
ಕುಶಾಲನಗರ ಜ.24 NEWS DESK : ಮೈಸೂರು ಜಿಲ್ಲೆಯ ಸುತ್ತೂರು ಸಂಸ್ಥಾನ ಮಠ ಕನ್ನಡ ನಾಡಿನ ಕಲೆ, ಆಚಾರ, ಆಹಾರ, ಸಂಸ್ಕೃತಿ ಗಳ ಸಂಗಮ ಎಂದು ಕುಶಾಲನಗರದ ಉದ್ಯಮಿ ಎಸ್.ಎಲ್.ಎನ್ ಸಂಸ್ಥೆಯ ಸಾತಪ್ಪನ್ ಶ್ಲಾಘಿಸಿದರು. ನಂಜನಗೂಡು ತಾಲ್ಲೂಕು ಸುತ್ತೂರು ಮಠದ ಆವರಣದಲ್ಲಿ ಒಂದು ವಾರ ಕಾಲ ನಡೆದ ಐತಿಹಾಸಿಕ ಸುತ್ತೂರು ಜಾತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಜೆಎಸ್ಎಸ್ ವಿದ್ಯಾಸಂಸ್ಥೆ ಗಳು ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿ ತೆರೆದುಕೊಳ್ಳುವ ಮೂಲಕ ಲಕ್ಷಾಂತರ ಮಂದಿಗೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮಣಿಪುರ ಹಾಗೂ ನಾಗಲ್ಯಾಂಡ್ ಶಿಕ್ಷಣ ವಂಚಿತ ಸಾವಿರಾರು ಬಡ ಮಕ್ಕಳನ್ನು ಕರೆ ತಂದು ಸುತ್ತೂರು ಮಠದಲ್ಲಿ ತ್ರಿವಿಧ ದಾಸೋಹ ನೀಡುತ್ತಿರುವುದು ಸುಲಭದ ಸೇವೆಯಲ್ಲ ಎಂದು ಸಾತಪ್ಪನ್ ಹೇಳಿದರು. ಒಂದು ವಾರ ಕಾಲ ನಡೆಯುವ ಜಾತ್ರೋತ್ಸವ ದಲ್ಲಿ ದೇಶೀಯ ಕ್ರೀಡೆಗಳು, ಜಾನಪದ ಕಲೆಗಳು, ನಶಿಸುವ ಅಂಚಿನಲ್ಲಿರುವ ಎಲ್ಲಾ ಕ್ರೀಡಾ ಪ್ರಾಕಾರಗಳು ಜಾತ್ರೋತ್ಸವದಲ್ಲಿ ಸೇರುವ ಲಕ್ಷಾಂತರ ಮಂದಿಗೆ ಹೆಮ್ಮೆ ತರುತ್ತಿವೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು. ಸುತ್ತೂರು ಜಗದ್ಗುರು ಡಾ.ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.









