
ಮಡಿಕೇರಿ NEWS DESK ಫೆ.6 : ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ರಾಮ್ ಜಿ ಯೋಜನೆಯನ್ನು ವಿರೋಧಿಸಿ, ಪೊನ್ನಂಪೇಟೆಯವರೆಗೆ ಬೃಹತ್ ಪ್ರತಿಭಟನಾ ಜಾಥ ನಡೆಯಿತು. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸೇರಿದಂತೆ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಪ್ರಮುಖರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಗೋಣಿಕೊಪ್ಪಲಿನಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರದ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತಾ ಸಮಾರು ನಾಲ್ಕು ಕಿ.ಮೀ. ದೂರದ, ತಾಲ್ಲೂಕು ಕೇಂದ್ರ ಪೊನ್ನಪೇಟೆಯವರೆಗೆ ಕಾಲ್ನಡಿಗೆ ಜಾಥ ನಡೆಸಿದರು. ಜಾಥ ಪೊನ್ನಂಪೇಟೆಯನ್ನು ತಲುಪಿದ ಬಳಿಕ ಪಕ್ಷದ ಪ್ರಮುಖರು ಅಲ್ಲಿನ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ, ಈ ಹಿಂದಿನ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಬದಲಾಗಿ ಕೇಂದ್ರ ಸರ್ಕಾರ ತಂದಿರುವ ವಿಜಿ ರಾಮ್ ಜಿ ಯೋಜನೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. *ಆರು ಬ್ಲಾಕ್ಗಳಲ್ಲಿ ಪ್ರತಿಭಟನೆ* ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೇಲೆ ಮಹಾತ್ಮಾ ಗಾಂಧಿ ಮನ್ರೇಗಾ ಯೋಜನೆ 2005ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದೀಗ ಕೇಂದ್ರ ಸರ್ಕಾರ ಅಂತಹ ಉತ್ತಮ ಯೋಜನೆಯನ್ನು ರದ್ದು ಪಡಿಸಿ, ಅದರಲ್ಲಿನ ಉತ್ತಮ ಅಂಶಗಳನ್ನು ಕೈಬಿಟ್ಟು ವಿಬಿ ರಾಮ್ ಜಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ.ಕೇಂದ್ರದ ಈ ಯೋಜನೆಯ ಬಗ್ಗೆ ಜಿಲ್ಲೆಯ ಆರು ಬ್ಲಾಕ್ಗಳಲ್ಲಿಯೂ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ನಡೆಯಬೇಕೆಂದು ತಿಳಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಐತಿಹಾಸಿಕವಾದ ಮಹಾತ್ಮಾ ಗಾಂಧಿ ಮನ್ ರೇಗಾ ಯೋಜನೆಗೆ ಕಾನೂನು ತಿದ್ದುಪಡಿ ಮಾಡುವ ಮೂಲಕ ವಿಬಿ ರಾಮ್ ಜಿ ಎನ್ನುವ ಯೋಜನೆಯನ್ನು ತರುವ ಮೂಲಕ ಕೇಂದ್ರ್ರ ಸರ್ಕಾರ ಗ್ರಾಮೀಣ ಜನರ, ಕಾರ್ಮಿಕರ, ಮಹಿಳೆಯರ, ಶೋಷಿತರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆಯೆಂದು ಆರೋಪಿಸಿದರು. ನೂತನ ಯೋಜನೆಯ ಲೋಪಗಳ ಬಗ್ಗೆ ವಿಧಾನ ಸಭೆಯಲ್ಲಿ ಪಕ್ಷದ ಮುಖಂಡರು ಅಂಕಿ ಅಂಶಗಳೊಂದಿಗೆ ಮಾತನಾಡಿದ್ದಾರೆ ಮತ್ತು ಬಹಳಷ್ಟು ಪ್ರಶ್ನೆಗಳನ್ನು ಕೇಂದ್ರ್ರಕ್ಕೆ ಕೇಳಿದ್ದಾರೆಂದು ತಿಳಿಸಿದ ಪೊನ್ನಣ್ಣ, ಹಿಂದಿನ ಮನ್ರೇಗಾ ಯೋಜನೆಯಲ್ಲಿ ಕನಿಷ್ಟ 100 ದಿನಗಳ ಕೆಲಸವನ್ನು ಒದಗಿಸಲಾಗುತಿತ್ತು ಮತ್ತು ಈ ಯೋಜನೆಯ ಮೂಲಕ ಕಟ್ಟಡಗಳ ನಿರ್ಮಾಣ, ಪಂಚಾಯ್ತಿ ರಸ್ತೆಗಳ ನಿರ್ಮಾಣ ಕಾರ್ಯಗಳು ನಮ್ಮ ಜಿಲ್ಲೆಯಲ್ಲೂ ಸಾಕಷ್ಟು ನಡೆದಿದೆಯೆಂದು ಸ್ಪಷ್ಟಪಡಿಸಿದರು. ಕಳೆದ 20 ವರ್ಷಗಳಲ್ಲಿ ಮಹಾತ್ಮಾ ಗಾಂಧಿ ಮನ್ರೇಗಾ ಯೋಜನೆಯು ಗ್ರಾಮೀಣ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿತ್ತು. ಆದರೆ, ಇಂದು ಕೇಂದ್ರ ಸರ್ಕಾರ ಮನ್ರೇಗಾ ಕಾನೂನಿಗೆ ತಿದ್ದುಪಡಿ ತರುವ ಸಂದರ್ಭ ಸಂಸತ್ನಲ್ಲಿ ಕನಿಷ್ಟ ಚರ್ಚೆಯನ್ನು ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಾವುದೇ ಕಾನೂನು ರೂಪುಗೊಳ್ಳ್ಳುವ ಸಂದರ್ಭ ಚರ್ಚೆಗಳು ನಡೆಯಬೇಕು. ಆದರೆ, ಕೇಂದ್ರ ಸರ್ಕಾರ ವಿಬಿ ರಾಮ್ ಜಿ ಕಾನೂನು ತರುವ ಹಂತದಲ್ಲಿ ಏಕಪಕ್ಷೀಯವಾಗಿ ನಡೆದುಕೊಳ್ಳುವ ಮೂಲಕ ಸರ್ವಾಧಿಕಾರಿ ಧೋರಣೆ ತಳೆದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆ ಮಾಡಿದೆಯೆಂದು ತೀಕ್ಷ÷್ಣವಾಗಿ ನುಡಿದರು.
ಶೋಷಿತ ಸಮೂಹದ, ಬಡವರ್ಗದ ಉದ್ಯೋಗ ಖಾತ್ರಿಯನ್ನು ನೂತನ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕಸಿಯುವ ಕೇಂದ್ರ್ರ ಸರ್ಕಾರದ ಕೆಲಸವನ್ನು ಕ್ಷಮಿಸಲು ಸಾಧ್ಯವಿಲ್ಲ. ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿ ಅವರೆ ಈ ಹಿಂದೆ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ದೇಶದ ಬಡವರ್ಗದ ಜನರ ಸಂಜೀವಿನಿ ಎಂದು ಬಣ್ಣಿಸಿದ್ದರೆಂದು ತಿಳಿಸಿದರು. ಪ್ರಸ್ತುತ ಜಾರಿಗೆ ತಂದಿರುವ ವಿಬಿ ರಾಮ್ ಜಿ ಯೋಜನೆಯಡಿ ಶೇ.40 ರಷ್ಟು ಪಾಲನ್ನು ರಾಜ್ಯ ಸರ್ಕಾರ ನೀಡಬೇಕು. ಇದು ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಹೊರಿಸುತ್ತಿರುವ ದೊಡ್ಡ ಹೊರೆಯಾಗಿದೆಯೆಂದು ತಿಳಿಸಿದ ಅವರು, ರಾಜ್ಯದ ಪಾಲು ಹಣವನ್ನು ಸರ್ಕಾರ ಮೊದಲೆ ಕೇಂದ್ರ್ರಕ್ಕೆ ಕೊಡಬೇಕಾಗಿದೆ. ಇದು ಸಾಧ್ಯವಾಗದ ವಿಚಾರವೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ವಿರಾಜಪೇಟೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.









