
ಮಡಿಕೇರಿ ಅ.28 NEWS DESK : ಪೊನ್ನಂಪೇಟೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾ ವಸತಿ ನಿಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಈ ಕ್ರೀಡಾ ನಿಲಯದಲ್ಲಿ ಯುವ ಕ್ರೀಡಾಪಟುಗಳಿಗೆ ಓದು ಹಾಗೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಆಧುನಿಕ ಸವಲತ್ತುಗಳೊಂದಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು. ಮುಂದಿನ ದಿನಗಳಲ್ಲಿ ಇಲ್ಲಿಗೆ ಉತ್ತಮ ತರಬೇತುದಾರರನ್ನು ನೇಮಿಸಲು ಸಹ ಸರ್ಕಾರದೊಂದಿಗೆ ಮಾತನಾಡಿರುವುದಾಗಿ ಶಾಸಕರು ತಿಳಿಸಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷರು ಅಣ್ಣಳಮಾಡ ಲಾಲಾ ಅಪ್ಪಣ್ಣ, ಪಟ್ಟಣ ಪಂಚಾಯಿತಿ ಸದಸ್ಯರು ಭಾರತಿ, ಸುನಿತಾ, ಪಕ್ಷದ ಹಿರಿಯರು ಮುಕಳೇರ ಕುಶಾಲಪ್ಪ, ಶಾಸಕರ ಹಿರಿಯ ಸಹೋದರರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ,ಎರ್ಮು ಹಾಜಿ, ಶಾಜಿ ಅಚ್ಚುತನ್, ದಿಲು, ಹ್ಯಾರೀಶ್, ಅಜ್ಜಿಕುಟ್ಟಿರ ಪೋನು, ಗಿರೀಶ್, ಸುಕು ಬೋಪಣ್ಣ, ಅಣ್ಣಳಮಾಡ ಹರೀಶ್, ಕೂಪಣ್ಣಮಾಡ ಪ್ರೀತಮ್, ಮನು, ನಿಖಿಲ್, ಭವಿನ್, ಮೌನ, ಕುಂಡಚ್ಚಿರ ಮಂಜು ದೇವಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಜಮ್ಮಡ ಸೋಮಣ್ಣ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಧ್ಯಾನ್, ಪಕ್ಷದ ಪ್ರಮುಖರು, ತಹಸೀಲ್ದಾರ್ ಮೋಹನ್, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಶಾಸಕ ಎ.ಎಸ್.ಪೊನ್ನಣ್ಣ ಅವರು ಶಾಸಕರಾಗಿ ಚುನಾಯಿತರಾದ ಬಳಿಕ ಕ್ಷೇತ್ರಾದ್ಯಂತ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಸಾವಿರಾರು ಕೋಟಿ ಅನುದಾನ ಒದಗಿಸಿದ್ದಾರೆ. ವಿಶೇಷವಾಗಿ ಕೊಡಗಿನ ಯುವ ಕ್ರೀಡಾ ಪ್ರತಿಭೆಗಳಿಗೆ ಅನುಕೂಲವಾಗಲು, ಕ್ರೀಡಾ ಚಟುವಟಿಕೆಗಳಿಗೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಕಾಮಗಾರಿಗೆ ಶಾಸಕರು ಒಟ್ಟು ರೂ.5 ಕೋಟಿ ಮಂಜೂರಾತಿ ಮಾಡಿದ್ದು, ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾ ವಸತಿ ನಿಲಯ ಪ್ರತಿಭಾವಂತ ಯುವ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಪೊನ್ನಂಪೇಟೆ ಭಾಗದಲ್ಲಿ ನೂತನ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಚಾಲನೆ ನೀಡಿರುವುದು ನಾಡಿನ ಯುವ ಕ್ರೀಡಾ ಪ್ರತಿಭೆಗಳಿಗೆ ಅತ್ಯಂತ ಅನುಕೂಲಕರವಾಗಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.









