
ಮಡಿಕೇರಿ ಜ.13 NEWS DESK : ಕೂಡು ಕುಟುಂಬದಲ್ಲಿ ಅಡುಗೆ ಮನೆಗಷ್ಟೆ ಸೀಮಿತವಾಗಿದ್ದ ಅಮ್ಮನನ್ನು, ಅಪ್ಪ ಕೊಡಿಸಿದ್ದ ಬಜಾಜ್ ಚೇತಕ್ ಸ್ಕೂಟರ್ನಲ್ಲಿ ಭಾರತದ ಎಲ್ಲಾ ರಾಜ್ಯವನ್ನು ಒಳಗೊಂಡಂತೆ ಸುತ್ತಮುತ್ತಲ ಮೂರು ದೇಶಗಳಿಗೆ ಕರೆದೊಯ್ದು, ಅಲ್ಲಿನ ಪುಣ್ಯ ಸ್ಥಳ ಪ್ರವಾಸಿ ತಾಣಗಳಿಗೆ ಭೇಟಿ ಮಾಡಿಸಿ ಮನಃಸಂತೋಷ ಪಡುತ್ತಿರುವ ಡಿ. ಕೃಷ್ಣಕುಮಾರ್ ಮತ್ತು ಅವರಮ್ಮ ಚೂಡಾ ರತ್ನಮ್ಮ ಮಂಜಿನ ನಗರಿ ಮಡಿಕೇರಿಗಿಂದು ಭೇಟಿ ನೀಡಿದರು. ಮೂಲತಃ ಮೈಸೂರಿನವರಾದ ಕೃಷ್ಣ ಕುಮಾರ್ ಅವರು ತಮ್ಮಮ್ಮನೊಂದಿಗೆ 2018 ರ ಜ.16 ರಂದು ಆರಂಭಿಸಿರುವ ಪ್ರವಾಸ ಇಂದಿಗೂ ಮುಂದುವರೆದಿದೆ. ಇವರು ಇಲ್ಲಿಯವರೆಗೆ ಭಾರತದ ವಿವಿಧ ರಾಜ್ಯಗಳು, ನೆರೆಯ ನೇಪಾಳ, ಬೂತಾನ್, ಮ್ಯಾನ್ಮಾರ್ ದೇಶ ಸೇರಿದಂತೆ ಒಂದು ಲಕ್ಷ ಕಿ.ಮೀ.ಗೂ ಹೆಚ್ಚಿನ ದೂರವನ್ನು ಕ್ರಮಿಸಿ, ಅಮ್ಮನಿಚ್ಛೆಯ ಪ್ರದೇಶಗಳನ್ನು, ತೀರ್ಥ ಕ್ಷೇತ್ರಗಳ ದರ್ಶನವನ್ನು ಅವರಿಗೆ ಮಾಡಿಸಿದ್ದಾರೆ. ಅಪ್ಪ ದಕ್ಷಿಣಾ ಮೂರ್ತಿಗಳು ಕಾಲವಾದ ಬಳಿಕ, ಅವರು ಕೊಡಿಸಿದ್ದ ‘ಬಜಾಜ್ ಚೇತಕ್’ ಸ್ಕೂಟರ್ನಲ್ಲೆ ತಂದೆಯನ್ನು ಕಾಣುತ್ತಿದ್ದೇನೆ. ಇದರಿಂದಾಗಿ ಸ್ಕೂಟರ್ನಲ್ಲಿ ಅಮ್ಮನೊಂದಿಗಿನ ಪ್ರವಾಸ ಅಂದರೆ ಅದು ಅಪ್ಪನನ್ನು ಒಳಗೊಂಡ ನಮ್ಮ ಕುಟುಂಬದ ಪ್ರವಾಸವೆಂದೆ ಭಾವಿಸಿದ್ದೇನೆ ಎನ್ನುವ ಕೃಷ್ಣ ಕುಮಾರ್, ಈ ಹಿಂದೆ ಕರ್ಪೋರೇಟ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದವರು. ಬಳಿಕ ಸ್ವಯಂ ನಿವೃತ್ತಿಯನ್ನು ಪಡೆದು, ತಾಯಿಯ ಸಂತೋಷದಲ್ಲೆ ತಮ್ಮ ಸಂತೋಷವನನ್ನು ಕಾಣುತ್ತ ಊರಿಂದೂರಿಗೆ, ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಪಯಣಿಸುತ್ತ ಅಲ್ಲಿನ ಸುಂದರ ತಾಣಗಳನ್ನು, ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾ ಸಾಗಿರುವುದೊಂದು ಅಚ್ಚರಿ. ಅಮ್ಮನ ಮಾತಿಗೆ ‘ಸಂಕಲ್ಪ’ದ ಶರಾ…. ಅಪ್ಪ ಕಾಲವಾದ ಬಳಿಕ ಮಗ ಕೃಷ್ಣಕುಮಾರ್ ಅವರು ಒಮ್ಮೆ ಲೋಕಾಭಿರಾಮವಾಗಿ ಮಾತನಾಡುತ್ತ ತಾಯಿಯನ್ನು ಕೇಳುತ್ತಾರೆ ‘ಅಮ್ಮ ನೀನು ಯಾವೆಲ್ಲ ಊರು ನೋಡಿದ್ದೀಯ..?’. ಇದಕ್ಕೆ ಅವರಮ್ಮ ‘ ಅಡುಗೆ ಮನೆ ಬಿಟ್ಟು ಬೇರೇನನ್ನು ನೋಡಿಲ್ಲ. ಪಕ್ಕದ ಬೇಲೂರು-ಹಳೆಬೀಡನ್ನೆ ನೋಡಿಲ್ಲ’. ಆ ಸಂದರ್ಭ ಕೃಷ್ಣಕುಮಾರ್ ‘ಅಮ್ಮ ನಿನಗೆ ಇಡೀ ಭಾರತವನ್ನು ತೋರಿಸುತ್ತೇನೆ’ ಎಂದು ನುಡಿದದ್ದಲ್ಲದೆ, ಅದನ್ನು ಸಂಕಲ್ಪವಾಗಿಸಿಕೊಂಡು ಅಮ್ಮನೊಂದಿಗೆ ಬಜಾಜ್ ಸ್ಕೂಟರ್ ಹತ್ತಿದವರು ಇಂದಿಗೂ ಇಳಿದಿಲ್ಲ! ಅಮ್ಮ-ಮಗ ಬಹುಶಃ ರಾಷ್ಟ್ರದ ಯಾವುದೇ ಭಾಗವನನ್ನು ಬಿಡದೆ ಸಂದರ್ಶಿಸುತ್ತಿದ್ದಾರೆ. ‘ಭಾರತದ ಯಾವುದೇ ಪ್ರದೇಶಗಳಿಗೆ ತೆರಳಿದಾಗಲು ಅಲ್ಲಿನ ಜನತೆ ನಮ್ಮನ್ನು ಅತ್ಯಂತ ಪ್ರೀತಿಯಿಂದ ಕಂಡಿದ್ದಾರೆ ಆತಿಥ್ಯವನ್ನು ನೀಡಿದ್ದಾರೆ. ಈ ರಾಷ್ಟ್ರದ ಸಂಸ್ಕøತಿಯಲ್ಲಿ ಅತಿಥಿ ಸತ್ಕಾರದ ವಿಶೇಷ ಅಂತಃಕರಣ ಹಾಸುಹೊಕ್ಕಾಗಿದೆ’ ಎಂದು ತಿಳಿಸುವ ಕೃಷ್ಣ ಕುಮಾರ್, 75 ರ ಇಳಿವಯಸ್ಸಿನ ಅಮ್ಮನೊಂದಿಗೆ ತಮ್ಮ ಸ್ಕೂಟರ್ನಲ್ಲೆ ಉತ್ತರ ಭಾರತದ ಗಡಿಭಾಗದ 13,700 ಅಡಿ ಎತ್ತರದ ಪ್ರದೇಶಕ್ಕೂ ಭೇಟಿ ನೀಡಿದ್ದಾರೆ. ಮಗನೊಂದಿಗಿನ ಪ್ರಯಾಣ ಯಾವತ್ತೂ ಆರಾಮದಾಯಕವಾಗಿದೆ. ಆತನ ಸಂಕಲ್ಪದಂತೆ ನಾವಿಬ್ಬರು ವಿವಿಧೆಡೆಗಳಿಗೆ ಭೇಟಿ ನೀಡುತ್ತಿರುವುದಾಗಿ ಚೂಡಾ ರತ್ನಮ್ಮ ತಿಳಿಸುತ್ತಾರೆ. ಅಮ್ಮ ಮಗನ ಸುದೀರ್ಘ ಪ್ರವಾಸವನ್ನು ಗುರುತಿಸಿದ ಬಜಾಜ್ ಸಂಸ್ಥೆ ಇವರಿಗೆ ‘ಬಜಾಜ್ ಇಲೆಕ್ಟ್ರಿಕ್ ಸ್ಕೂಟರ್’ನ್ನು ಕೊಡುಗೆಯಾಗಿ ನೀಡಿರುವುದು ವಿಶೇಷ. :: ಆತ್ಮೀಯ ಸ್ವಾಗತ :: ಮಡಿಕೇರಿಗೆ ಆಗಮಿಸಿದ ಕೃಷ್ಣ ಕುಮಾರ್ ಮತ್ತು ಚೂಡಾ ರತ್ನಮ್ಮ ಅವರನ್ನು ಇಲ್ಲಿನ ಬಾಲ ಭವನದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭ ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ರೋಟರಿ ಸಹಾಯಕ ರಾಜ್ಯಪಾಲ ದಿಲನ್ ಚಂಗಪ್ಪ, ಜಿಲ್ಲಾ ರೋಟರಿ ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ರೊಟೇರಿಯನ್ ಬಿ.ಜಿ. ಅನಂತಶಯನ, ರೋಟರಿ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ., ಅನಿತಾ ಪೂವಯ್ಯ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.









