜನಸಂಖ್ಯಾ ಬಾಹುಳ್ಯದೊಂದಿಗೆ ಗುರುತಿಸಿಕೊಳ್ಳಬೇಕೆನ್ನುವ ಅವ್ಯಕ್ತ ಕಾರ್ಯಸೂಚಿಯೊಂದು ಪಿತೂರಿ ಮಾಡುತ್ತ ಬಂತು. ಕೊಡವರು ಭೂದೇವಿ ಅರ್ಥಾತ್ ಅವರ ಜನ್ಮಭೂಮಿ ಕೊಡವಲ್ಯಾಂಡ್, ಜಲದೇವಿ ಕಾವೇರಿ, ವನದೇವಿ/ದೇವಕಾಡ್, ಪಾರಮಾರ್ಥಿಕ ಮಂದ್, ಧಾರ್ಮಿಕ ಸಂಸ್ಕಾರ, ತೋಕ್-ಗನ್, ಗೆಜ್ಜೆತಂಡ್, ಸೂರ್ಯ-ಚಂದ್ರ, ಪರ್ವತ ದೇವಿ, ಗುರು-ಕಾರೋಣ, ಸ್ವರ್ಗೀಯ ದಿವ್ಯಾತ್ಮಗಳು, ತೂಟಂಗಳ-ಕ್ಯಾಕೋಳ (ಸಮಾಧಿ ಸ್ಥಳ) ಗಳನ್ನು ಪೂಜ್ಯಭಾವನೆಯಿಂದ ಆರಾಧಿಸುತ್ತಾರೆ. ಸಪ್ತಪಧಿ ಇಲ್ಲದ ಮದುವೆ, ಮಂಗಳ ಸೂತ್ರ ಪದ್ಧತಿ ಇಲ್ಲದ (ಮದುವೆಯ ಮುನ್ನದಿನ ರಾತ್ರಿ ಮಧುಮಗಳ ತಾಯಿ ಮಧುಮಗಳ ಕೊರಳಿಗೆ ಪವಿತ್ರ ‘ಪತ್ತಾಕ್’ ಕಟ್ಟುವ ವಿಶಿಷ್ಟ ಪರಂಪರೆ ನಡೆದು ಬಂದಿದೆ.) ಕೊಡವರ ಎಲ್ಲಾ ಶುಭಕಾರ್ಯ, ಅಶುಭಕಾರ್ಯಗಳಲ್ಲಿ ಮದ್ಯ ಸಮರಾಧನೆ ಮತ್ತು ಪಂದಿಕರಿ ಬೋಜನ ಕಡ್ಡಾಯ. ತೋಕ್-ಗನ್ ಎಲ್ಲಾ ಕಾರ್ಯದಲ್ಲೂ ಪೂಜಾ ಪರಿಕರವಾಗಿ ಬಳಸುತ್ತೇವೆ. ಈ ರೀತಿಯ ಸಂಸ್ಕಾರವನ್ನ ಆನಿಮಿಸ್ಟಿಕ್ ನಂಬಿಗೆಯ ಜನರೆಂದು ವಿಶ್ವರಾಷ್ಟ್ರ ಸಂಸ್ಥೆ ಗುರುತಿಸಿದೆ. ಉದಾಹರಣೆಗೆ ಮಧ್ಯಪ್ರಾಚ್ಯ ದೇಶದ ಸಿಂಜಾರ್ ಪರ್ವತದ “ಯಜೀದಿ” ಜನಾಂಗ, ಆಫ್ಗಾನಿಸ್ಥಾನ-ಪಾಕಿಸ್ತಾನದ ಗಡಿಗೆ ತಾಗಿಕೊಂಡಿರುವ ಹಿಂದೂ ಕುಶ್ ಕಣಿವೆಯ ಚಿತ್ರಾಲ್ ಪರ್ವತದ “ಕಲಾಶ್” ಜನಾಂಗ, ಇವರನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿಸಲಾಗಿದೆ. ಪೂರ್ವಘಟ್ಟದ ಜಾರ್ಖಂಡ್ನ “ಸಂತಾಲ್” ಸಮುದಾಯ. ಅಂತೆಯೇ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು ಮತ್ತು ಗಿರಿಕಂದರಗಳ ನಡುವೆ ಈ ಭೂಮಿಯ ಸೃಷ್ಟಿಯ ಲಾಗಯಿತಿನಿಂದಲೂ ಮತ್ತು ಮಾನವ ಕುಲ ಈ ಭೂಮಂಡಲದಲ್ಲಿ ಉತ್ಪತಿಯಾದ ಗಳಿಗೆಯಿಂದಲೂ ಕೊಡವಲ್ಯಾಂಡ್ನ ಆದಿಮಸಂಜಾತ ಏಕ ಬುಡಕಟ್ಟುಗಳಾದ ಕೊಡವರು ಆರ್ವಿಭವಿಸಿ, ಅರಳಿ ವಿಕಾಸವಾಗಿದ್ದಾರೆ. ಮೇಲಿನ ಮೂರು ಬುಡಕಟ್ಟುಗಳಂತೆ ಕೊಡವರು ಕೂಡ ಜಲದೇವತೆ-ಪ್ರಕೃತಿಯೊಂದಿಗೆ ಆಯ್ಯನಿಮಿಸ್ಟಿಕ್ ಸಮುದಾಯವಾಗಿದೆ. ಕೊಡವರಲ್ಲಿ ಯಾವುದೇ ಉಪಜಾತಿ-ಉಪವರ್ಗ, ಉಪ ಪಂಗಡಗಳಿಲ್ಲ. ಧರ್ಮ ಪರಿವರ್ತನೆ/ಧರ್ಮಧೀಕ್ಷೆ ಮೂಲಕ ಕೊಡವರ ಸಂಖ್ಯೆ ವೃದ್ಧಿಸುವ ಪದ್ಧತಿಯೂ ಇಲ್ಲ. ಕೊಡವರು ಯಾವುದೇ ಮಿಶನರಿ ಧರ್ಮವಲ್ಲ. ಕೊಡವರಲ್ಲಿ ಧರ್ಮಗರು-ರಾಜಗುರು ಪದ್ಧತಿ ಇಲ್ಲ. ಸಂವಿಧಾನವೇ ನಮಗೆ ರಾಜಗುರು, ಧರ್ಮಗುರು. ಆದ್ದರಿಂದ ಕೊಡವರಿಗೆ ರಾಜ್ಯಾಂಗ ಖಾತ್ರಿ ದೊರಕಬೇಕು. ಆ ಮೂಲಕ ಪ್ರಪಂಚದ ಅತ್ಯಂತ ದೊಡ್ಡ ಜನಾಂಗೀಯ ವೈವಿದ್ಯತೆಯ ಮತ್ತು ಬೃಹತ್ ಸಂವಿಧಾನಿಕ ಪಾರ್ಲಿಮೆಂಟರಿ ಪಾರ್ಟಿಸಿಪೇಟರಿ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ನಮ್ಮ ಅಸ್ತಿತ್ವ, ಹೆಗ್ಗುರುತು, ಅಸ್ಮಿತೆ ಉಳಿಯುವುದರೊಂದಿಗೆ ನಮ್ಮ ಜನ್ಮಭೂಮಿಯಲ್ಲಿ ನಮ್ಮ ಚಾರಿತ್ರಿಕ ನಿರಂತರತೆಗೆ ಕಾಯ್ದೆ ಬದ್ಧ ರಕ್ಷಣೆ ದೊರಕಬೇಕಾದರೆ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸಬೇಕು. ಈ ಸಂಬಂಧ ಈಗಾಗಲೇ ಈ ರಾಷ್ಟ್ರದ ನುರಿತ ಸಂವಿಧಾನ ತಜ್ಞರು ಮಾನವ ಶಾಸ್ತ್ರ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಮತ್ತು ರಾಜಕೀಯ ಶಾಸ್ತ್ರ ವಿಜ್ಞಾನಿಗಳ ಜೊತೆ ಸಂಪರ್ಕ ಮತ್ತು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಎನ್.ಯು.ನಾಚಪ್ಪ ನುಡಿದರು.
*ಗೆಸ್ಟ್ ವರ್ಕರ್ ಎಂದು ಪರಿಗಣಿಸಿ*
ಹೊರ ರಾಷ್ಟçದ ಬಾಂಗ್ಲದೇಶಿ ರೋಹಿಂಗ್ಯಗಳಿಗೆ ನೆಲೆ ಕಲ್ಪಿಸಲು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಮುಂದೆ ಜನಗಣತಿ ಸಂದರ್ಭ ಅವರನೆಲ್ಲ ಕೊಡವ ಎಂದು ದಾಖಲಿಸಿ ಮತಬ್ಯಾಂಕ್ ವೃದ್ಧಿ ಮಾಡಿಕೊಂಡು ಅವರ ಜನಸಂಖ್ಯಾ ವೃದ್ಧಿಯನ್ನು ತೋರಿಸಿ ಮುಂದೆ ಕೊಡಗಿಗೆ ದುಪ್ಪಟ್ಟು ಮತದಾರರ ಆಧಾರದಲ್ಲಿ ಪಾರ್ಲಿಮೆಂಟ್ ಸೀಟ್ ಬೇಕೆಂದು ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳು ಲಜ್ಜೆಗೇಡಿ ಮತಭಿಕ್ಷೆ ಕಾರ್ಯದಲ್ಲಿ ತೊಡಗಿದ್ದು, ಇದಕ್ಕಾಗಿ ಕೊಡವರ ಭೂಮಿಗಳನ್ನು ಬಲವಂತ ತೆರವುಗೊಳಿಸಿ ಅಲ್ಲಿ ಇವರಿಗೆಲ್ಲ ಭೂಮಿ, ವಸತಿ ನಿರ್ಮಿಸುವ ಒಳಸಂಚು ನಡೆಲಾಗುತ್ತಿದೆ. ಇದಕ್ಕೆ ಪ್ರತಿಭಟಿಸಿದರೆ, ಕೊಡಗಿನಲ್ಲಿ ಕಾರ್ಮಿಕರ ಕೊರತೆಯ ನೆಪ ತೋರಿಸಲಾಗುತ್ತದೆ. ಮುಂದೆ ಹರಾಜಕತೆ ನಿರ್ಮಾಣವಾಗಿ ಸ್ಥಳೀಯರಿಗೆ ರಕ್ಷಣೆ ಇಲ್ಲದಾಗುತ್ತದೆ ಎಂದು ನಾಚಪ್ಪ ಕಳವಳ ವ್ಯಕ್ತಪಡಿಸಿದರು. ಸರಿ ಕಾರ್ಮಿಕರ ಕೊರತೆ ಇದ್ದರೆ ಟರ್ಕಿ ದೇಶದ ವಲಸಿಗ ಕಾರ್ಮಿಕರನ್ನು ಪ್ಯಾರಿಸ್ನಲ್ಲಿ ಗೆಸ್ಟ್ ವರ್ಕರ್ ಎಂದು ಪರಿಗಣಿಸಲಾಗಿದೆ. ಮೋದಿ-ಶೇಖ್ ಹಸಿನಾ ಒಪ್ಪಂದ 2015ರಲ್ಲಿ ಡಾಕಾದಲ್ಲಿ ನಡೆದಾಗ ಈ ಗೆಸ್ಟ್ ವಕರ್ನೀತಿ ಮುನ್ನಲೆಗೆ ಬಂದಿದೆ. ಅದೇ ರೀತಿ ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಗೆಸ್ಟ್ ವರ್ಕರ್ ಪರ್ಮಿಟ್ ಮೇಲೆ ಆಹ್ವಾನಿಸಿ ಕೆಲಸ ಮುಗಿದ ನಂತರ ಅವರ ಊರುಗಳಿಗೆ, ದೇಶಗಳಿಗೆ ಹಿಂತಿರುಗಬೇಕು. ಪುನಃ ಕೃಷಿ ವರ್ಷ ಆರಂಭದಲ್ಲಿ ಅವರ ಗೆಸ್ಟ್ ವರ್ಕರ್ ಪರ್ಮಿಟ್ ನವೀಕರಿಸಬೇಕು, ಈ ನಿಯಮ ಜಾರಿಯಾಗಬೇಕು ಎಂದು ಎನ್.ಯು.ನಾಚಪ್ಪ ಸಲಹೆ ನೀಡಿದರು. 2026-27ರ 16ನೇ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್ಟಿ ಪಟ್ಟಿಯಲ್ಲಿ ವರ್ಗೀಕರಿಸಬೇಕು. ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಉಳಿಸಬೇಕು, ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 202627 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟç ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆದರು. ಅಲ್ಲದೆ ಜಾತಿ ಜನಗಣತಿಯ ಮೂರೂ ಕಾಲಂಗಳಲ್ಲಿ ಕೊಡವರು ‘ಕೊಡವ’ ಎಂದು ನಮೂದಿಸುವಂತೆ ಕರೆ ನೀಡಿದರು. *ಅ.27 ರಂದು ಶ್ರೀಮಂಗಲದಲ್ಲಿ ಜಾಗೃತಿ* 17ನೇ ಕೊಡವ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಅ.27 ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀಮಂಗಲದಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡ್, ಚೇರಂಬಾಣೆ ಹಾಗೂ ಚೆಟ್ಟಳ್ಳಿಯಲ್ಲಿ ಜನಜಾಗೃತಿ ಮೂಡಿಸಲಾಗಿದ್ದು, ವ್ಯಾಪಕ ಬೆಂಬಲ ದೊರೆತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಉದಿಯಂಡ ಚೋಂದಮ್ಮ, ಬಾದುಮಂಡ ಸಾನ್ವಿ ದೇಚಮ್ಮ, ಬಾದುಮಂಡ ಸಾಂಚಿ ಪೊನ್ನಮ್ಮ, ಪಂದ್ಯಂಡ ನಿಶಿ ಬೋಜಮ್ಮ, ಕೊಲ್ಲೀರ ಉಮೇಶ್, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂದ ಪ್ರಕಾಶ್ ಗಣಪತಿ, ಕಾರ್ಯದರ್ಶಿ ಪಟ್ಟಡ ಧನು ಉತ್ತಯ್ಯ, ನೆಲ್ಲಮಕ್ಕಡ ವಿವೇಕ್, ಮಂಡೇಪಂಡ ಲಾಲ, ಪಟ್ಟಡ ಅರುಣ್, ಕೊಲ್ಲಿರ ಧರ್ಮಜ, ಕೊಲ್ಲೀರ ಗೋಪಿ, ಮಾಚಿಮಂಡ ಪೆಮ್ಮಯ್ಯ, ಕಾವಡಿಚಂಡ ಗಣಪತಿ, ಕೇಚಂಡ ಶಿವಪ್ಪ, ಪಳೆಯತಂಡ ಹರೀಶ್, ಮುಕ್ಕಾಟಿರ ಜಯ, ಪಂದ್ಯಂಡ ಸುರೇಶ್, ಚೆಪ್ಪುಡಿರ ಮುತ್ತಣ್ಣ, ಮುಕ್ಕಾಟೀರ ಮೊಣ್ಣಪ್ಪ, ಮುರುವಂಡ ಸುರೇಶ್ ಮುದ್ದಯ್ಯ, ಬೊಮ್ಮಂಡ ಮಂದಣ್ಣ, ಕುಟ್ಟಂಡ ತಿಮ್ಮಯ್ಯ, ಚೋವಂಡ ನಾಚಪ್ಪ, ಮಂಡೇಪಂಡ ಪೊನ್ನಪ್ಪ, ಚೋವಂಡ ಗಣೇಶ್, ಕಾವಡಿಚಂಡ ಬೋಪಣ್ಣ, ಕಾವಡಿಚಂಡ ಅಯ್ಯಪ್ಪ, ಮಾಚಿಮಾಡ ರತನ್, ಡಾ.ವಾಟೇರಿರ ಸುಬ್ರಮಣಿ, ನಡಿಕೇರಿಯಂಡ ಗಣೇಶ್, ಉದ್ದಪಂಡ ಶಂಕರಿ, ನಾಯಡ ಪೂವಯ್ಯ, ವಕೀಲ ಬಿದ್ದಂಡ ಸುಬ್ಬಯ್ಯ, ಮಚ್ಚಾರಂಡ ಕಾರ್ಯಪ್ಪ, ನೆಲ್ಲಮಕ್ಕಡ ಮುತ್ತಣ್ಣ, ಮುಕ್ಕಾಟೀರ ತಮ್ಮಣ್ಣ, ಚೇನಂಡ ಅಜಿತ್, ಮಂದೆಪಂಡ ಹರೀಶ್, ಮಾಚಿಮಂಡ ರತನ್, ಕುಂಞಂಡ ರಾಜು, ಕಾವಡಿಚಂಡ ದೀಪಕ್ ಉತ್ತಯ್ಯ, ಕಾವಡಿಚಂಡ ನಾಚಪ್ಪ, ಅರೆಯಡ ಗಿರೀಶ್, ಕಾಂಡೇರ ಸುರೇಶ್, ಕಿರಿಯಮಾಡ ಶೆರಿನ್, ಪುದಿಯೊಕ್ಕಡ ಪೃಥ್ವಿ ಬೋಪಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಷ್ಟçಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.









