
ಬೆಳಗಾವಿ ಡಿ.16 NEWS DESK : ಕೊಡಗು ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಪಟ್ಟೆದಾರರ ಹೆಸರನ್ನು ಪಹಣಿಯಲ್ಲಿ ನಮೂದಿಸಿರುವ ಸಮಸ್ಯೆಗೆ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವು ಪರಿಹಾರವಾಗಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು. 2025ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಪರಿಶೀಲನಾ ಸಮಿತಿ ಶಿಫಾರಸು ಮಾಡಿದಂತೆ, ಬೆಳಗಾವಿಯ ಅಧಿವೇಶನದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಮಂಡಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ವಿಧೇಯಕವನ್ನು ಸ್ವಾಗತಿಸುವುದಾಗಿ ಹೇಳಿದರು, ಕೊಡಗಿನ ಬಹಳಷ್ಟು ವರ್ಷಗಳ ಅತ್ಯಂತ ಜಟಿಲವಾದ ಸಮಸ್ಯೆ ಇದರಿಂದ ಪರಿಹಾರವಾಗಲಿದೆ ಎಂದು ಬಣ್ಣಿಸಿದರು. ಕಂದಾಯ ಸಚಿವರ ಇಚ್ಚಾ ಶಕ್ತಿ ಹಾಗೂ ಕಾಳಜಿಯಿಂದ ಈ ಕಾಯ್ದೆ ಜಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ, ಕೊಡಗಿನ ಜನತೆಯ ಪರವಾಗಿ ಸಚಿವರಿಗೆ ಹಾಗೂ ಪರಿಶೀಲನಾ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರಲ್ಲದೆ, ಈ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಪರಿಶೀಲನಾ ಸಮಿತಿ ಸಭೆಯಲ್ಲಿ ಪರಿಶೀಲನೆಯಾಗಿ ಪೊನ್ನಣ್ಣನವರ ಶ್ರಮದಿಂದ ಈ ತಿದ್ದುಪಡಿ ಕಾಯ್ದೆ ಬಂದಿದೆ ಎಂದು ಆರ್ ಅಶೋಕ್ ಹೇಳಿದರು, ಹಾಗೆಯೇ ಪರಿಹಾರದ ಮಾರ್ಗೋಪಾಯಗಳನ್ನು ಕಾಯ್ದೆಯಲ್ಲಿ ತಿಳಿಸಬೇಕು ಎಂದರು. ಜಮ್ಮಬಾಣೆ ಬಹಳ ವರ್ಷದ ಸಮಸ್ಯೆಯಾಗಿದೆ, ಪೊನ್ನಣ್ಣ ಅವರ ಒತ್ತಡದ ಮೇಲೆ ಮತ್ತು ಕೊಡಗು ಜನರ ಒತ್ತಾಯದ ಮೇಲೆ ಮಾಡಿದ್ದೀರಿ, ನಾನು ಬಿಲ್ಲನ್ನು ಸ್ವಾಗತ ಮಾಡುತ್ತೇನೆ ಎಂದು ಅರಗ ಜ್ಞಾನೇಂದ್ರ ಹೇಳಿದರು. ಪರಿಶೀಲನಾ ಸಮಿತಿ ಸದಸ್ಯರಾದ ಅರವಿಂದ್ ಬೆಲ್ಲದ್ ಅವರು ಮಾತನಾಡಿ, ಕೊಡಗು ಜಿಲ್ಲೆಯ ಜನರ ತೊಂದರೆಯನ್ನು ಅನುಭವಿಸುತ್ತಿರುವುದನ್ನು ಕೂಲಂಕುಶವಾಗಿ ಸಮಿತಿ ಸಭೆಯಲ್ಲಿ ಚರ್ಚಿಸಿ ಉತ್ತಮವಾದ ಬದಲಾವಣೆಯನ್ನು ಈ ಬಿಲ್ ನಲ್ಲಿ ತೆಗೆದುಕೊಂಡು ಬಂದಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಕಾನೂನು ಉದ್ದೇಶ ಒಳ್ಳೆಯದಾಗಿರುತ್ತದೆ. ಪೊನ್ನಣ್ಣ ಅವರು ಹೇಳಿದಂತೆ ಕಾನೂನು ನಿಯಮಾವಳಿಗಳು ರೂಪಿಸುವ ಮೊದಲು ಪರಿಶೀಲನಾ ಸಮಿತಿ ಪರಿಶೀಲಿಸಿದ ನಂತರ ಜಾರಿಗೆ ಬಂದರೆ ಜನರಿಗೆ ಒಳ್ಳೆಯದಾಗುತ್ತದೆ ಎಂದರು.









