ನಾಪೋಕ್ಲು ನ.6 NEWS DESK : ಪಿಪಿ ಫೌಂಡೇಶನ್ ನೇತೃತ್ವದಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್, ಹಿಂದೂ ಮಲೆಯಾಳಿ ಸಂಘ, ಆಟೋ ಚಾಲಕರ ಸಂಘ, ಎಸ್ಎನ್ಡಿಪಿ, ಟೌನ್ ಮುಸ್ಲಿಂ ಜಮಾತ್ ಸಹಯೋಗದೊಂದಿಗೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಪಿಪಿ ಫೌಂಡೇಶನ್ ಅಧ್ಯಕ್ಷರಾದ ಎಮ್ ಎಚ್ ಅಬ್ದುಲ್ಲ ಅವರು ಅಧ್ಯಕ್ಷತೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತ ನಿಧಿ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ರಕ್ತದಾನ ಶ್ರೇಷ್ಠದಾನ ಇದರಿಂದ ಹಲವರ ಜೀವ ಉಳಿಸಬಹುದು. ಆರೋಗ್ಯವಂತ ವ್ಯಕ್ತಿಯು ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ರಕ್ತದಾನ ಮಾಡಬಹುದಾಗಿದೆ ಎಂದರು. ರಕ್ತದಾನದ ಬಗ್ಗೆ ಕೆಲವು ತಪ್ಪು ಅಭಿಪ್ರಾಯಗಳಿದ್ದು, ಇದು ಸರಿಯಲ್ಲ. ಒಂದು ಬಾರಿ ಶಿಬಿರಗಳನ್ನು ಏರ್ಪಡಿಸಿ ಹೆಚ್ಚು ರಕ್ತ ಸಂಗ್ರಹಿಸುವ ಬದಲು ರಕ್ತದ ಬೇಡಿಕೆಗೆ ಅನುಗುಣವಾಗಿ ತಿಂಗಳಿಗೆ ಒಂದು ಸಾರಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಒಳ್ಳೆಯದು ಎಂದರು. ರಕ್ತದಾನ ಶಿಬಿರಕ್ಕೆ ಸಂಘ ಸಂಸ್ಥೆಗಳು ನೆರವು ನೀಡಿವೆ. ಇಂತಹ ಸಂಘ ಸಂಸ್ಥೆಗಳಿಂದ ಪ್ರೇರಣೆಯಾಗಿ ಮತ್ತಷ್ಟು ಸಂಘ ಸಂಸ್ಥೆಗಳಿಂದ ನೆರವು ದೊರೆತಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು ಎಂದು ಕೆಲವು ಉಪಯುಕ್ತ ಮಾಹಿತಿಯನ್ನು ನೀಡಿದರು. ಲಯನ್ಸ್ ರೀಜನಲ್ ಅಧ್ಯಕ್ಷ ಕೋಟೆರ ಡಾ.ಪಂಚಂ ತಿಮ್ಮಯ್ಯ ಮಾತನಾಡಿ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ರಕ್ತದಾನ ಶಿಬಿರ ಯಶಸ್ವಿಯಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚಾಗಿ ನೆರವೇರಬೇಕು ಇಂತಹ ಉತ್ತಮ ಕಾರ್ಯಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು. ನಾಪೋಕ್ಲು ಟೌನ್ ಮುಸ್ಲಿಂ ಜಮಾಯತ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರಹಿಮಾನ್ ಮಾತನಾಡಿ, ದೇಶದಲ್ಲಿ ವಿವಿಧ ಜನಾಂಗಗಳಿವೆ, ವಿವಿಧ ಜಾತಿಗಳಿವೆ. ಭಾಷೆ ಉಡುಪು ಆಚಾರ-ವಿಚಾರಗಳಲ್ಲಿ ವೈವಿಧ್ಯತೆ ಇದೆ. ಆದರೆ ಎಲ್ಲರ ರಕ್ತವೂ ಒಂದೇ. ರಕ್ತದಾನ ಮಾಡುವುದರಿಂದ ಜನಸಾಮಾನ್ಯರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಿಪಿ ಫೌಂಡೇಶನ್ ಉಪಾಧ್ಯಕ್ಷ ಸಲೀಂ ಹ್ಯಾರಿಸ್ ಮಾತನಾಡಿ ಇಂತಹ ಶಿಬಿರಗಳು ನಿಜವಾಗಿ ಪುಣ್ಯದ ಕೆಲಸವಾಗಿದೆ. ಕೊಡಗು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಿಬಿರಗಳು ಮಾಡುವುದರಿಂದ ರಕ್ತದ ಅವಶ್ಯಕತೆಯನ್ನು ಪೂರೈಸಲು ಸಾಧ್ಯವೆಂದು ಇದೀಗ ಸಮಾಜಕ್ಕೆ ನೆರವಾಗುವಂತಹ ರಕ್ತದಾನ ಶಿಬಿರವನ್ನು ಸಂಘ ಸಂಸ್ಥೆಗಳ ನೆರವಿನೊಂದಿಗೆ ಆಯೋಜಿಸಿರುವುದು ಸಂತಸದ ವಿಷಯ ಎಂದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಯಂಡ.ಬಿ. ಕುಟ್ಟಪ್ಪ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ಎಸ್ ಎನ್ ಡಿ ಪಿ ಅಧ್ಯಕ್ಷ ಲವ, ಲಯನ್ಸ್ ಮಾಜಿ ಅಧ್ಯಕ್ಷ ಕೆಟೋಳಿರ ರತ್ನ ಚರ್ಮಣ, ಉದ್ಯಮಿ ಮನ್ಸೂರ್ ಆಲಿ ಎಂ.ಎ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಜೀವನ, ಡಾ.ನೂರ್ ಪಾತಿಮ, ಜಮಾಯತ್ ಉಪಾಧ್ಯಕ್ಷ ಪಿ ಎಂ ಅಜೀಜ್, ಜಮಾತ್ ಉಪ ಅಧ್ಯಕ್ಷ ಅರಫತ್, ಪಿಪಿ ಫೌಂಡೇಶನ್ ಉಪ ಅಧ್ಯಕ್ಷ ಅಬ್ದುಲ್ ರೆಹೆಮಾನ್ ಅಳೇತಾಲ್ಲೂಕು ಹಾಗೂ ಕಾರ್ಯದರ್ಶಿ ಶಾಹಿದ್, ಅಹಮದ್ ಸಿ ಎಚ್ ಸ್ವಾಗತಿಸಿ ಅಸ್ಪಕ್ ವಂದಿಸಿದರು. ಈ ಸಂದರ್ಭ ರಕ್ತ ನಿಧಿ ಕೇಂದ್ರದ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಿರ್ದೇಶಕರು ಹಾಗೂ ಸದಸ್ಯರು 70 ಯೂನಿಟ್ ರಕ್ತದಾನ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ವರದಿ : ದುಗ್ಗಳ ಸದಾನಂದ.











