

ಕುಶಾಲನಗರ NEWS DESK ಜ.25 : ಹಿಂದೂಗಳು ಒಗ್ಗೂಡಿ ಸಂಘಟಿತರಾಗಿ ಹಿಂದೂ ಸಂಸ್ಕೃತಿ, ಪರಂಪರೆಗಳನ್ನು, ಕೌಟುಂಬಿಕ ಮೌಲ್ಯಗಳನ್ನು ಸಂರಕ್ಷಿಸುವ ಮೂಲಕ ಹಿಂದೂ ಸಮಾಜದ ಬಲವರ್ಧನೆಗೆ ಶ್ರಮಿಸಬೇಕೆಂದು ಹಿಂದೂ ಮುಖಂಡರೂ ಆದ ಪುತ್ತೂರಿನ ಶ್ರೀ ವಿವೇಕಾನಂದ ಕಾಲೇಜು ಅಧ್ಯಕ್ಷ ರವೀಂದ್ರ ಪತ್ತೂರು ಕರೆ ನೀಡಿದ್ದಾರೆ. ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಭಾನುವಾರ ಕುಶಾಲನಗರದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಯಾವುದೇ ವ್ಯಕ್ತಿಯ, ಧರ್ಮದ, ರಾಜಕೀಯ ಪಕ್ಷದ ವಿರುದ್ಧ ಹಿಂದೂ ಸಂಗಮವಲ್ಲ. ನಮ್ಮ ಹಿಂದೂ ಸಮಾಜದ ಸಂಘಟನೆಗೆ ಗ್ರಾಮಗಳಲ್ಲಿ ಸಮಿತಿ ರಚನೆ ಮಾಡುವ ಮೂಲಕ ಜಾಗೃತಿ ಮೂಡುತ್ತಿರುವುದು ಹೆಮ್ಮೆಯ ಸಂಗತಿ. ಆದರೆ, ಹಿಂದೂಗಳೆಲ್ಲಾ ಒಂದೇ ಎಂಬ ಭಾವನೆಗಳೊಂದಿಗೆ ಜಾತಿ ಪದ್ಧತಿ ನಿರ್ಮೂಲನೆ ಮಾಡಬೇಕು. ಸ್ವದೇಶಿ ವಸ್ತುಗಳಿಗೆ ಆದ್ಯತೆ ಕೊಡಬೇಕು. ಹಿಂದುತ್ವದ ಅರ್ಥ ಮಾಡಿಕೊಂಡವರು ಜಗತ್ತಿನಾದ್ಯಂತ ಬೇರೆ ಬೇರೆ ರಂಗಗಳಲ್ಲಿ ಬೆಳೆಯುತ್ತಿದ್ದಾರೆ. ಕೆಲವರು ವಿನಾಶಕ್ಕೆ ಕೆಲಸ ಸಂಚು ರೂಪಿಸುತ್ತಿದ್ದಾರೆ. ಹಿಂದೂ ಪದ ಕೇಳಿದರೆ ಮೈ ಪರಚಿಕೊಳ್ಳುವ ಕಾಲವೊಂದಿತ್ತು. ಸ್ವಾಮಿ ವಿವೇಕಾನಂದರ ಆದರ್ಶಗಳ ಪಾಲನೆ ಹಿಂದೂಗಳ ಹೆಮ್ಮೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ನವಚೈತನ್ಯ ತಂದು ಕೊಟ್ಟ ಮಹಾ ಚೇತನ ಎಂದು ರವೀಂದ್ರ ಬಣ್ಣಿಸಿದರು. ಹಿಂದುತ್ವದ ನವ ಜಾಗರಣೆ ಹಳ್ಳಿ ಹಳ್ಳಿಗಳಲ್ಲಿ ಆರಂಭವಾಗಿದೆ. ಹಿಂದೂಗಳು ಇರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಹಿಂದೂ ಸಮಾಜ ಯಾವತ್ತೂ ಯಾರ ಜೊತೆಯೂ ಯುದ್ಧಕ್ಕಿಳಿಯಲಿಲ್ಲ. ಜಗತ್ತಿನ ಕೆಲವು ರಾಷ್ಟ್ರ ಗಳಿಗೆ ಜನರನ್ನು ಕೊಲ್ಲುವುದೇ ಕೆಲಸವಾಗ್ತಿದೆ. ಭಾರತೀಯ ಸಹೋದರಿಯರ ಸಿಂಧೂರ ಅಳಿಸಿದ ಉಗ್ರರನ್ನು ನಮ್ಮ ಸೈನಿಕರು ಸದೆ ಬಡಿದದ್ದು ಇತಿಹಾಸ. ಸ್ವಾತಂತ್ರ್ಯಾ ನಂತರದ ನಮ್ಮ ದೇಶದ ನಾಯಕರ ಕನಸು ಸಾಮಾಜಿಕ ಸಂಪನ್ನತೆ, ಸಾಮಾಜಿಕ ಸುರಕ್ಷತೆ ನಿರ್ಮಾಣ, ಸಾಮಾಜಿಕ ಸಮರಸ ನಿರ್ಮಾಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಕಸಿತ ಭಾರತದ ಪರಿಕಲ್ಪನೆಗಳಾದ ವಿಶ್ವಶಕ್ತಿಯಾಗುವ ಮೂಲಕ ವಿಶ್ವಗುರು ಆಗುವುದಾಗಿದೆ ಎಂದು ರವೀಂದ್ರ ಪುತ್ತೂರು ಹೇಳಿದರು. ಇತ್ತೀಚಿನ ದಶಕಗಳಲ್ಲಿ ಭಾರತೀಯ ಕೌಟುಂಬಿಕ ಮೌಲ್ಯಗಳು ಉಳಿಸಲು ನಿತ್ಯವೂ ಪ್ರತೀ ಮನೆಗಳಲ್ಲಿ ಭಜನೆ, ಸಾಮೂಹಿಕ ಭೋಜನ, ಮನೆತನದ ಭಾಷೆಗಳಿರಬೇಕು. ಶ್ರೇಷ್ಠ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಸಮಾಜಬಾಹಿರ ಕೃತ್ಯಗಳು ಘಟಿಸದಂತೆ ಜಾಗೃತಿ ವಹಿಸಬೇಕು. 18 ರಿಂದ 28 ರ ವಯಸ್ಸಿನ ತರುಣ ತರುಣಿಯರಿಗೆ ಹಿಂದೂ ಪದ್ದತಿ ಸಂಸ್ಕಾರಗಳ ಅರಿವು ಮೂಡಿಸಬೇಕು. ನಾಗರಿಕ ಪ್ರಜ್ಞೆ ಹಾಗೂ ಶಿಸ್ತು ಅತಿ ಮುಖ್ಯ ಎಂದು ರವೀಂದ್ರ ಪುತ್ತೂರು ಹೇಳಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಶಾಲನಗರದ ಕೃಷಿ ಪತ್ತಿನ ಮತ್ತು ಕೈಗಾರಿಕೋದ್ಯಮಿ ಗಳ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಪುರಾತನವಾದ 4 ಸಾವಿರ ವರ್ಷಗಳ ಹಳೆಯ ಧರ್ಮ ನಮ್ಮ ಹಿಂದೂ ಧರ್ಮ. ಮಹಾನ್ ತ್ಯಾಗಿಗಳು, ಋಷಿಮುನಿಗಳು, ಮಹರ್ಷಿಗಳು ಇರುವಂತಹ ಶ್ರೇಷ್ಠ ಸನಾತನ ಧರ್ಮದ ಸಂರಕ್ಷಣೆ ಅಗತ್ಯವಿದೆ. ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದ ದೇಶ ನಮ್ಮದು. ಪರಿಸರ ಸಂರಕ್ಷಣೆಗೂ ಹಿಂದೂ ಧರ್ಮದ ಧಾರ್ಮಿಕ ಪದ್ದತಿಗಳಿಗೂ ಅವಿನಾಭಾವ ಸಂಬಂಧವಿದೆ. ಭಾರತೀಯ ಸಂಸ್ಕೃತಿಯನ್ನು ಇಂದಿನ ಯುವಕ ಯುವತಿಯರು ಆರಾಧಿಸುವ ಮೂಲಕ ಹಿರಿಯರ ಆಚರಣೆಗಳನ್ನು ಗೌರವಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕಿದೆ. ಇಂತಹ ಶ್ರೇಷ್ಠ ಧರ್ಮದ ತಳಹದಿ ಗಟ್ಟಿಗೊಳಿಸಬೇಕಿದೆ. ಕೆಲವು ರಾಜಕಾರಣಿಗಳು ಮತಬ್ಯಾಂಕಿಗೋಸ್ಕರ ಹಿಂದೂ ಧರ್ಮದ ವಿರುದ್ದ ಟೀಕೆ ಮಾಡುವುದು ಸಲ್ಲದು. ಹಾಗಾಗಿ ಹಿಂದೂ ಯುವ ಶಕ್ತಿ ಒಗ್ಗೂಡಿ ಎಂದು ಹಿಂದೂ ಬಾಂಧವರಿಗೆ ಶರವಣಕುಮಾರ್ ಕರೆಕೊಟ್ಟರು. ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕ ಜಿ.ಎಲ್.ನಾಗರಾಜು ಮಾತನಾಡಿ, ಸಹಸ್ರ ವರ್ಷಗಳಿಂದ ಹಿಂದೂ ರಾಷ್ಟ್ರ ಭಾರತ ದೇಶ ಕಳೆದು ಕೊಂಡದ್ದನ್ನು ಮರಳಿ ಗಳಿಸಿ ಕೊಳ್ಳುವುದಕ್ಕೆ ಹಿಂದೂ ಸಂಗಮ ಅವಶ್ಯವಿದೆ. ಹಿಂದೂಗಳು ಇನ್ನಾದರೂ ಒಗ್ಗೂಡಿ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದು ಕರೆ ಕೊಟ್ಟರು. ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್, ವಿಶ್ವಜ್ಞಾನಿ ಡಾ.ಅಂಬೇಡ್ಕರ್ ಸಂಘದ ಅಧ್ಯಕ್ಷ ಲೋಕೇಶ್ ಪುಂಡಾರಿ ಇದ್ದರು. ಮಹಿಳೆಯರಿಂದ ಸಾಮೂಹಿಕವಾಗಿ ವಂದೇ ಮಾತರಂ ಗೀತೆ ಹಾಡಿದರು. ವಿವಿಧ ಮಕ್ಕಳಿಂದ ದೇಶಕ್ಕಾಗಿ ವೀರ ಮರಣಗೈದ ದೇಶ ಭಕ್ತ ಹುತಾತ್ಮರು ಹಾಗೂ ತ್ಯಾಗಿಗಳ ಛದ್ಮವೇಶ ಗಮನ ಸೆಳೆಯಿತು. ಹಾಗೆಯೇ ದೇಶಪ್ರೇಮ ಒಡ ಮೂಡಿಸುವ ಕಿರು ರೂಪಕ ಗಮನ ಸೆಳೆಯಿತು. ರುಚಿ ಚಂದ್ರಶೇಖರ್ ದೇಶಭಕ್ತಿ ಗೀತೆ ಹಾಡಿದರು. ಆಶಾ ಅಶೋಕ್ ನಿರೂಪಿಸಿದರು. ಎಂ.ಡಿ.ರಂಗಸ್ವಾಮಿ ಸ್ವಾಗತಿಸಿದರು.









