
ಸೋಮವಾರಪೇಟೆ ಜ.26 NEWS DESK : ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದ ಆರಾಧ್ಯ ದೇವತೆ ಶ್ರೀ ತಪೋವನೇಶ್ವರಿ ದೇವಿಯ 19ನೇ ವರ್ಷದ ಪ್ರತಿಷ್ಠಾಪನಾ ವರ್ಧಂತಿಮಹೋತ್ಸವ ಶ್ರದ್ಧಾ, ಭಕ್ತಿಯಿಂದ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವೂ ರಥಸಪ್ತಮಿಯ ಶುಭದಿನದಂದು ಬೆಂಗಳೂರಿನ ರಾಜೇಶ್ವರಿ ಅಮ್ಮನವರ ನೇತೃತ್ವದಲ್ಲಿ ಬೆಳಗಿನಿಂದಲೇ ತಪೋಕ್ಷೇತ್ರದಲ್ಲಿರುವ ತಪೋವನೇಶ್ವರಿ ದೇವಿಗೆ ಅಭಿಷೇಕ,ಅರ್ಚನೆ ಸೇರಿದಂತೆ ವಿಶೇಷ ಪೂಜೆ ನಡೆಯಿತು. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ದೇವಿಗೆ ಪ್ರಿಯರಾದ ಮಕ್ಕಳಲ್ಲಿ ದೇವಿಯ ಸಂತುಷ್ಟ ಕಾಣುವನಿಟ್ಟಿನಲ್ಲಿ ಪುಟ್ಟ,ಪುಟ್ಟ ಮಕ್ಕಳಿಗೆ ಸಿಹಿ ತಿನ್ನಿಸಿ ಆಟದ ಸಾಮಗ್ರಿಗಳನ್ನು ನೀಡಿ ಮಕ್ಕಳನ್ನು ಸಂತೋಷ ಗೊಳಿಸಲಾಯಿತು,ನಂತರ ಮಹಿಳೆಯರಿಗೆ ಮಡಿಲು ಅಕ್ಕಿ ನೀಡಿ ಆಶೀರ್ವದಿಸಲಾಯಿತು. ಈ ಸಂದರ್ಭ ಕ್ಷೇತ್ರದ ಪೂಜ್ಯರಾದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ ಕಳೆದ 19 ವರ್ಷಗಳಿಂದ ರಾಜೇಶ್ವರಿ ಅಮ್ಮ ಚಾಚುತಪ್ಪದೆ ದೇವಿಯ ಸೇವೆ ಮಾಡಿಕೊಂಡು ಬರುತ್ತಿದ್ದಾರೆ,ಪ್ರತಿವರ್ಷ ರಥಸಪ್ತಮಿಯ ಶುಭದಿನದಂದು ದೇವಿಪ್ರತಿಷ್ಟಾಪನೆಯ ವರ್ಧಂತಿ ನಡೆಸಲಾಗುತ್ತದೆ,ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಳ್ಳುತ್ತಾರೆ ಎಂದರು.
ತಪೊಕ್ಷೇತ್ರದ ಆರಾಧ್ಯ ದೇವರುಗಳಾದ ವೀರಭದ್ರಸ್ವಾಮಿ ಹಾಗೂ ವೃಷಭಲಿಂಗೇಶ್ವರ ಸ್ವಾಮಿಯವರಂತೆಯೇ ತಪೋವನೇಶ್ವರಿ ದೇವಿ ಇಲ್ಲಿ ನೆಲೆನಿಂತಿದ್ದಾರೆ ಎಂದು ತಿಳಿಸಿದರು. ಪೂಜ್ಯ ಮಹಾಂತ ಶಿವಲಿಂಗ ಸ್ವಾಮೀಜಿ ಮಾರ್ಗದರ್ಶದಲ್ಲಿ ಕ್ಷೇತ್ರದ ಅರ್ಚಕರಾದ ಚಿಕ್ಕವೀರೇಶ ರವರ ಪುರೋಹಿತ್ವದಲ್ಲಿ ಪೂಜಾಕಾರ್ಯನೆರವೇರಿತು. ಮಧ್ಯಾಹ್ನ ಮಹಾದಾಸೋಹ ಏರ್ಪಡಿಸಲಾಗಿತ್ತು.









