
ಮಡಿಕೇರಿ ಜ.8 NEWS DESK : ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ‘ವಿಕಸಿತ ಭಾರತ್ – ರೋಜಗಾರ್ ಮತ್ತು ಆಜೀವಿಕಾ ಮಿಷನ್ ಖಾತರಿ (ವಿಬಿ ಜಿರಾಮ್ ಜಿ) ಎಂದು ಬದಲಾಯಿಸಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರದ ತಕರಾರಿಲ್ಲ. ಬದಲಿಗೆ ಈ ಯೋಜನೆಗೆ ತನ್ನ ಪಾಲು ಹಣ ಶೇ.40 ನ್ನು ನೀಡಬೇಕಲ್ಲ ಎನ್ನುವ ಆತಂಕ ಕಾಡುತ್ತಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವೇಳೆ ರಾಜ್ಯ ಕಾಂಗ್ರೆಸ್ ಸರಕಾರ ‘ವಿಬಿ ಜಿರಾಮ್ ಜಿ’ ಯೋಜನೆಯನ್ನು ಜಾರಿಗೆ ತಾರದಿದ್ದಲ್ಲಿ ಕೇಂದ್ರ ಸರಕಾರ ಅನಿವಾರ್ಯವಾಗಿ ಪರ್ಯಾಯ ಚಿಂತನೆ ಮಾಡಬೇಕಾಗುತ್ತದೆ. ಜನಪರ ಕಾಳಜಿ ಇದ್ದರೆ ಸರಕಾರ ಅನುಷ್ಠಾನಗೊಳಿಸುತ್ತದೆ, ತಪ್ಪಿದಲ್ಲಿ ಎರಡೂವರೆ ವರ್ಷ ಕಳೆದ ನಂತರ ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತದೆ, ಆಗ ನಾವು ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುತ್ತೇವೆ ಎಂದರು. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ.90 ರಷ್ಟು ಹಣವನ್ನು ಕೇಂದ್ರ ಸರಕಾರ ನೀಡುತ್ತಿತ್ತು ಮತ್ತು ಉಳಿದ ಶೇ.10 ರಷ್ಟು ಹಣವನ್ನು ರಾಜ್ಯ ಸರಕಾರ ನೀಡಬೇಕಾಗಿತ್ತು. ಆದರೆ ‘ವಿಬಿ ಜಿರಾಮ್ ಜಿ’ ಯೋಜನೆಯಲ್ಲಿ ಶೇ.60 ರಷ್ಟು ಹಣವನ್ನು ಕೇಂದ್ರ ಸರಕಾರ ನೀಡುತ್ತಿದ್ದು, ಶೇ.40 ರಷ್ಟನ್ನು ರಾಜ್ಯ ಸರಕಾರ ನೀಡಬೇಕಾಗುತ್ತದೆ. ಯೋಜನೆಯ ಯಶಸ್ವಿ ಜಾರಿಗೆ ಸಮಾನ ಜವಾಬ್ದಾರಿ ಇರಬೇಕು ಮತ್ತು ದುರುಪಯೋಗವಾಗುವುದನ್ನು ತಡೆಯಬೇಕು ಎನ್ನುವ ಕಾರಣದಿಂದ ಪಾಲು ಹಣದ ಮೊತ್ತವನ್ನು ರಾಜ್ಯ ಸರಕಾರಕ್ಕೆ ಹೆಚ್ಚು ನಿಗಧಿ ಮಾಡಲಾಗಿದೆ ಎಂದು ತಿಳಿಸಿದರು. ‘ವಿಬಿ ಜಿರಾಮ್ ಜಿ’ ಯೋಜನೆ 266 ಕಾಮಗಾರಿಗಳನ್ನು ಸೃಷ್ಟಿ ಮಾಡಲಿದ್ದು, ಆಯಾ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯ ಸರಕಾರ ಯೋಜನೆಯನ್ನು ತಯಾರು ಮಾಡಬಹುದಾಗಿದೆ. ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಾಬ್ ಕಾರ್ಡ್ ದುರುಪಯೋಗವಾಗುತ್ತಿತ್ತು ಮತ್ತು ಹಣ ಪೋಲಾಗುತ್ತಿತ್ತು. ಅರ್ಹ ಫಲಾನುಭವಿಗಳಿಗೆ ಉದ್ಯೋಗ ಲಭಿಸುತ್ತಿರಲಿಲ್ಲ, ಕೆಲಸ ಮಾಡದೆ ಹಣ ಡ್ರಾ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಕೇಂದ್ರ ಸರಕಾರ ತಂದಿರುವ ಯೋಜನೆಯಲ್ಲಿ ಯಾವುದೇ ದುರುಪಯೋಗಕ್ಕೆ ಅವಕಾಶವಿಲ್ಲ. ಬೆಳಗ್ಗೆ ಮತ್ತು ಸಂಜೆ ಕಾಮಗಾರಿಯಲ್ಲಿ ತೊಡಗುವವರ ಛಾಯಾಚಿತ್ರವನ್ನು ತೆಗೆಯಬೇಕಾಗುತ್ತದೆ. ವಾರದ ಲೆಕ್ಕ ನೀಡಬೇಕು ಮತ್ತು ಸಕಾಲದಲ್ಲಿ ಆಡಿಟಿಂಗ್ ನಡೆಸಬೇಕಾಗುತ್ತದೆ. ಇದರಿಂದ ದುರುಪಯೋಗಕ್ಕೆ ಅವಕಾಶವಿರುವುದಿಲ್ಲ, ಅರ್ಹರಿಗೆ ಉದ್ಯೋಗ ಒದಗಿಸುವುದು, ಲೋಪಗಳನ್ನು ಸರಿಪಡಿಸುವುದು, ಹಣ ಸೋರಿಕೆಯಾಗುವುದನ್ನು ತಡೆಯುವುದು ಮತ್ತು ಗ್ರಾಮೀಣ ಅಭಿವೃದ್ಧಿಯೇ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು. ಒಳ್ಳೆಯ ಉದ್ದೇಶದಿಂದ ಅಂದಿನ ಯುಪಿಎ ಸರಕಾರ ಆರಂಭಿಸಿದ ಉದ್ಯೋಗ ಖಾತ್ರಿ ಯೋಜನೆ 2008ರಲ್ಲಿ ಅನುಷ್ಠಾನಗೊಂಡಿತು. ಆದರೆ ಪ್ರಸ್ತುತ ಈ ಯೋಜನೆಯಲ್ಲಿ ಲೋಪದೋಷಗಳು ಮತ್ತು ದುರುಪಯೋಗದ ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಹಲವು ಸುಧಾರಣೆಗಳನ್ನು ಮಾಡಿ ‘ವಿಬಿ ಜಿರಾಮ್ ಜಿ’ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಗೆ ತಕ್ಕಂತೆ ಹೆಸರನ್ನು ಬದಲಾಯಿಸಲಾಗಿದೆಯೇ ಹೊರತು ಎಲ್ಲೂ ಮಹಾತ್ಮ ಗಾಂಧಿ ಅವರಿಗೆ ಅಗೌರವ ತೋರಿಲ್ಲ. ಕೇಂದ್ರ ಸರಕಾರ ಸ್ವಚ್ಛ ಭಾರತ್ ಯೋಜನೆಯ ಮೂಲಕ ಗಾಂಧಿ ಅವರಿಗೆ ಅಪಾರ ಗೌರವ ನೀಡಿದೆ. ನೋಟುಗಳಲ್ಲಿ ಗಾಂಧಿ ಅವರ ಭಾವಚಿತ್ರವಿದೆ ಎಂದು ಪ್ರತಾಪ್ ಸಿಂಹ ಸಮರ್ಥಿಸಿಕೊಂಡರು. 2047 ರಲ್ಲಿ ವಿಕಸಿತ ಭಾರತ ನಿರ್ಮಾಣವಾಗಬೇಕೆನ್ನುವ ಸದುದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ರಾಜ್ಯ ಸರಕಾರ ಶೇ.40 ರಷ್ಟು ಪಾಲಿನ ಹಣ ನೀಡಲು ಆತಂಕ ಪಡುತ್ತಿದೆ, ಅಲ್ಲದೆ ದುರುಪಯೋಗಕ್ಕೆ ಅವಕಾಶವಿಲ್ಲ ಎನ್ನುವ ಚಿಂತೆ ಆರಂಭವಾಗಿದೆ. ಇದೇ ಕಾರಣಕ್ಕೆ ಯೋಜನೆಯ ಬಗ್ಗೆ ತಕರಾರು ತೆಗೆದಿದೆ. ದೇಶದ ಯಾವುದೇ ಭಾಗದಲ್ಲಿ ‘ವಿಬಿ ಜಿರಾಮ್ ಜಿ’ ಗೆ ಅಪಸ್ವರವಿಲ್ಲ, ಆದರೆ ಕರ್ನಾಟಕದ ಕಾಂಗ್ರೆಸ್ ಸರಕಾರ ಮಾತ್ರ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳಿಂದ ರಸ್ತೆಗೆ ತೇಪೆ ಹಾಕುವುದಕ್ಕೂ ಹಣವಿಲ್ಲದೆ ಪರದಾಡುತ್ತಿರುವ ರಾಜ್ಯ ಸರಕಾರ, ಕೇಂದ್ರ ಸರಕಾರದ ಕಡೆ ಬೆರಳು ಮಾಡುವುದನ್ನು ಮತ್ತು ಸುಳ್ಳು ಹೇಳಿ ಜನರ ಹಾದಿ ತಪ್ಪಿಸುವುದನ್ನು ಮೊದಲು ನಿಲ್ಲಿಸಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್ ಕುಮಾರ್ ಉಪಸ್ಥಿತರಿದ್ದರು.









