
ಮಡಿಕೇರಿ ಜ.16 NEWS DESK : ಬಾಲ್ಯದಿಂದಲೇ ಹಿಂದೂ ಸಂಸ್ಕಾರವನ್ನು ಮನವರಿಕೆ ಮಾಡಿಕೊಡುವ ಮತ್ತು ಧರ್ಮ ಬೋಧನೆಯನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಮೂರ್ನಾಡಿನಲ್ಲಿ ಹಿಂದೂ ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆಗೊಂಡಿತು. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮೂರ್ನಾಡಿನ ಶಿಕ್ಷಕರು ಹಾಗೂ ಅರ್ಚಕರಾದ ಶ್ರೀಹರಿ ಮತ್ತು ಮಮತಾ ಶ್ರೀಹರಿಯವರ ನಿವಾಸದ ಪೂಜಾ ಕೇಂದ್ರದಲ್ಲಿ ದೀಪ ಬೆಳಗಿಸಿ ಮಕ್ಕಳು ಮತ್ತು ಪೋಷಕರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕೇಂದ್ರವನ್ನು ಉದ್ಘಾಟಿಸಲಾಯಿತು. ನಂತರ ಮಕ್ಕಳಿಗೆ ಧರ್ಮ ಬೋಧನೆಯನ್ನು ನೀಡಿ ಸಂಸ್ಕಾರ ಪಾಠ ಮಾಡಲಾಯಿತು. ಹಾದಿ ತಪ್ಪಿ ಖಿನ್ನತೆಗೆ ಒಳಗಾಗುತ್ತಿರುವ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವ ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಪೋಷಕರ ಒತ್ತಡದ ಜೀವನದ ನಡುವೆ ಮಕ್ಕಳಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಮನಗಂಡು ಹಾಗೂ ಹಿಂದೂ ಧರ್ಮ ಬೋಧನೆಯನ್ನು ವ್ಯಾಪಕಗೊಳಿಸುವ ಉದ್ದೇಶದಿಂದ ಹಿಂದೂ ಬಾಲ ಸಂಸ್ಕಾರ ಕೇಂದ್ರವನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲಿ ವಿವಿಧೆಡೆ ಕೇಂದ್ರ ಆರಂಭಗೊಳ್ಳಲಿದೆ ಎಂದು ಪ್ರಮುಖರು ವಿವರಿಸಿದರು. ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಮೊದಲ ದಿನ 26ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕೇಂದ್ರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಸಂಕ್ರಾಂತಿ ಪ್ರಯುಕ್ತ ನೆರೆದಿದ್ದವರಿಗೆ ಎಳ್ಳುಬೆಲ್ಲ ಮತ್ತು ಸಿಹಿ ಹಂಚಿ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜ ಸೇವಕರು ಹಾಗೂ ಉದ್ಯಮಿ ಸುರೇಶ್ ಮುತ್ತಪ್ಪ, ಪ್ರಮುಖರಾದ ಎ.ಸಜೀವ, ಎಂ.ಕೆ.ಪ್ರವೀಣ, ಚಾರಿಮಂಡ ಚಂಗಪ್ಪ, ಪಿ.ಕೆ.ಮನೋಜ್, ದಯಾನಂದ, ಪೂರ್ಣಿಮ ಸುರೇಶ್, ಮಮತಾ ಶ್ರೀಹರಿ, ಡೇಜಿ ದಿನೇಶ್, ಭವ್ಯ ಪುರುಷೋತ್ತಮ, ಕೃತಿಕಾ ಪ್ರಮೋದ್, ವೀಣಾ, ಸಿಂಧೂ ಹಾಗೂ ಪೋಷಕರು ಉಪಸ್ಥಿತರಿದ್ದರು. ಜಾನಕಿ ಚಂಗಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು.









