ಮಡಿಕೇರಿ ನ.6 NEWS DESK : ಗೋಣಿಕೊಪ್ಪದಲ್ಲಿ ಪ್ರಗತಿಯಲ್ಲಿರುವ ಗೋಣಿಕೊಪ್ಪ ಬಸ್ ನಿಲ್ದಾಣದ ಕಾಮಗಾರಿಯ ಪ್ರಗತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಪರಿಶೀಲಿಸಿದರು. ಈಗಾಗಲೇ ಮುಕ್ತಾಯ ಹಂತಕ್ಕೆ ಬಂದಿರುವ ಕಾಮಗಾರಿಯ ಅಂತಿಮ ಕೆಲಸ ಕಾರ್ಯಗಳ ಬಗ್ಗೆ ವರದಿ ಪಡೆದ ಶಾಸಕರು, ಇನ್ನು ಕೆಲವೇ ಸಮಯದಲ್ಲಿ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಬೇಕಾಗಿರುವುದರಿಂದ, ಕಾಮಗಾರಿಗಳನ್ನು ಶೀಘ್ರವಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ, ಕೆಲವು ಸಣ್ಣಪುಟ್ಟ ಮಾರ್ಪಾಡುಗಳನ್ನು ಗುತ್ತಿಗೆದಾರರಿಗೆ ನಿರ್ವಹಿಸಲು ತಿಳಿಸಿದರು. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಪಂಚಾಯಿತಿ ಅಧ್ಯಕ್ಷರಾದ ಕುಲಚಂಡ ಪ್ರಮೋದ್ ಗಣಪತಿ, ಪಿ.ಡಿ.ಓ ತಿಮ್ಮಯ್ಯ, ನಾಯಂದಿರ ಶಿವಾಜಿ, ಕಂದ ದೇವಯ್ಯ, ಮುಕಟೀರ ಸಂದೀಪ್ ಹಾಗೂ ಪ್ರಮುಖರು ಇದ್ದರು.











