
ಮಡಿಕೇರಿ ನ.8 NEWS DESK : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಯೋವೃದ್ಧರ ಯೋಗ ಕ್ಷೇಮ ವಿಚಾರಿಸಿದ ಸಮಿತಿಯ ಪ್ರಮುಖರು ಕೇಕ್ ಕತ್ತರಿಸಿ ಸಿಹಿ ಹಂಚಿ, ಊಟದ ವ್ಯವಸ್ಥೆಯನ್ನು ಕಲ್ಪಿಸಿ ಸಂಭ್ರಮಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯ ಹಾಗೂ ಸಮಾಜ ಸೇವಕ ಡಾ.ಹೆಚ್.ವಿ.ದೇವದಾಸ್ ಅವರು, ದಲಿತ ಸಂಘರ್ಷ ಸಮಿತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಹಳ ವರ್ಷಗಳಿಂದ ತಾವು ವೃದ್ಧಾಶ್ರಮದ ನಿವಾಸಿಗಳೊಂದಿಗೆ ಓಡನಾಟ ಹೊಂದಿದ್ದು, ಮುಂದಿನ ದಿನಗಳಲ್ಲಿಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ವಯೋವೃದ್ಧರು ತಂಬಾಕು, ಧೂಮಪಾನದಂತಹ ದುಶ್ಚಟಗಳಿಂದ ದೂರವಿರಬೇಕು. ಆಗ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರು ಮಾತನಾಡಿ, ಕೊಡಗಿನಲ್ಲಿ ಕಳೆದ 20 ವರ್ಷಗಳಿಂದ ಕಾಣದಿರುವ ಅಭಿವೃದ್ಧಿ ಕಾರ್ಯಗಳು ಶಾಸಕದ್ವಯರಿಂದ ನಡೆಯುತ್ತಿದೆ. ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಾಣುತ್ತಿರುವ ಇಬ್ಬರು ಶಾಸಕರ ಗೆಲುವಿಗಾಗಿ ದಲಿತ ಸಂಘರ್ಷ ಸಮಿತಿ ಅವಿರತ ಪ್ರಯತ್ನ ನಡೆಸಿತ್ತು. ಇಂದು ಅವರ ಗೆಲುವು ಸಾರ್ಥಕತೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆದು ಉತ್ತಮ ಕಾರ್ಯಗಳನ್ನು ನಿಭಾಯಿಸುವ ಮೂಲಕ ಶಾಸಕದ್ವಯರು ರಾಜ್ಯಕ್ಕೆ ಮಾದರಿಯಾಗಬೇಕು. ಹಿರಿಯರ ಆಶೀರ್ವಾದ ಶಾಸಕರ ಮೇಲಿರಲಿ ಎನ್ನುವ ಉದ್ದೇಶದಿಂದ ಅವರ ಜನ್ಮದಿನವನ್ನು ಹಿರಿಯರೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು. ಶಿಕ್ಷಕರು ಮತ್ತು ವೃದ್ಧರು ದೇವರಿದ್ದಂತೆ, ಇದೇ ಕಾರಣಕ್ಕೆ ದಲಿತ ಸಂಘರ್ಷ ಸಮಿತಿಯು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಿರಿಯರನ್ನು ಗೌರವಿಸುತ್ತಾ ಬಂದಿದೆ. ವಯೋವೃದ್ಧರಿಗೆ ಶ್ವೆಟರ್, ಕಂಬಳಿ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ ಎಂದು ತಿಳಿಸಿದರು. ಪಕ್ಷದ ಕಾರ್ಯಕರ್ತರು ಹಾಗೂ ಸಂಘಟನೆಗಳು ಶಾಸಕರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗಳಿಗೆ ತಿಳಿಸಿ ಅವರ ಯಶಸ್ಸಿಗೆ ಪ್ರಯತ್ನಿಸಬೇಕು. ಇಬ್ಬರು ಶಾಸಕÀರಿಗೆ ‘ಕೊಡಗು ರತ್ನ’ ಪ್ರಶಸ್ತಿ ನೀಡಲು ದಲಿತ ಸಂಘರ್ಷ ಸಮಿತಿ ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಸಮಾವೇಶ ನಡೆಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ನಿವೃತ್ತ ಶಿಕ್ಷಕಿ ಪ್ರೇಮಾ ಕೃಷ್ಣಪ್ಪ ಅವರು ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿಕ್ಷಣ, ಸಂಘಟನೆ, ಹೋರಾಟದ ಧ್ಯೇಯವನ್ನಿಟ್ಟುಕೊಂಡು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತ ಬಂದಿದೆ. ವಯೋವೃದ್ಧರ ಬಗ್ಗೆ ಕಾಳಜಿಯನ್ನೂ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಿತಿಯ ಸದಸ್ಯೆ ಮಾಲತಿ ಹಾಗೂ ಆಶ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು. ವೃದ್ಧಾಶ್ರಮದ ವ್ಯವಸ್ಥಾಪಕ ಹೆಚ್.ಆರ್.ಸತೀಶ್ ಅವರು ಸ್ವಾಗತಿಸಿ, ವಂದಿಸಿದರು.









