
ನಾಪೋಕ್ಲು ಅ.28 NEWS DESK : ಕಾವೇರಿ ತೀರ್ಥೋದ್ಭವ ಕಳೆದು ಪವಿತ್ರ ತುಲಾ (ತೋಲ್ಯಾರ್) ಮಾಸದ ಹತ್ತನೇ ದಿನದ ಉತ್ಸವ ಪತ್ತಾಲೋಧಿ ಆರಾಧನೋತ್ಸವವು ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು. ದೇವಾಲಯದಲ್ಲಿ ಪರದಂಡ ಕುಟುಂಬಸ್ಥರು ಪತ್ತಾಲೋಧಿ ಉತ್ಸವ ನೆರವೇರಿಸಿದರು. ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಮಹಾಪೂಜೆ ಸತ್ಯನಾರಾಯಣ ಪೂಜೆ, ತುಲಾಭಾರ ಸೇವೆ ಸಲ್ಲಿಸಿದರು. ಉತ್ಸವದ ಅಂಗವಾಗಿ ದೇವಾಲಯ ಹಾಗೂ ಗರ್ಭಗುಡಿಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯೊಂದಿಗೆ ದೇವರ ನೃತ್ಯ ಬಲಿ ಜರುಗಿತು. ಈ ಸಂದರ್ಭ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷರೂ, ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಾಡಿನ ಎಲ್ಲ ಸಮುದಾಯದ ಕ್ಷೇಮಾಭಿವೃದ್ಧಿ, ಬೆಳೆ ರಕ್ಷಣೆ, ಸುಖ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯ ಸೇರಿದಂತೆ ಪೇರೂರು, ನೆಲಜಿ ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಲ್ಲೂ ಪತ್ತಲೋದಿ ಉತ್ಸವ ಸಂಭ್ರಮದಿಂದ ನಡೆಯಿತು.
ವರದಿ : ದುಗ್ಗಳ ಸದಾನಂದ.









