ಮಡಿಕೇರಿ NEWS DESK ಡಿ.29 : ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ ಯಲ್ಲಿ ಚೆಪ್ಪುಡಿರ ಮತ್ತು ಕುಲ್ಲೇಟಿರ ತಂಡಗಳು ಫೈನಲ್ ಪ್ರವೇಶಿಸಿವೆ. ಡಿ.30 ರಂದು ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ರೋಚಕ ಅಂತಿಮ ಪಂದ್ಯ ನಡೆಯಲಿದೆ. ಇಂದು ನಡೆದ ಸೆಮಿಫೈನಲ್ ನಲ್ಲಿ ಮಂಡೇಪಂಡ ಮತ್ತು ಚೆಪ್ಪುಡಿರ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡ 4-3 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಚೆಪ್ಪುಡಿರ ಚೇತನ್ ಎರಡು, ಪ್ರಣವ್ ಹಾಗೂ ಮಾದಪ್ಪ ತಲಾ ಒಂದು ಗೋಲು ಬಾರಿಸಿದರು. ಮಂಡೇಪಂಡ ಪರ ದಿಲನ್ ದೇವಯ್ಯ ಎರಡು ಹಾಗೂ ಚಂದನ್ ಕಾರ್ಯಪ್ಪ ಒಂದು ಗೋಲು ದಾಖಲಿಸಿದರು. ಕುಲ್ಲೇಟಿರ ಮತ್ತು ಕುಪ್ಪಂಡ ತಂಡಗಳು ನಿಗಧಿತ ಅವಧಿಯಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ನಂತರ ನಡೆದ ಶೂಟ್ ಔಟ್ ನಲ್ಲಿ 3-0 ಗೋಲುಗಳ ಅಂತರದಲ್ಲಿ ಕುಲ್ಲೇಟಿರ ಗೆಲುವು ಸಾಧಿಸಿತು. ಮೊದಲ ಪಂದ್ಯದ ಉದ್ಘಾಟನೆಯ ಸಂದರ್ಭ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಬಾಡಗ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕಂಬೀರಂಡ ಸತೀಶ್ ಮುತ್ತಪ್ಪ, ಎರಡನೇ ಪಂದ್ಯದ ಉದ್ಘಾಟನೆಯ ಸಂದರ್ಭ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮೂರ್ನಾಡು ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಚೌರಿರ ಜಗತ್ ತಿಮ್ಮಯ್ಯ ಹಾಗೂ ಕಾರ್ಯದರ್ಶಿ ಪೆಮ್ಮುಡಿಯಂಡ ಅಪ್ಪಣ್ಣ ಉಪಸ್ಥಿತರಿದ್ದರು. ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು.










