
ಮಡಿಕೇರಿ ನ.13 NEWS DESK : ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನ.14, 15 ಮತ್ತು 16 ರಂದು ಮಡಿಕೇರಿಯಲ್ಲಿ ಕೊಡವ ಪ್ರೀಮಿಯರ್ ಲೀಗ್ ಸೀಸನ್-4 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಅಸೋಸಿಯೇಷನ್ ನ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಾಲ್ಕನೇ ವರ್ಷದ ಐಪಿಎಲ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದರು. ನ.14 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಜ ವಿಜಯ ಕುಮಾರ್, ಸಿಗ್ಮ ನೆಟ್ವರ್ಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಅವರೆಮಾದಂಡ ಶರಣ್ ಪೂಣಚ್ಚ, ಕೊಡವ ನಟಿ ಕಾಣತಂಡ ಬೀನ ಜಗದೀಶ್, ಕಾಫಿ ಬೆಳೆಗಾರ ಅಪ್ಪನೆರವಂಡ ನಂದಾ ಬೆಳ್ಯಪ್ಪ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ ರೂ.2 ಲಕ್ಷ, ದ್ವಿತೀಯ ರೂ.1 ಲಕ್ಷ, ತೃತೀಯ ರೂ.50 ಸಾವಿರ, ನಾಲ್ಕನೇ ವಿಜೇತ ತಂಡಕ್ಕೆ 25 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ ವೈಯುಕ್ತಿಕ ಬಹುಮಾನವನ್ನು ಕೂಡ ವಿತರಿಸಲಾಗುವುದು ಎಂದು ತಿಳಿಸಿದರು. ಅಸೋಸಿಯೇಷನ್ ನ ಉಪಾಧ್ಯಕ್ಷ ಚಕ್ಕೇರ ಕಾರ್ಯಪ್ಪ ಅವರು ಮಾತನಾಡಿ, ಅಂಜಿಗೇರಿ ನಾಡ್, ಡೀ ಕೋಚ್, ಟೀಮ್ ಕೊಡವ ಟ್ರೈಬ್, ಕೊಡವ ನೈಟ್ಸ್, ಕೊಡವ ವಾರಿಯರ್ಸ್, ಕೊಡವಮ್ಮೆ ಕಲ್ಟ್ಸ್, ಎಜೆ ಬಾಯ್ಸ್, ಟೀಮ್ ಮಹಾಗುರು, ಟೀಮ್ ಭಗವತಿ, ಮರ್ನಾಡ್ ಯುನೈಟೈಡ್, ಎಂಟಿಬಿ ರಾಯಲ್ಸ್ ಮತ್ತು ಕೊಡವ ಬೊಮ್ಮಂಗ ಒಳಗೊಂಡಂತೆ 12 ಫ್ರಾಂಚೈಸಿಗಳು ಮಾಲೀಕತ್ವ ಹೊಂದಿದ್ದಾರೆ ಎಂದರು. ಕಳೆದ ತಿಂಗಳು ಮೈಸೂರಿನ ಖಾಸಗಿ ಹೊಟೇಲ್ ಸಭಾಂಗಣವೊಂದರಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದೆ. ಎರಡು ಮೈದಾನಗಳಲ್ಲಿ ಆರು ಓವರ್ಗಳ 13 ಪಂದ್ಯಾವಳಿ ನಡೆಯಲಿದೆ. ಕೊಡಗು ಸೇರಿದಂತೆ ವಿವಿಧೆಡೆಯ ಕೊಡವ ಆಟಗಾರರು ತಂಡದಲ್ಲಿದ್ದಾರೆ. ಯೂಟ್ಯೂಬ್ ಮೂಲಕ ಪಂದ್ಯಾವಳಿಯ ನೇರ ಪ್ರಸಾರವಿದ್ದು, ಸುಮಾರು 5 ಸಾವಿರ ವೀಕ್ಷಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ನ ಕಾರ್ಯದರ್ಶಿ ಮುಕ್ಕಾಟಿರ ದೀಪಕ್ ಉಪಸ್ಥಿತರಿದ್ದರು.









