
ಮಡಿಕೇರಿ ನ.27 NEWS DESK : ಸಂವಿಧಾನ ಜೀವನದ ಅಂಗವಾಗಿದ್ದು, ನಮ್ಮೆಲ್ಲ ಕರ್ತವ್ಯ , ಕೆಲಸಗಳು ಸರಾಗವಾಗಿ ನಡೆಯಲು ಕಾರಣವೇ ನಮ್ಮ ಸಂವಿಧಾನ ಎಂದು ಎರಡನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಎಸ್.ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ , ತಾಲ್ಲೂಕು ಕಾನೂನು ಸೇವೆಗಳ ಸಮಿತಿ ವಿರಾಜಪೇಟೆ, ವಿರಾಜಪೇಟೆ ಕಾವೇರಿ ಕಾಲೇಜಿನ ಎನ್ಎಸ್ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ನಾವೆಲ್ಲ ಇಂದು ಇಷ್ಟು ಶಿಸ್ತಿನಿಂದ ಹಾಗೂ ಸ್ವತಂತ್ರದಿಂದ ಬದುಕಲು ಸಂವಿಧಾನವೇ ಮೂಲ ಕಾರಣ. ವಿವಿಧ ದೇಶಗಳಿಗೆ ನಮ್ಮ ದೇಶವನ್ನು ಹೋಲಿಕೆ ಮಾಡಿದರೆ ಸಂವಿಧಾನದ ಮಹತ್ವ ಏನೆಂದು ತಿಳಿಯುತ್ತದೆ. ನಮ್ಮ ಸಂವಿಧಾನ ಅದ್ಭುತವಾದ ಜೀವಂತ ಸಂವಿಧಾನವಾಗಿದ್ದು, ಇದನ್ನು ರಚಿಸಲು ಪಟ್ಟಂತಹ ಶ್ರಮವನ್ನು ಅರಿಯುವುದರೊಂದಿಗೆ, ರಚಿಸಿದಂತಹ ಅಂಬೇಡ್ಕರ್ ಹಾಗೂ ರಚನಾ ಸಮಿತಿಯಲ್ಲಿದ್ದ ಪ್ರತಿಯೊಬ್ಬರನ್ನು ಸ್ಮರಿಸಬೇಕು. ಸಂವಿಧಾನವು ಎಲ್ಲಾ ಕಾನೂನಿನ ತಾಯಿ ಎಂಬುದನ್ನು ಅರಿತು ಪ್ರತಿಯೊಬ್ಬರ ಹಕ್ಕು ಕರ್ತವ್ಯಗಳನ್ನು ಗೌರವಿಸಿ ಪಾಲಿಸಬೇಕೆಂದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಮಂಜುನಾಥ್ ಮಾತನಾಡಿ, ದೈನಂದಿನ ಜೀವನದಲ್ಲಿ ಸಂವಿಧಾನವು ಅವಿಭಾಜ್ಯ ಅಂಗವಾಗಿದೆ. ಸಂವಿಧಾನದ ಪ್ರಸ್ತಾವನೆಯನ್ನು ನಾವು ಅರ್ಥೈಸಿಕೊಂಡರೆ ಸಂಪೂರ್ಣ ಸಂವಿಧಾನವನ್ನು ಅರ್ಥೈಸಿಕೊಂಡಂತೆ. ಸಂವಿಧಾನ ಎಲ್ಲಾ ರೀತಿಯಲ್ಲೂ ನಮಗೆ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು . ನಾವು ನಮ್ಮ ಹಕ್ಕನ್ನು ಅನುಭವಿಸುವುದರೊಂದಿಗೆ ಕರ್ತವ್ಯವನ್ನು ಸಮರ್ಪಕವಾಗಿ ಪಾಲಿಸಿದರೆ ಉತ್ತಮ ಸಮಾಜವನ್ನು ನಿರ್ಮಿಸಬಹುದು. ಸಂವಿಧಾನವನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸುವುದರಿಂದ ಸಮಾಜದಲ್ಲಿ ಆದರ್ಶಪ್ರಾಯವಾಗಿ ಬದುಕಬಹುದೆಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರದೀಪ ಪೊತದಾರ ಮಾತನಾಡಿ, ಸಂವಿಧಾನವು ನಮಗೆ ವಿವಿಧ ಹಕ್ಕುಗಳನ್ನು ನೀಡಿದೆ. ಹಕ್ಕುಗಳನ್ನು ಅನುಭವಿಸುವುದರೊಂದಿಗೆ ಕರ್ತವ್ಯವನ್ನು ಸಮರ್ಪಕವಾಗಿ ಪಾಲಿಸಬೇಕು ಹಾಗೂ ಇತರರ ಹಕ್ಕುಗಳಿಗೆ ನಮ್ಮಿಂದ ತೊಂದರೆಯಾಗದಂತೆ ಸಂವಿಧಾನವನ್ನು ಗೌರವಿಸ ಬೇಕೆಂದರು. ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಪೂವಣ್ಣ ಮಾತನಾಡಿದರು. ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ , ಕಾರ್ಯದರ್ಶಿ ವೇದಿಕಾ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಪ್ರಾಂಶುಪಾಲೆ ಪಿ.ಕೆ.ವಿನೀತಾ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ದ ಟ್ರಸ್ಟಿ ಪ್ರಶಾಂತ್, ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ , ಉಪನ್ಯಾಸಕರಾದ ಡಾ.ವೀಣಾ, ಕಾವೇರಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು, ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ದ ಉಪನ್ಯಾಸಕರು , ವಿದ್ಯಾರ್ಥಿಗಳು ಹಾಜರಿದ್ದರು.










