ನಾಪೋಕ್ಲು ನ.5 NEWS DESK : ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಯುವ ಘಟಕದ ಆಶ್ರಯದಲ್ಲಿ ನಡೆದ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಚಾಂಪಿಯನ್ಸ್ ಟ್ರೋಫಿ-2025 ಸೀಸನ್ 1 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೆಬೀಡುವಿನ ಕುಲಾಲ ಕುಂಬಾರ ಬಳಗ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿಜೇತ ತಂಡಕ್ಕೆ ರೂ 20,000 ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನವನ್ನು ಕುಂಬಾರ ರಾಕರ್ಸ್ ತಂಡ ಪಡೆದುಕೊಂಡಿತು. ಈ ತಂಡಕ್ಕೆ 15000 ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ಮಡಿಕೇರಿಯ ಕುಲಾಲ ಬ್ರದರ್ಸ್ 11 ತಂಡ ತೃತೀಯ ಸ್ಥಾನ ಪಡೆದು 5000 ನಗದು ಹಾಗೂ ಟ್ರೊಫಿಯನ್ನು , ಮೂರ್ನಾಡಿನ ಟೀಮ್ ಶ್ರೀದೇವಿ ತಂಡ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿತು.. :: ವೈಯಕ್ತಿಕ ಪ್ರಶಸ್ತಿಗಳು :: ಮ್ಯಾನ್ ಆಫ್ ದಿ ಸೀರೀಸ್- ದುರ್ಗಾ ಪ್ರಸಾದ್, ಎಮರ್ಜಿಂಗ್ ಪ್ಲೇಯರ್- ಹೇಮಂತ್, ಬೆಸ್ಟ್ ಬೌಲರ್-ದಿಲೀಪ್ ಕುಲಾಲ್, ಮ್ಯಾನ್ ಆಫ್ ದಿ ಮ್ಯಾಚ್ -ಯಶಸ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು- ಅಭಿಷೇಕ್ ಕುಲಾಲ್, ಬೆಸ್ಟ್ ಫೀಲ್ಡರ್ ಪ್ರಸಾದ್. :: ಸಮಾರೋಪ ಸಮಾರಂಭ :: ಜಿಲ್ಲಾಧ್ಯಕ್ಷ ಕೆ.ಕುಶಾಲಪ್ಪ ಮೂಲ್ಯ ಮಾತನಾಡಿ ಜಿಲ್ಲೆಯಲ್ಲಿ ಕುಲಾಲ ಕುಂಬಾರ ಸಂಘವು ಮನೆಮಾತಾಗಿದೆ. ಮುಂದಿನ ದಿನಗಳಲ್ಲಿ ಕುಲಬಾಂಧವರು ಇನ್ನಷ್ಟು ಸಂಖ್ಯೆಯಲ್ಲಿ ಸಂಘದ ಸದಸ್ಯತ್ವ ಪಡೆದುಕೊಂಡು ಸಂಘದ ಏಳಿಗೆ ಸಹಕರಿಸಬೇಕು ಎಂದರು. ಸಮಾಜ ಬಾಂಧವರ ಐಎಎಸ್ ಐಪಿಎಸ್ ಕಲಿಯಲು ಇಚ್ಚಿಸುವ ಮಕ್ಕಳಿಗೆ ವೈಯಕ್ತಿಕವಾಗಿ ರೂ.25,000 ನೀಡುವುದಾಗಿ ಹೇಳಿದರು. ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್ ಕುಲಾಲ್ ಮೂರ್ನಾಡು ಮಾತನಾಡಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಯುವ ಘಟಕದ ಸದಸ್ಯರ ಶ್ರಮ ಬಹಳಷ್ಟು ಇದೆ. ಸಮಾಜ ಬಾಂಧವರ ಪೂರಕ ಸಹಕಾರದಿಂದ ಅದ್ದೂರಿ ಕಾರ್ಯಕ್ರಮ ನಡೆಯಲು ಸಹಕಾರಿಯಾಯಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷ ಮುತ್ತಮ್ಮ ಕೋಟಿ ಅವರು, ಸಂಘಟನೆಯಾದಾಗ ಮಾತ್ರ ಸಮಾಜದಲ್ಲಿ ನಾವು ಗುರುತಿಸಿಕೊಳ್ಳಲು ಸಾಧ್ಯ ಆ ಮೂಲಕ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗೋಣ ಎಂದು ಕರೆ ನೀಡಿದರು. ವೇದಿಕೆಯಲ್ಲಿ ವಿರಾಜಪೇಟೆ ಜೀವವಿಮ ನಿಗಮದ ಮ್ಯಾನೇಜರ್ ಮಧುಸೂದನ, ಉಪಾಧ್ಯಕ್ಷ ಕೆ.ಕೆ.ದಾಮೋದರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ ಖಜಾಂಚಿ ಗಿರೀಶ್ ಮಡಿಕೆಬೀಡು, ಕ್ರೀಡಾ ಸಮಿತಿ ಅಧ್ಯಕ್ಷ, ಕೆ.ಡಿ.ಶಾಂತಕುಮಾರ್, ರಮೇಶ್ ಕೆ.ಆರ್ ಪ್ರಾಂಶುಪಾಲರು ಅರುಣ ಪಿಯು ಕಾಲೇಜ್, ಚೇರಂಬಾಣೆ, ಚಂದ್ರಶೇಖರ್ ಎ.ಎಸ್.ಐ ಪಾಂಡೇಶ್ವರ ಮಂಗಳೂರು, ಪದಾಧಿಕಾರಿಗಳಾದ ಎಂಡಿ ಸುರೇಶ್ ಕುಲಾಲ್, ಪೂವಯ್ಯ ಉದ್ಯಮಿಗಳು ಬೆಂಗಳೂರು, ಲಕ್ಷ್ಮಣ್, ತಮ್ಮಯ್ಯ, ರಮೇಶ್, ಮನು ಚಂಗಪ್ಪ, ಜಿಲ್ಲಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಕಡೆಯಿಂದ ಬಂದ ಸಮಾಜ ಬಾಂಧವರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿ ಪವನ್ ಕುಲಾಲ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.












