
ಬೆಂಗಳೂರು ಜ.13 NEWS DESK : ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದರು. ಚುನಾವಣೆ ಹಾಗೂ ಚುನಾವಣಾ ನೀತಿಗಳು ಮತ್ತು ಪ್ರಜಾಪ್ರಭುತ್ವ ಆಡಳಿತ ಎಂಬ ವಿಷಯದ ಬಗ್ಗೆ ಮಾತನಾಡಿದ ಶಾಸಕರು, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮಹತ್ವ ಹಾಗೂ ಚುನಾವಣೆ ಪ್ರಕ್ರಿಯೆಗಳ ರೀತಿ -ನೀತಿಗಳ ಬಗ್ಗೆ ವಿಸ್ತಾರವಾಗಿ ವಿವರಿಸಿ ಯುವ ವಕೀಲರ ಜೊತೆ ಸಂವಾದ ನಡೆಸಿದರು. ಭಾರತೀಯರಾದ ನಮಗೆ ನಮ್ಮ ಸಂವಿಧಾನ ನೀಡಿದ ಅತ್ಯಂತ ಮಹತ್ವದ ವಿಷಯವೇ ಪ್ರಜಾಪ್ರಭುತ್ವ ಆಡಳಿತ. ಇಲ್ಲಿ ಪ್ರಜೆಗಳು ತಮ್ಮನ್ನು ಆಳಬೇಕಾಗಿರುವ ವ್ಯಕ್ತಿಯನ್ನು ಆಯ್ಕೆ ಮಾಡಲು ಸಂಪೂರ್ಣ ಸ್ವಾತಂತ್ರ್ಯರು ಮತ್ತು ದೇಶದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡರೆ, ಇದು ಅತ್ಯಂತ ಮಹತ್ವದ ಹಾಗೂ ಗುರುತರ ಜವಾಬ್ದಾರಿ ಆಗಿರುತ್ತದೆ. ವಕೀಲರಿಗೆ ಸಂವಿಧಾನವನ್ನು ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವ ಮಹತ್ವದ ಜವಾಬ್ದಾರಿ ಇದೆ. ಇದನ್ನು ಎಲ್ಲರೂ ಯಶಸ್ವಿಯಾಗಿ ನಿಭಾಯಿಸಬೇಕೆಂದು ಪ್ರಜಾಪ್ರಭುತ್ವ ಆಡಳಿತದ ಮಹತ್ವ ಹಾಗೂ ಕಾನೂನುಗಳನ್ನು ವಿವರಿಸಿದರು.









