
ಮಡಿಕೇರಿ ಜ.5 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏ.27 ರಿಂದ ಮೇ 17ರವರೆಗೆ ‘ಗೌಡ ಕುಟುಂಬಗಳ’ ಸಮ್ಮಿಲನ ಕ್ರೀಡಾಕೂಟ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕೊಡಗು ಗೌಡ ಯುವ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡ ಜನಾಂಗದ ಒಗ್ಗಟ್ಟು, ಅಭಿವೃದ್ಧಿ, ಹಕ್ಕೊತ್ತಾಯ, ಕ್ರೀಡೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಾಗಿ ಕಳೆದ ಹಲವು ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಇದೀಗ ಬಾಳಾಡಿ ಮನೋಜ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕೊಡಗು ಗೌಡ ವೇದಿಕೆಯ ನೂತನ ಸಮಿತಿ ರಚನೆಯಾಗಿದ್ದು, ಈ ಸಮಿತಿ ವತಿಯಿಂದ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು. 10 ಕುಟುಂಬ 18 ಗೋತ್ರದ ಗೌಡ ಜನಾಂಗದ 27ನೇ ವರ್ಷದ ‘ಗೌಡ ಕುಟುಂಬಗಳ’ ಸಮ್ಮಿಲನ ಕ್ರೀಡಾಕೂಟವು ಏ.27 ರಿಂದ ಮೇ 17ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಗೌಡ ಜನಾಂಗಬಾಂಧವರಿಗೆ ಕುಟುಂಬವಾರು “ಸೂಪರ್ 5 ರಿಂಕ್ ಹಾಕಿ” ಕ್ರೀಡಾಕೂಟ, ಗುಂಡು ಹೊಡೆಯುವ ಸ್ಪರ್ಧೆ ಮತ್ತು ಮಿಸ್ಟರ್ ಗೌಡ, ಮಿಸ್ ಗೌಡತಿ ಎಂಬ ಸಾಂಸ್ಕೃತಿಕ ಕಲರವವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಿಶಿತ್ ಮಾದಯ್ಯ ಹೇಳಿದರು. ಕಳೆದ ವರ್ಷ ನಡೆದ ಗೌಡ ಜನಾಂಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ 292 ಕುಟುಂಬಗಳು ಭಾಗವಹಿಸಿದ್ದವು. ಈ ಬಾರಿ 300ಕ್ಕೂ ಹೆಚ್ಚು ಕುಟುಂಬ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಇದೇ ಪ್ರಪ್ರಥಮ ಬಾರಿಗೆ ಗೌಡ ಜನಾಂಗಬಾಂಧವರಿಗೆ ಕುಟುಂಬವಾರು ಹಾಕಿ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ. ಇದು ಐದು ಆಟಗಾರರನ್ನು ಒಳಗೊಂಡ ರಿಂಕ್ ಹಾಕಿ ಮಾದರಿಯಲ್ಲಿ ನಡೆಯಲಿದೆ. ಸುಮಾರು 100 ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಗೌಡ ಜನಾಂಗದ ಸಾಂಸ್ಕೃತಿಕ ಕ್ರೀಡೆಯಾದ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು 12ತ್ ಬೋರ್, 0.22 ರೈಫಲ್ ಮತ್ತು ಏರ್ ರೈಫಲ್ ಎಂಬ ಮೂರು ವಿಭಾಗದಲ್ಲಿ ಆಯೋಜನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಗೌಡ ಜನಾಂಗದ ಯುವ ಪ್ರತಿಭೆಗಳನ್ನು ಗುರುತಿಸಲು “ಮಿಸ್ಟರ್ ಗೌಡ” ಮತ್ತು “ಮಿಸ್ ಗೌಡತಿ” ಎಂಬ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಗೌಡ ಸಂಸ್ಕೃತಿ, ಆಚಾರ ವಿಚಾರ, ಭಾಷೆ ಮತ್ತು ದೈಹಿಕ ಸದೃಢತೆಯನ್ನು ಪರೀಕ್ಷಿಸಿ ವಿಜೇತರನ್ನು ಘೋಷಿಸಲಾಗುತ್ತದೆ ಎಂದು ಹೇಳಿದರು. ಜಿಪಿಎಲ್ ಸೀಸನ್-4 :: ಕೊಡಗು ಗೌಡ ಯುವ ವೇದಿಕೆ ಯುವ ಪ್ರತಿಭೆ ಗಳನ್ನು ಗುರುತಿಸಿ ಪ್ರೊಫೆಷನಲ್ ಕ್ರಿಕೆಟಿಂಗ್ ಕೆರಿಯರ್ ರೂಪಿಸಿಕೊಳ್ಳಲು ಜಿಪಿಎಲ್ ಸೀಸನ್-4 ನ್ನು ಡಿ.16 ರಿಂದ ಡಿ.31 ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡದ ಎಲ್ಲಾ ಒಕ್ಕಲಿಗ ಬಾಂಧವರು ಭಾಗವಹಿಸಬಹುದಾಗಿದೆ. ಕುಟುಂಬವಾರು ಟೆನ್ನಿಸ್ ಬಾಲ್ ಕ್ರೀಡಾಕೂಟ ಹಾಗೂ ಮೊದಲ ಬಾರಿಗೆ ಆಯೋಜನೆ ಗೊಳ್ಳುತ್ತಿರುವ ರಿಂಕ್ ಹಾಕಿ ಕ್ರೀಡಾಕೂಟಕ್ಕೆ ಕುಟುಂಬಗಳು ಹೆಸರು ನೋಂದಾಯಿಸಲು ಕುಟ್ಟನ ಪ್ರಶಾಂತ್ 7019671130, ಪೂಜಾರಿರ ಮಿತ್ರ 9663253025, ಪರಿಚನ ಸೋನಿ 7676452107 ಹಾಗೂ “ಮಿಸ್ಟರ್ ಗೌಡ” ಮತ್ತು “ಮಿಸ್ ಗೌಡತಿ” ಸ್ಪರ್ಧೆಗೆ 9008198955 ಸಂಪರ್ಕಿಸಬಹುದಾಗಿದೆ ಎಂದು ರಿಶಿತ್ ಮಾದಯ್ಯ ತಿಳಿಸಿದರು. *ಅನುದಾಕ್ಕೆ ಒತ್ತಾಯ* ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್ ಮಾತನಾಡಿ, ಕೊಡಗು ಗೌಡ ಯುವ ವೇದಿಕೆ ನಡೆಸುವ ಕ್ರೀಡಾಕೂಟಕ್ಕೆ 2023 ರಿಂದ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ, ಈ ಹಿಂದಿನ ವರ್ಷಗಳಲ್ಲಿ ಅನುದಾನ ನೀಡಲಾಗಿದೆ ಎಂದರು. ಜನಾಂಗ ಬಾಂಧವರು ಹಾಗೂ ಹಿತೈಷಿಗಳ ನೆರವಿನಿಂದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುಂದುವರೆಸುತ್ತಾ ಬಂದಿದ್ದೇವೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಬಳಿ ಅನುದಾನದ ಕುರಿತು ಚರ್ಚಿಸಲಾಗಿದೆ. ಶಾಸಕರು ಈ ವರ್ಷ ಅನುದಾನವನ್ನು ಸರಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಕ್ರೀಡಾಕೂಟಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಬಹಳಷ್ಟು ಅನುದಾನದ ಅವಶ್ಯಕತೆ ಇರುವುದರಿಂದ ಶಾಸಕರುಗಳು ಅನುದಾನ ಬಿಡುಗಡೆ ಮಾಡುವಂತೆ ಬಾಳಾಡಿ ಮನೋಜ್ ಕುಮಾರ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆಯ ಉಪಾಧ್ಯಕ್ಷರಾದ ಪರಿಚನ ಸತೀಶ್, ಎಡಿಕೇರಿ ಪ್ರಸನ್ನ, ಕಾರ್ಯದರ್ಶಿ ಕೆದಂಬಾಡಿ ಕಾಂಚನ ಗೌಡ ಹಾಗೂ ಆಹಾರ ಸಮಿತಿ ಅಧ್ಯಕ್ಷರಾದ ಫೈಕೇರ ಗಗನ್ ದೇವಯ್ಯ ಉಪಸ್ಥಿತರಿದ್ದರು.









