
ಮಡಿಕೇರಿ NEWS DESK ಜ.24 : ಅರೆಭಾಷೆ ಗೌಡ ಸಮುದಾಯದ ಕ್ರೀಡಾ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದಲ್ಲಿ ರಾಜ್ಯ ಸರಕಾರ 6 ಏಕರೆ ಜಾಗ ಮಂಜೂರು ಮಾಡಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಅವರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರ ನೀಡಿರುವ 6 ಏಕರೆ ಜಾಗದಲ್ಲಿ ಉದ್ದೇಶಿತ ಕ್ರೀಡಾ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಯೋಜನೆಗಳ ಅನುಷ್ಠಾನಕ್ಕಾಗಿ ಒಕ್ಕೂಟವು ಮಡಿಕೇರಿ ಗೌಡ ಸಮಾಜದೊಂದಿಗೆ ಕೈಜೋಡಿಸಲಿದೆ ಎಂದು ಹೇಳಿದ್ದಾರೆ. ಅರೆಭಾಷೆ ಗೌಡ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ 8 ಏಕರೆ ಜಾಗ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆ ಭರವಸೆ ನೀಡಿದ್ದರು. ಇದೀಗ 6 ಏಕರೆ ಜಾಗಕ್ಕೆ ಮಂಜೂರಾತಿ ದೊರೆತಿದೆ. ಇದಕ್ಕಾಗಿ ಮುತುವರ್ಜಿ ವಹಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಕಂದಾಯ ಸಚಿವರಾದ ಕೃಷ್ಣಭೈರೇಗೌಡ, ವಿಶೇಷ ಕಾಳಜಿಯಿಂದ ಸ್ಪಂದಿಸಿದ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರುಗಳಿಗೆ ಸರ್ವ ಗೌಡ ಜನಾಂಗದ ಪರವಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟವು ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಆನಂದ್ ಕರಂದ್ಲಾಜೆ ತಿಳಿಸಿದ್ದಾರೆ. ಮಂಜೂರಾತಿಗಾಗಿ ಶ್ರಮವಹಿಸಿದ ಕೊಡಗು ಗೌಡ ಸಮಾಜ ಮಡಿಕೇರಿ ಇದರ ಅಧ್ಯಕ್ಷರಾದ ದಂಬೆಕೋಡಿ ಆನಂದ, ನಿಕಟ ಪೂರ್ವ ಅಧ್ಯಕ್ಷರಾದ ಪೇರಿಯನ ಜಯಾನಂದ ಮತ್ತು ಆಡಳಿತ ಮಂಡಳಿ, ಹಿರಿಯರಾದ ನಂಗಾರು ನಾಣಯ್ಯ, ಒಕ್ಕೂಟದ ಉಪಾಧ್ಯಕ್ಷ ಡಾ.ರಾಜೇಶ್ ತೇನನ, ಮುಕ್ಕಾಟಿ ಮನೋಜ್ ಸೇರಿದಂತೆ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.








