
ವಿರಾಜಪೇಟೆ ಜ.10 NEWS DESK : ಜೀವನದಲ್ಲಿ ನಮ್ಮ ಮನಸ್ಸಿನ ಯೋಚನೆ, ಉತ್ತಮವಾದ ಚಿಂತನೆಗಳೇ ಎಲ್ಲದಕ್ಕೂ ಕಾರಣವಾಗುತ್ತವೆ. ನಾವು ಯೋಚಿಸುವ ರೀತಿ, ನಡೆಯುವ ಮಾರ್ಗ ಸೂಕ್ತವಾಗಿದ್ದರೆ ನಮ್ಮ ಬದುಕು ಉತ್ತಮವಾಗಿರುತ್ತದೆ ಎಂದು ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಬ್ರಾಹ್ಮಣ ಮಠದ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ನುಡಿದರು. ವಿರಾಜಪೇಟೆಯ ನಿಸರ್ಗ ಬಡಾವಣೆಯ ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ದಕ್ಷಿಣ ಕೊಡಗು ದೈವಜ್ಞ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸ್ವಾಮಿಜಿಗಳು, ನಾಲ್ಕು ದಶಕಗಳ ಹಿಂದೆ ದೈವಜ್ಞ ಸಮಾಜ ತೀರಾ ಹಿಂದುಳಿದಿತ್ತು. ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಬೇಕೆಂಬ ಸಂಕಲ್ಪ, ಶ್ರಮದಿಂದ ಈಗ ಉತ್ತಮ ಪ್ರಗತಿ ಕಂಡಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹದಲ್ಲಿ ನಮ್ಮತನ ಕಳೆದುಕೊಳ್ಳಬಾರದು. ಮಕ್ಕಳಿಗೆ ಸನಾತನ ಪರಂಪರೆಯ ಸಂಸ್ಕಾರ ನೀಡುವ ಹೊಣೆ ಪಾಲಕರದ್ದು ಎಂದ ಶ್ರೀಗಳು, ಸಮಾಜ ಬಾಂಧವರೆಲ್ಲರೂ ಸಂಘಟಿತರಾಗಿ ಶ್ರಮಿಸಿದರೆ ಅದು ಅಸಾಧ್ಯವೇನಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಆಸ್ತಿ, ಅಂತಸ್ತು, ಹಣ ದ್ವಿಗುಣಗೊಂಡಿದೆ. ಆದರೆ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯಗಳು ಮರೆಯಾಗುತ್ತಿವೆ. ಹಿಂದಿನ ದಿನಗಳಲ್ಲಿ ಮನೆಗಳಲ್ಲಿ ಬಡತನ, ಕಷ್ಟಗಳ ಮಧ್ಯೆ ನಮ್ಮ ಸಂಸ್ಕೃತಿ, ಆಚಾರ ವಿಚಾರ ಎಲ್ಲವನ್ನು ಸಮರ್ಪಕವಾಗಿ ಆಚರಿಸುತ್ತಿದ್ದರಿಂದ ಮನೆ, ಮನಗಳಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸಿರುತ್ತಿತ್ತು. ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಜೀವಂತವಾಗಿದ್ದರೆ ನಾವು ಬದಲಾಗಬೇಕಿಲ್ಲ. ಇಲ್ಲದಿದ್ದರೆ ನಾವು ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ದೈವಜ್ಞ ದರ್ಶನ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿದ್ದು, ದೈವಜ್ಞ ಸಮಾಜದವರು ಶ್ರೀಮಠದ ಉತ್ತರಾಧಿಕಾರಿ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳ ಪರಿಚಯ ಮಾಡುವುದರ ಜತೆ ಸಮಾಜ ಸಂಘಟನೆ ಇದರ ಉದ್ದೇಶವಾಗಿದೆ ಎಂದರು. ಕಿರಿಯ ಯತಿಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಸನಾತನ ಧರ್ಮ ನಮ್ಮ ಬದುಕಿನಲ್ಲಿ ಹೇಗೆ ನಡೆಯಬೇಕು ಎಂಬ ಮಾರ್ಗದರ್ಶನ ಮಾಡುತ್ತದೆ. ವಿನಯದಿಂದ ಬಾಗಿ ಬದುಕುವವರು ಭಾಗ್ಯವಂತರಾಗುತ್ತಾರೆ, ಅಹಂಕಾರದಿಂದ ಬಾಳುವವನ ಬದುಕು ಹೀನಾಯವಾಗುತ್ತದೆ. ಸತ್ಯ, ಪ್ರೀತಿ, ವಿಧೇಯತೆಯಿಂದ ಧರ್ಮದ ಹಾದಿಯಲ್ಲಿ ಜೀವನ ನಡೆಸುವವರಿಗೆ ಪ್ರಪಂಚದಲ್ಲಿ ಗೌರವ ದೊರೆಯುತ್ತದೆ, ಅಂತವರು ದೇವರಿಗೂ ಪ್ರಿಯರಾಗುತ್ತಾರೆ. ಅದೇ ಮಾರ್ಗದಲ್ಲಿ ಸಾಗಲು ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಭಕ್ತಿಯಿಂದ ಭಗವಂತನ ಆರಾಧನೆ, ಸ್ಮರಣೆ, ಧ್ಯಾನ ಮಾಡಿದರೆ ಸಾಕು ಭಗವಂತ ಎಲ್ಲರಿಗೂ ಒಲಿಯುತ್ತಾನೆ. ಸಮಾಜದ ಪ್ರತಿ ಕುಟುಂಬದ ಮಕ್ಕಳು ಸಂಸ್ಕಾರವಂತರಾಗಬೇಕು. ಮೂಲ ಆಚಾರ, ವಿಚಾರ, ಸಂಸ್ಕಾರದಿಂದ ದೂರವಾಗುತ್ತಿದ್ದೇವೆ. ಹೆಸರಿಂದ ಮಾತ್ರ ಶ್ರೇಷ್ಠನಾದರೆ ಸಾಲದು. ನಮ್ಮ ಕರ್ತವ್ಯ, ವಿಚಾರ, ಮನಸ್ಥಿತಿಯಲ್ಲಿಯೂ ಕೂಡ ಶ್ರೇಷ್ಠರಾಗಬೇಕು. ದಕ್ಷಿಣ ಕೊಡಗಿನಲ್ಲಿ ದೈವಜ್ಞ ಸಮಾಜದವರು ಇಂತಹ ಧಾರ್ಮಿಕ ಕಾರ್ಯಗಳಿಗೆ ಒಗ್ಗಟ್ಟಾಗಿ ಕಾರ್ಯಕ್ರಮ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ದೈವಜ್ಞ ಬ್ರಾಹ್ಮಣ ಶ್ರೀಮಠದ ಟ್ರಸ್ಟಿ ಬೆಂಗಳೂರಿನ ಗಣಪತಿ ಶೇಟ್ ಮಾತನಾಡಿ, ವೈದಿಕ ಕಾಲದ ಅದ್ವೈತ ಪರಂಪರೆಯ ದೈವಜ್ಞ ಬ್ರಾಹ್ಮಣರು ತಮ್ಮ ಆಚಾರ ವಿಚಾರ ಸಂಪ್ರದಾಯಗಳಲ್ಲಿ ಇನ್ನಷ್ಟು ನಿಷ್ಠೆ ಹೊಂದಿ ತಮ್ಮ ಐತಿಹಾಸಿಕ ಪರಂಪರೆಯನ್ನು ಪುನರುಜ್ಜೀವನ ಗೊಳಿಸಬೇಕಾಗಿದೆ. ನಾಲ್ಕು ದಶಕಗಳ ಹಿಂದೆ ಸಮಾಜಕ್ಕೊಂದು ಕುಲಗುರು, ಶ್ರೀ ಮಠ ಹೊಂದಿದ ಬಳಿಕ ದೈವಜ್ಞ ಸಮಾಜವು ಸರ್ವಾಂಗೀಣ ಅಭಿವೃದ್ಧಿ ಹೊಂದಿದೆ ಎಂದರು. ಕರ್ಕಿ ಮಠದ ಪ್ರಧಾನ ಪುರೋಹಿತರಾದ ಯೋಗೇಶ್ ಭಟ್ ಮಾತನಾಡಿ, ಸಂಸ್ಕಾರ ಸಂಪ್ರದಾಯ, ಕೌಟುಂಬಿಕ ಹೊಣೆಗಾರಿಕೆ, ಸಮಾಜಮುಖಿ ಚಿಂತನೆ ಮತ್ತು ಮೌಲ್ಯಧಾರಿದ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಉಲ್ಲಾಸ್ ಶೇಟ್, ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಉಭಯ ಶ್ರೀಗಳವರನ್ನು ನಗರದ ಆಂಜನೇಯ ದೇವಸ್ಥಾನದಿಂದ ಪಟ್ಟಣದ ಮುಖ್ಯಬೀದಿಯಲ್ಲಿ ಕಾರು, ಬೈಕ್ ರ್ಯಾಲಿ ಹಾಗೂ ಮಂಗಳವಾದ್ಯ, ಭಜನಾ ನೃತ್ಯ, ಟ್ಯಾಬ್ಲೋಗಳ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಸಭಾಂಗಣದವರೆಗೆ ಬರಮಾಡಿಕೊಳ್ಳಲಾಯಿತು. ವೇದಿಕೆಯಲ್ಲಿ ದೈವಜ್ಞ ಬ್ರಾಹ್ಮಣ ಶ್ರೀಮಠದ ಟ್ರಸ್ಟಿಗಳಾದ ಬೆಂಗಳೂರಿನ ಗಣಪತಿ ಶೇಟ್, ಗದಗಿನ ಅರುಣ್ ವರ್ಣೆಕರ ಅವರನ್ನು ಸನ್ಮಾನಿಸಲಾಯಿತು. ದೈವಜ್ಞ ಸಮಾಜದ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಶ್ರೀ ದೈವಜ್ಞ ಕುಲ ಗುರುಗಳಿಗೆ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ನಾರಾಯಣ, ಖಜಾಂಚಿ ಆರ್.ರಾಜೇಶ್ ಶೇಟ್, ಪ್ರದಾನ ಕಾರ್ಯದರ್ಶಿ ಬಾಲಕೃಷ್ಣ, ವೆಂಟೇಶ್, ಸೌಮ್ಯ ನಾಗೇಶ್, ಮುಂತಾದ ಗಣ್ಯರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.









