
ಮಡಿಕೇರಿ ನ.8 NEWS DESK : ಮಡಿಕೇರಿ ನಗರಸಭೆಯ ಸ್ವಂತ ನಿಧಿ 3.35 ಕೋಟಿ ರೂ. ವೆಚ್ಚದ ರಸ್ತೆಯನ್ನು ಒಳಗೊಂಡಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಕಾರ್ಯಗಳು ನಡೆಸಿ, ಗುತ್ತಿಗೆದಾರರಿಗೆ ಕಾರ್ಯಾದೇಶವನ್ನು ನೀಡಲಾಗಿದೆ. ಶೀಘ್ರದಲ್ಲೆ ಕಾಮಗಾರಿಗಳು ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭಾ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿರುವ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಅವರು, ನಗರದಲ್ಲಿ ನಡೆದಿರುವ ನಡೆಯಲಿರುವ ಕಾಮಗಾರಿಗಳ ಬಗ್ಗೆ ಚರ್ಚೆಗೆ ಬರಲಿ ಎಂದು ಸವಾಲೊಡ್ಡಿದರು. 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನಗರಸಭೆಯಿಂದ 138.70 ಲಕ್ಷಗಳ ಅಭಿವೃದ್ಧಿ ಕಾರ್ಯ, ಎಸ್ಎಫ್ಸಿ ಯೋಜನೆಯಡಿ 9.32 ಲಕ್ಷ ವೆಚ್ಚದ ಕುಡಿಯುವ ನೀರಿನ ಕಾಮಗಾರಿ, ಎಸ್ಎಫ್ಸಿ ಯೋಜನೆಯಡಿ 9.77 ಲಕ್ಷ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿ, ನಗರದ ಎಲ್ಲಾ ವಾರ್ಡ್ಗಳಲ್ಲಿ 166.50 ಲಕ್ಷ ರೂ. ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನಗರಸಭೆಯ ಹದಿನಾರು ಬಿಜೆಪಿ ಸದಸ್ಯರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ರಾಜೇಶ್ ಯಲ್ಲಪ್ಪ ಅವರಿಗಿಲ್ಲ. ರಾಜಾಸೀಟಿನ ಪರಿಸರಕ್ಕೆ ಧಕ್ಕೆ ತರುವ ಗ್ಲಾಸ್ ಬ್ರ್ರಿಡ್ಜ್ ನಿರ್ಮಾಣ ಪ್ರಯತ್ನ ಇವರಿಂದ ನಡೆದ ಸಂದರ್ಭ, ಅವರದೇ ಪಕ್ಷದ ಹಿರಿಯ ನಾಯಕ ಎಂ.ಸಿ.ನಾಣಯ್ಯ ಅವರೆ ಛೀಮಾರಿ ಹಾಕಿದ್ದಾರೆ ಎಂದು ಹೇಳಿದರು. ದಸರಾ ಉತ್ಸವದ ಸಂದರ್ಭ ನಗರಸಭೆಯ ಸ್ವಂತ ನಿಧಿಯ 10 ಲಕ್ಷ ರೂ.ಗಳಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಸುವ ಸಂದರ್ಭವೆ, ಕೇಂದ್ರದ ಎನ್ಡಿಆರ್ಎಫ್ ನಿಧಿಯ 38 ಲಕ್ಷ ರೂ.ಗಳ ಕಾಮಗಾರಿ ನಡೆಸುವ ಪ್ರಯತ್ನವನ್ನು ರಾಜೇಶ್ ಯಲ್ಲಪ್ಪ ಮಾಡಿದ್ದರು. ಆ ಸಂದರ್ಭ ಬಿಜೆಪಿ ಅದಕ್ಕೆ ತಕ್ಕ ಉತ್ತರ ನೀಡಿ ಕಾಮಗಾರಿ ನಿಲ್ಲಿಸಿತ್ತು. ಇದೀಗ ಒಟ್ಟು ನಗರಸಭೆ ನಿಧಿ ಮತ್ತು ಎನ್ಡಿಆರ್ಎಫ್ ಅನುದಾನ ಸೇರಿದಂತೆ ಒಟ್ಟು 48 ಲಕ್ಷ ರೂ. ವೆಚ್ಚದಲ್ಲಿ ನಗರದ ರಸ್ತೆ ಕೆಲಸಗಳು ಇನ್ನು ಕೆಲವೇ ದಿನದಲ್ಲಿ ನಡೆಯಲಿದೆಯೆಂದು ಸ್ಪಷ್ಟಪಡಿಸಿದರು.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ರಾಜೇಶ್ ಯಲ್ಲಪ್ಪ ಅವರು ತಮ್ಮ ವೈಯಕ್ತಿಕ ಅಜೆಂಡಾಗಳನ್ನಷ್ಟೆ ಇರಿಸಿಕೊಂಡು, ಮೈಸೂರು ರಸ್ತೆಯ ಮಳಿಗೆಗಳ ಬಗ್ಗೆ ಗೊಂದಲ ಎಬ್ಬಿಸಿ ನಾಮನಿರ್ದೇಶಿತ ಸದಸ್ಯರೊಂದಿಗೆ ಸಭೆಯಿಂದ ಹೊರ ನಡೆದಿದ್ದಾರೆ. ವೈಯಕ್ತಿಕ ವಿಚಾರ ಬಿಟ್ಟು ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದಿರುವುವ ಧೋರಣೆ ಇವರ ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು. ಮಡಿಕೇರಿ ಕ್ಷೇತ್ರದ ಶಾಸಕರ ಅನುದಾನದ ಸಿಂಹಪಾಲನ್ನು ರಾಜೇಶ್ ಯಲ್ಲಪ್ಪ ಅವರು, ಶಾಸಕರ ಹಾದಿ ತಪ್ಪಿಸುವ ಮೂಲಕ ತಮ್ಮ ವಾರ್ಡ್ಗೆ ಬಳಸಿಕೊಂಡಿರುವುದಾಗಿ ಮಹೇಶ್ ಜೈನಿ ಆರೋಪಿಸಿದರು. ಬಿಜೆಪಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಅವರು ಮಾತನಾಡಿ, ಮೈಸೂರು ರಸ್ತೆಯ ಬಳಿಯಲ್ಲಿರುವ ಮಳಿಗೆಗಳನ್ನು ಎಲ್ಲಾ ಅಗತ್ಯ ಪರವಾನಗಿಗಳನ್ನು ಪಡೆದು ನಡೆಸಲಾಗುತ್ತಿದೆ. ಹೀಗಿದ್ದೂ ರಾಜೇಶ್ ಯಲ್ಲಪ್ಪ ಅವರು ತಮ್ಮ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರು ಬಿಜೆಪಿಯ ನಗರಸಭಾ ಆಡಳಿತ ಮಂಡಳಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಹತಾಶರಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ.ಅರುಣ್ ಕುಮಾರ್ ಅವರು ಮಾತನಾಡಿ, ನಗರಸಭೆಯ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುವುದನ್ನು ಖಂಡಿಸುತ್ತೇವೆ. ನಗರಸಭೆಯ ಬಿಜೆಪಿ ಆಡಳಿತಕ್ಕೆ ಪಕ್ಷ ಬೆಂಬಲವಾಗಿ ನಿಲ್ಲಲಿದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರ ಬಿಜೆಪಿ ಉಪಾಧ್ಯಕ್ಷ ಬಿ.ಪಿ.ಡಿಶು ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್ ಉಪಸ್ಥಿತರಿದ್ದರು.









