
ಮಡಿಕೇರಿ ಜ.23 NEWS DESK : ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ಆರಂಭಿಸಿದ್ದ, ‘ಜಮ್ಮಾಬಾಣೆ’ ಸಮಸ್ಯೆ ಬಗೆಹರಿಕೆಗೆ ಪೂರಕವಾಗಿರುವ ‘ಪೌತಿ ಖಾತೆ ಆಂದೋಲನ’ವನ್ನು ಈಗಿನ ಸರಕಾರ ಮುಂದುವರಿಸಬೇಕು ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಮ್ಮಾಬಾಣೆ’ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿಯ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪ್ರಮುಖರು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಮ್ಮಾಬಾಣೆ ಸಮಸ್ಯೆಯ ಶೇ.90ರಷ್ಟನ್ನು ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಗೆಹರಿಸಲಾಗಿದೆ. ಅದರ ಲಾಭ ಬಿಜೆಪಿಗೆ ಹೋಗುತ್ತದೆ ಎನ್ನುವ ಆತಂಕದಲ್ಲಿರುವ ಕಾಂಗ್ರೆಸ್ ರಾಜಕೀಯ ಕಾರಣಗಳಿಗೋಸ್ಕರ ಬಿಜೆಪಿ ಸರಕಾರದ ಕ್ರಮಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆ.ಜಿ.ಬೋಪಯ್ಯ, 2012ರಲ್ಲಿ ರಾಷ್ಟ್ರಪತಿಗಳ ಅಂಕಿತವಾಗಿ ಬಂದ ಜಮ್ಮಾಬಾಣೆ ವಿಧೇಯಕವನ್ನು ಜಾರಿಗೊಳಿಸಕೂಡದೆಂದು ಸಲ್ಲಿಕೆಯಾಗಿದ್ದ ನಾಲ್ಕು ರಿಟ್ ಪಿಟೀಷನ್ಗಳನ್ನು 2024ರಲ್ಲಿ ವಜಾಗೊಳಿಸಿರುವ ರಾಜ್ಯ ಉಚ್ಚ ನ್ಯಾಯಾಲಯ, ಸಮಸ್ಯೆಯ ಬಗೆಹರಿಕೆಗೆ ಅಗತ್ಯ ಆದೇಶವನ್ನು ನೀಡಿ, 30 ದಿನಗಳಲ್ಲಿ ಜಾರಿಗೊಳಿಸುವಂತೆ ತಿಳಿಸಿದ್ದನ್ನು ಉಲ್ಲೇಖಿಸಿದರು. ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾಂಗ್ರೆಸ್ ಸರಕಾರ, ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಮ್ಮಾಬಾಣೆ ಸಮಸ್ಯೆ ಇತ್ಯರ್ಥಕ್ಕೆ ತಂದ ಕಂದಾಯ ಕಾಯ್ದೆ ತಿದ್ದುಪಡಿಗಳನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಆ ಕಾರಣದಿಂದ ಕಂದಾಯ ಕಾಯ್ದೆ ಸೆಕ್ಷನ್ 127 ಕ್ಕೆ ತಿದ್ದುಪಡಿ ತಂದಿರುವುದಾಗಿ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದರು. ಆದರೆ, ಇವರು ತಂದ ತಿದ್ದುಪಡಿಯ ಟಿಪ್ಪಣಿಯಲ್ಲಿ, ರಿಟ್ ಅರ್ಜಿಯ ನಿರ್ದೇಶನದ ಬಗ್ಗೆ ಪ್ರಸ್ತಾಪವಿಲ್ಲ ಮತ್ತು ‘ನ್ಯಾಯಿಕ ಘೋಷಣೆಗಳ ನಿಟ್ಟಿನಲ್ಲಿ’ ಎಂದು ಮಾತ್ರ ಉಲ್ಲೇಖಿಸಲಾಗಿದೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 2024ರ ಅ.31 ರಂದು ಸುತ್ತೋಲೆ ಹೊರಡಿಸಿ, ನೋಂದಾಯಿತ ಅಲ್ಲದ ಒಪ್ಪಂದ ಪತ್ರಗಳ ಆಧಾರದ ಮೇಲೆ ಮ್ಯುಟೇಷನ್ಗೆ ಅವಕಾಶ ಕೂಡದೆನ್ನುವ ಸೂಚನೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಆದರೆ, ಕೊಡಗಿನಲ್ಲಿರುವ ಕೊಡವರು ಹಿಂದೂ ಮಿತಾಕ್ಷರ ಕಾಯ್ದೆ ಮತ್ತು ಹಿಂದೂ ಸಕ್ಸಶನ್ ನಿಯಮಕ್ಕೆ ಒಳಪಡುತ್ತಾರೆ. ಈ ನಿಯಮಗಳಲ್ಲಿ ಹಿಂದೂಗಳು ಬಾಯಿ ಮಾತಿನ ಮೂಲಕ, ಒಪ್ಪಂದ ಪತ್ರಗಳ ಅಥವಾ ನೋಂದಾಯಿತ ಕರಾರಿನ ಮೂಲಕ ಮಾಡಿಕೊಳ್ಳಲು ಅವಕಾಶವಿದೆ. ನೋಂದಾವಣೆ ಎನ್ನುವುದು ಹಿಂದೂಗಳಿಗೆ ಐಚ್ಛಿಕವಾಗಿದೆ. ಈ ವಿಚಾರ ಮಹಾನ್ ಕಾನೂನು ಪಂಡಿತರಿಗೆ ಗೊತ್ತಿದ್ದರು ಅದನ್ನು ಜಾರಿಗೊಳಿಸಲು ಯಾಕೆ ಸಲಹೆ ನೀಡಲಿಲ್ಲ ಎಂದು ಕೆ.ಜಿ.ಬೋಪಯ್ಯ ಪ್ರಶ್ನಿಸಿದರು. ವಿಬಿ ರಾಮ್ ಜಿ ಕಾಯ್ದೆಯಡಿ ಗ್ರಾಮ ಪಂಚಾಯ್ತಿಗಳಿಗೆ, ಗ್ರಾಮಸಭೆಗಳಿಗೆ ಕಾಮಗಾರಿಗಳನ್ನು ನಿರ್ಧರಿಸುವ, ಕ್ರಿಯಾಯೋಜನೆ ತಯಾರಿಸುವ ಹಕ್ಕನ್ನು ನೀಡಲಾಗಿದೆ. ಯೋಜನೆಯಡಿ ಶೇ.40 ರ ಹಣ ನೀಡಲು ಸಾಧ್ಯವಾಗದ್ದರಿಂದ ವಿರೋಧಿಸುತ್ತಿದೆ ಎಂದು ಟೀಕಿಸಿದರು. *‘ಏಜೆಂಟ್’ ಪದ ತೆಗೆಯಿರಿ* ಜಮ್ಮಾಬಾಣೆ ಸಮಸ್ಯೆ ಬಗೆಹರಿಕೆ ಕುರಿತ ವಿಧೇಯಕವನ್ನು ತರುವ ಹಂತದಲ್ಲಿ ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ‘ಪಟ್ಟೆದಾರ’ ಎನ್ನುವವರು ಬ್ರಿಟಿಷರ ಏಜೆಂಟ್ ಎಂದು ಹೇಳಿದ್ದಾರೆ. ತಿಳುವಳಿಕೆ ಇಲ್ಲದೆ ಅಂತಹ ಮಾತನ್ನು ಅವರು ಆಡಿರಬಹುದು. ಆದರೆ, ಈ ವಿಚಾರ ಕಡತಕ್ಕೆ ಸೇರಿದೆ. ಆ ಹಂತದಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇರುವವರು ಅದನ್ನು ಕಡತದಿಂದ ತೆಗೆಸುವ ಕಾರ್ಯವನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಬಿಜೆಪಿ ಅವಧಿಯಲ್ಲಿ ಜಮ್ಮಾಬಾಣೆ ಸಮಸ್ಯೆಯ ಶೇ.90ರಷ್ಟನ್ನು ಬಗೆಹರಿಸಲಾಗಿತ್ತು. ಉಳಿದ ಶೇ.10 ರಷ್ಟು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸುವ ಹಂತದಲ್ಲೆ, ಎಲ್ಲಾ ಸಮಸ್ಯೆ ಬಗೆಹರಿಸಿರುವುದಾಗಿ ಕಾಂಗ್ರೆಸ್ ಮಂದಿ ಡಂಗೂರ ಸಾರಿ ಕುಣಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಹೆಸರನ್ನು ವಿಬಿ ರಾಮ್ ಜಿ ಎಂದು ಬದಲಿಸಲಾಗಿದೆ. ಮತ್ತೆ ಯೋಜನೆಯಲ್ಲಿ ಮಹಾತ್ಮಾ ಗಂಧಿ ಹೆಸರನ್ನು ಸೇರಿಸಬೇಕೆನ್ನುವ ಕಾಂಗ್ರೆಸ್, ತಾನು ಅಧಿಕಾರದಲ್ಲಿದ್ದ ಸಂದರ್ಭ ತಂದ ಬಹುತೇಕ ಯೋಜನೆಗಳಿಗೆ ನೆಹರು, ಇಂದಿರಾ, ರಾಜೀವ್ ಹೆಸರುಗಳನ್ನು ಇಟ್ಟಿದೆ. ಆ ಸಂದರ್ಭ ಮಹಾತ್ಮಾ ಗಾಂಧೀಜಿ ಅವರ ಹೆಸರು ಅವರ ಗಮನಕ್ಕೆ ಬರಲಿಲ್ಲವೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಹಾಗೂ ವಕ್ತಾರ ಬಿ.ಕೆ.ಅರುಣ್ ಕುಮಾರ್ ಉಪಸ್ಥಿತರಿದ್ದರು.









