
ನಾಪೋಕ್ಲು ಜ.16 NEWS DESK : ಮಕರ ಸಂಕ್ರಾಂತಿ ಭೂಮಿಗೂ ರೈತನಿಗೂ ಗೋವಿಗೂ ಇರುವ ಅವಿನಾಭಾವ ಸಂಬಂಧವನ್ನು ಸೂಚಿಸುವ ಹಬ್ಬ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ನಿರ್ದೇಶಕಿ ಕೂಡಕಂಡಿ ಸೋನಿ ಸುದೀಪ್ ಅವರು ಹೇಳಿದರು. ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಚೇರಂಬಾಣೆ ಗೌಡ ಸಮಾಜದ ಆಯೋಜಿಸಿದ ಮಕರ ಸಂಕ್ರಾಂತಿ ಹಬ್ಬ ಹಾಗೂ ಒಕ್ಕೂಟದ 2026ನೇ ವರ್ಷದ ಮಾಸಿಕ ಸಭೆಯಲ್ಲಿ ಅವರು ಭಾಗವಹಿಸಿ ಸಂಕ್ರಮಣದ ಆಚರಣೆ ಮತ್ತು ಪದ್ಧತಿ ಪರಂಪರೆ ಬಗ್ಗೆ ಬೆಳಕು ಚೆಲ್ಲಿದರು. ರೈತರಿಗೆ ಇದು ಸುಗ್ಗಿ ಹಬ್ಬ. ದವಸ ಧಾನ್ಯಗಳು ಮನೆ ತುಂಬಿ ಸಂಭ್ರಮಿಸುವ ಕಾಲ. ಆದ್ದರಿಂದ ಮಾನವರಿಗೂ ಪ್ರಾಣಿಗಳಿಗೂ ಯಥೇಚ್ಛವಾಗಿ ದಾನ ನೀಡುತ್ತಾ ವರ್ಷವಿಡೀ ರೈತನಿಗೆ ಹೆಗಲುಕೊಟ್ಟ ಗೋವನ್ನು ಪೂಜಿಸುತ್ತಾ ಅವುಗಳ ದೇಹದಲ್ಲಿ ಕ್ರಿಮಿಕೀಟಗಳು ಬಾಧಿಸದಂತೆ ಅವುಗಳನ್ನು ಕಿಚ್ಚು ಹಾಯಿಸಿ ಸಂರಕ್ಷಣೆ ಮಾಡುವಂತಹ ಜಾನಪದ ಹಬ್ಬವೂ ಸಂಕ್ರಾಂತಿ ಎಂದರು. ಮಕರ ಸಂಕ್ರಾಂತಿಯನ್ನು ದೇಶದ ಎಲ್ಲೆಡೆಯಲ್ಲೂ ನಾನಾ ಹೆಸರುಗಳಿಂದ ಆಚರಿಸುತ್ತಾರೆ. ಒಟ್ಟಿನಲ್ಲಿ ಸಂಕ್ರಾಂತಿ ರೈತರ ಬಾಳಿನಲ್ಲಿ ಸಂಭ್ರಮದ ಸುಗ್ಗಿ ಹಬ್ಬ ಸಮೃದ್ಧಿಯ ಸಂಕೇತದ ಹಬ್ಬ ಎಂದು ಹೇಳಿದರು. ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಮಾತನಾಡಿ ಮಕರ ಸಂಕ್ರಾಂತಿ ಸೂರ್ಯನನ್ನು ಪೂಜಿಸುವ ಹಬ್ಬ ಸೂರ್ಯ ತನ್ನ ಪಥವನ್ನು ಉತ್ತರಾಯಣಕ್ಕೆ ಬದಲಿಸುವ ಪುಣ್ಯಕಾಲ. ಸಂಕ್ರಾಂತಿ ಸಮಯದಲ್ಲಿ ಅತಿ ಹೆಚ್ಚು ಚಳಿ ಇರುವ ಕಾರಣ ನಮ್ಮ ದೇಹದಲ್ಲಿ ಎಣ್ಣೆಯ ಅಂಶ ಕಡಿಮೆಯಾಗಿ ಚರ್ಮ ಬಿಗಿ ಯಾಗಿರುತ್ತದೆ. ಈ ಸಂದರ್ಭದಲ್ಲಿ ನಾವು ಸೇವಿಸುವ ಎಳ್ಳು ಬೆಲ್ಲದಿಂದ ನಮ್ಮ ಚರ್ಮಕ್ಕೆ ಎಣ್ಣೆ ಅಂಶ ಕಬ್ಬಿಣಾಂಶ ಯಥೇಚ್ಛವಾಗಿ ದೊರಕಿ ಚರ್ಮ ಕಾಂತಿ ಗೊಳ್ಳುತ್ತದೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಇದಲ್ಲದೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಸೂರ್ಯ ದೇವರಿಗೆ ಪ್ರಿಯವಾದ ಎಳ್ಳನ್ನು ಅರ್ಪಿಸಲಾಗುವುದು ಎಂದರು. ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರು ಅಧ್ಯಕ್ಷತೆ ವಹಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೂರನ ಸುಶೀಲ ಅಪ್ಪಾಜಿ ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಬೈಮನ ಜ್ಯೋತಿ ತಿಮ್ಮಯ್ಯ, ನಿವೃತ್ತ ಶಿಕ್ಷಕಿ ಪಾಣ ತಲೆ ತಾರಾಮಣಿ ಸೇರಿದಂತೆ ಮುಖ್ಯ ಪಟ್ಟವರು ಭಾಗವಹಿಸಿದ್ದರು. ಜಾನಪದ ಕೃಷಿ ಪರಿಕರಗಳು ದವಸ ಧಾನ್ಯ ಕಬ್ಬು ಸೇರಿಸಿ ಹಾಲು ಉಕ್ಕಿಸುವ ಶುಭ ಸಂಕೇತ ವನ್ನು ಸೂಚಿಸುವ ಸಂಭ್ರಮದ ಹಬ್ಬದಂದು ದೀಪ ಬೆಳಗಿ ಧಾನ್ಯಲಕ್ಷ್ಮಿಗೆ ಪೂಜೆಸಲ್ಲಿಸಿ ಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಒಕ್ಕೂಟದ ಸದಸ್ಯರು ಸಂಕ್ರಾಂತಿಯ ಸಂಭ್ರಮವನ್ನು ಆಚರಿಸಿದರು. ಸಮಿತಿ ಸದಸ್ಯರು ಸುಗ್ಗಿ ಹಾಡುಗಳನ್ನು ಹಾಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಒಕ್ಕೂಟದ ಸದಸ್ಯರಾದ ತಳೂರು ಮಮತಾ ಹಿತೇಶ್ ಮತ್ತು ಗುಡ್ಡೆಮನೆ ಲೀನಾ ಮಹೇಶ್ ಅವರು ಮಹಿಳಾ ಹಗ್ಗ ಜಗ್ಗಾಟದ ತಂಡಕ್ಕೆ ಸಮವಸ್ತ್ರವನ್ನು ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ ಸಮವಸ್ತ್ರವನ್ನು ಹಗ್ಗ ಜಗ್ಗಾಟ ತಂಡದ ನಾಯಕಿ ಸಿರಕಜೆ ಹಿತಾ ತೀರ್ಥ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ವರದಿ : ದುಗ್ಗಳ ಸದಾನಂದ.









