
ವಿರಾಜಪೇಟೆ ಜ.10 NEWS DESK : ಬಾಳುಗೋಡು ಗ್ರಾಮದ ಕಂಡಿಮಕ್ಕಿ ಎಂಬಲ್ಲಿ ಅತ್ಯಂತ ಬಡ ಕುಟುಂಬವೊಂದರ ಮನೆಯ ಕನಸನ್ನು ಸಮಾಜಸೇವಕ ಬಿ.ಎಂ.ಗಣೇಶ್ ಮುಂದೆ ನಿಂತು ನನಸು ಮಾಡಿದ್ದಾರೆ. ಕಂಡಿಮಕ್ಕಿಯ ದಿವಂಗತ ಸನ್ನಿ ಎಂಬುವವರ ಪತ್ನಿ ಮಂಜುಳಾ ತಮ್ಮ ಇಬ್ಬರು ಮಕ್ಕಳೊಂದಿಗೆ ತೀರ ದುರ್ಬಲ ಮನೆಯಲ್ಲಿ ವಾಸವಿದ್ದರು. ಪುಟ್ಟ ಜೋಪಡಿಯಲ್ಲಿ ವಾಸಿಸುತ್ತಿದ್ದ ಇವರನ್ನು ಕಂಡು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್ ಸೂರು ಒದಗಿಸಿಕೊಡುವ ಭರವಸೆ ನೀಡಿದ್ದರು. ಕುಟುಂಬದ ದಯಾನೀಯ ಸ್ಥಿತಿಯನ್ನು ಸ್ಥಳೀಯರಾದ ಮಧು ಅವರ ಮೂಲಕ ತಿಳಿದುಕೊಂಡ ಗಣೇಶ್ ತಮ್ಮ ಸ್ವಂತ ಹಣದಲ್ಲಿ ಎರಡು ಲಕ್ಷ ವೆಚ್ಚದ ಮೂರು ಕೋಣೆಗಳುಳ್ಳ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಹಲವಾರು ವರ್ಷಗಳಿಂದ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದ ಬಡ ಕುಟುಂಬಗಳಿಗೆ ಈಗಾಗಲೇ 5 ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಹೊಸಬೆಳಕು ಎಂದು ಮನೆಗೆ ಫಲಕ ಅಳವಡಿಸಿ ಮಂಜುಳಾ ಅವರಿಗೆ ಮನೆಯ ಕಿಲಿಕೈಯನ್ನು ಹಸ್ತಾಂತರ ಮಾಡಿದ್ದಾರೆ. ಬಳಿಕ ಮಾತನಾಡಿದ ಬಿ.ಎಂ. ಗಣೇಶ್ ಮಾತನಾಡಿ, ಕುಟುಂಬ ವಾಸಿಸುತ್ತಿರುವ ಗುಡಿಸಲು ನೋಡಿ ತುಂಬಾ ಬೇಸರವಾಗಿತ್ತು. ಮಂಜುಳಾ ಅವರ ಪತಿ ಅಗಲುವ ವೇಳೆ ಈಕೆ ಗರ್ಭಿಣಿಯಾಗಿದ್ದರು. ಇನ್ನೆರಡು ಪುಟ್ಟ ಹೆಣ್ಣು ಮಕ್ಕಳು. ಇವರ ಪರಿಸ್ಥಿತಿ ನೋಡಿ, ನಮ್ಮಿಂದ ಆದ ಸಹಾಯ ಮಾಡಬೇಕೆಂದು ಮನೆ ನಿರ್ಮಾಣ ಮಾಡಿದ್ದೇನೆ. ನಮಗೆ ದೊರಕುವ ಆದಾಯದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎನ್ನುವುದು ನನ್ನ ಮನಸ್ಥಿತಿ. ಹೀಗಾಗಿ ಸ್ವಂತ ಹಣದಿಂದ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡಲು ಯಶಸ್ವಿಯಾಗಿದೆ. ಸಹಾಯವನ್ನು ಮಾಡಿದ ನೆಮ್ಮದಿ ಇದೆ ಈಗಾಗಲೇ ಐದು ಮನೆಗಳನ್ನ ನನ್ನ ಸ್ವಂತ ಹಣದಿಂದ ಕಟ್ಟಿಸಿಕೊಟ್ಟಿದ್ದೇನೆ. ಮೂವರು ಹೆಣ್ಣು ಮಕ್ಕಳ ಪುಟ್ಟ ಸಂಸಾರದೊಂದಿಗೆ ಜೀವನ ನಡೆಸುತ್ತಿರುವ ಇವರಿಗೆ ಗಣೇಶ್ ದಂಪತಿಗಳು ಶುಭ ಹಾರೈಸಿದರಲ್ಲದೆ, ಮನುಷ್ಯರೆಲ್ಲ ಒಂದೇ ಅವರ ನೋವುಗಳು ಒಂದೇ ಈ ಮನೆ ಸೌಹಾರ್ದದ ಸಂಕೇತವಾಗಿ ಎಲ್ಲರಿಗೂ ಮಾದರಿಯಾಗಬೇಕು. ನನ್ನ ಎಲ್ಲ ಯಶಸ್ಸಿನ ಹಿಂದೆ ಪತ್ನಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಗಣೇಶ್ ಹೇಳಿದರು. ಫಲಾನುಭವಿ ಮಂಜುಳಾ ಮಾತನಾಡಿ ಪತಿ ನಿಧನದ ನಂತರ ಜೀವನ ನಡೆಸುವುದು ಕಷ್ಟಕರವಾಗಿತ್ತು. ನನ್ನ ಪರಿಸ್ಥಿತಿಯನ್ನ ಅರ್ಥೈಸಿಕೊಂಡ ಗಣೇಶ ನಮ್ಮ ಸಂಕಷ್ಟಕ್ಕೆ ಮಿಡಿದು ಮನೆಯನ್ನ ನಿರ್ಮಿಸಿಕೊಟ್ಟು ನಮಗೆ ಸಹಾಯ ಹಸ್ತ ಚಾಚಿದ್ದಾರೆ. ಇವರ ಸಹಕಾರದಿಂದ ನಮ್ಮ ಕನಸು ನನಸಾಗಿದೆ. ಈಗ ಪುಟ್ಟ ಮಗು ಇದ್ದು ಈ ಸುಸಂದರ್ಭದಲ್ಲಿ ಮಗುವಿನ ನಾಮಕರಣ ಮಾಡಿದ್ದೇವೆ ಎಂದು ಹೇಳಿದರು. ಸ್ಥಳೀಯರಾದ ಮಧು ಅವರು ಮಾತನಾಡಿ, ಇಂದಿನ ಕಾಲದಲ್ಲಿ ಸ್ವಾರ್ಥ ಪರ ಜೀವನ ಸಾಗಿಸುವ ಜನರ ನಡುವೆ ಗಣೇಶ್ ಅವರು ಬಡವರ ಸಂಕಷ್ಟಕ್ಕೆ ಮಿಡಿಯುವ ಕೆಲಸ ಮಾಡುತ್ತಿದ್ದಾರೆ. ಎಷ್ಟಿದ್ದರೂ ಕೊಡುವ ಮನಸ್ಸು ಯಾರಿಗೂ ಇರುವುದಿಲ್ಲ. ಗಣೇಶ್ ಅವರು 5 ಮನೆಗಳನ್ನು ಉದಾರವಾಗಿ, ಸ್ವಾರ್ಥ ರಹಿತವಾಗಿ ಕಟ್ಟಿಸಿಕೊಟ್ಟು ಬಡವರ ಪಾಲಿನ ದೇವರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೆರುಂಬಾಡಿಯ ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಂ. ರಮೇಶ್ ಮಾತನಾಡಿ, ಬಹಳ ವರ್ಷಗಳಿಂದ ಇವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಡವರ ಪಾಲಿಗೆ ಆಶಾಕಿರಣರಾಗಿದ್ದಾರೆ. ಇವರ ಸೇವೆ ಎಲ್ಲರಿಗೂ ಮಾದರಿ. ಇವರಿಗೆ ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಶಕ್ತಿ ತುಂಬಬೇಕು ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭ ಬಿ.ಜಿ. ಸುಮಾ ಗಣೇಶ್, ಮಂಜಪ್ಪ ಪೂಜಾರಿ, ಪಾರ್ವತಿ ಬಿ.ಎಂ. ಚುಪ್ಪ ನಾಗರಾಜ್, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಎಂ.ಪಿ. ನವೀನ್, ಬಿ.ಎಂ. ರಮೇಶ್, ನಾರಾಯಣ ಸೇರಿದಂತೆ ಗ್ರಾಮಸ್ಥರು ಹಾಜರಿದ್ದು ಗಣೇಶ್ ಅವರ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಫಲಾನುಭವಿ ಕುಟುಂಬದಿಂದ ಗಣೇಶ್ ಅವರನ್ನು ಕೃತಜ್ಞತೆಯಿಂದ ಸನ್ಮಾನಿಸಲಾಯಿತು. ಪೆರುಂಬಾಡಿಯ ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷ ಬಿ.ಎಂ.ರಮೇಶ್, ಖಜಾಂಚಿ ಟಿ.ಎಸ್. ರಮೇಶ್ ಅವರು ಗಣೇಶ್ ಅವರನ್ನು ಸನ್ಮಾನಿಸಿದರು.









