ಮಂಗಳೂರು ಡಿ.17 NEWS DESK : ಕ್ರಿಯೆಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟನೆ, ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ ಸಂಶೋಧನಾ ಕೃತಿ ‘ಭೂತಾರಾಧನೆ- ಮಾಯದ ನಡೆ ಜೋಗದ ನುಡಿ’ ಲೋಕಾರ್ಪಣೆ ಕಾರ್ಯಕ್ರಮವು ಡಿ.20 ರಂದು ನಡೆಯಲಿದೆ. ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಎಲ್ಎಫ್ ರಸ್ಕಿನ್ಹ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿಗಳು, ಜಾನಪದ ವಿದ್ವಾಂಸರಾದ ಪ್ರೊ.ಬಿ.ಎ.ವಿವೇಕ್ ರೈ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ಸಾಹಿತಿ ಡಾ.ರಾಜಶೇಖರ್ ಹಳೆಮನೆ ಕೃತಿಯ ಕುರಿತು ಅವಲೋಕನ ಮಾಡಲಿದ್ದಾರೆ. ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ಡಾ.ಪ್ರವೀಣ್ ಮಾರ್ಟಿಸ್ ಎಸ್ಜೆ, ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ, ಲೇಖಕರು, ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾರ್ಕಳಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಅಶ್ವತ್ ಎಸ್.ಎಲ್. ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದೈವನರ್ತಕರಾದ ಶೇಖರ ಪರವ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. :: ಡಾ.ಕೆ.ಚಿನ್ನಪ್ಪ ಗೌಡರ ಸಂಶೋಧನಾ ಕೃತಿ :: ಡಾ.ಕೆ.ಚಿನ್ನಪ್ಪ ಗೌಡರ ‘ಭೂತಾರಾಧನೆ- ಜಾನಪದೀಯ ಅಧ್ಯಯನ’ ಗ್ರಂಥವು 35 ವರ್ಷಗಳ ಹಿಂದೆ ಪ್ರಕಟವಾಗಿದ್ದು, ಈ ಗ್ರಂಥದ ವಿಸ್ತೃತ ಆವೃತ್ತಿಯೇ ‘ಭೂತಾರಾಧನೆ ? ಮಾಯದ ನಡೆ ಜೋಗದ ನುಡಿ’ ಸಂಪುಟ. ಭೂತಾರಾಧನೆಯ ಪರಿವರ್ತನೆಯ ನೆಲೆಗಳು, ಸಾಮಾಜಿಕ ಧ್ವನಿಗಳು, ಸಾಂಸ್ಕೃತಿಕ ಅನನ್ಯತೆ, ಭೂತಾರಾಧನೆಯ ಅಧ್ಯಯನ ವಿಸ್ತಾರಗೊಂಡ ಸೂಕ್ಷ್ಮತೆಯ ಆಯಾಮಗಳು, ಪಾಡ್ದನ ಪಠ್ಯಗಳು ಆರಾಧನೆಯ ರಂಗಪಠ್ಯಗಳಾಗುವ ಪ್ರಕ್ರಿಯೆ ಇವುಗಳಿಗೆ ಸಂಬಂಧಿಸಿದ ಹೊಸ ಅಧ್ಯಾಯಗಳು ಈ ವಿಸ್ತ್ರತ ಆವೃತ್ತಿಯಲ್ಲಿವೆ. ಚಿತ್ರಗಳು, ರೇಖಾಚಿತ್ರಗಳು, ತಖ್ತೆಗಳು ಹಾಗೂ ಐದು ದಶಕಗಳ ಹಿಂದಿನ ಭೂತಾರಾಧನೆಯ ಅಧಿಕೃತ ಮಾಹಿತಿಗಳು ಈ ಆವೃತ್ತಿಯ ಸಾಂಸ್ಕೃತಿಕ ಮಹತ್ವವನ್ನು ಹೆಚ್ಚಿಸಿವೆ.











