ಮಡಿಕೇರಿ NEWS DESK ಫೆ.7 : ಮಾದಕ ವಸ್ತುಗಳು ಕೇವಲ ವ್ಯಕ್ತಿಯನ್ನು ಮಾತ್ರ ಅಲ್ಲ, ಇಡೀ ಸಮಾಜವನ್ನೇ ಹಾಳು ಮಾಡುತ್ತದೆ. ಆದ್ದರಿಂದ ಯುವ ಸಮೂಹ ದುಶ್ಚಟಗಳ ವಿರುದ್ಧ ಜಾಗೃತರಾಗಬೇಕೆಂದು ಮಡಿಕೇರಿ ಶಾಸಕ ಡಾ.ಮಂತರ್ಗೌಡ ಅವರು ಕರೆ ನೀಡಿದ್ದಾರೆ. ಕೊಡಗು ಜಿಲ್ಲಾಡಳಿತ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ದಿಶಾ ಭೋದ್ ಫೌಂಡೇಶನ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿದ್ಯವಿದ್ಯಾಲಯ ಸೇರಿದಂತೆ ಕಾಲೇಜುಗಳ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ನಶಾ ಮುಕ್ತ ಭಾರತ ಜಾಗೃತಿ ಜಾಥಾಕ್ಕೆ ಶಾಸಕ ಡಾ.ಮಂತರ್ಗೌಡ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಅವರು ಹಸಿರು ನಿಶಾನೆ ತೋರಿದರು.
ನಂತರ ಮಾತನಾಡಿದ ಶಾಸಕರು ಆಸ್ಪತ್ರೆಗಳಲ್ಲಿ ಉತ್ತಮವಾದ ಮಾನಸಿಕ ಅರೋಗ್ಯ ವಿಭಾಗ ಇದೆ. ಚಟದಿಂದ ಮುಕ್ತರಾಗಲು ಬಯಸುವವರು ಈ ವಿಭಾಗವನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಪದವಿಗಳಿಗಿಂತ ಮೌಲ್ಯ ಮುಖ್ಯ, ಉತ್ತಮ ಮೌಲ್ಯಯುತ ಬದುಕನ್ನು ಎಲ್ಲರೂ ನಡೆಸಬೇಕು. ಮಾದಕ ವಸ್ತುಗಳು ಕೇವಲ ವ್ಯಕ್ತಿಯನ್ನು ಮಾತ್ರ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತದೆ. ಚಟ ಬಿಡಿಸಲು ನಮ್ಮ ಆಸ್ಪತ್ರೆಯಲ್ಲಿ ಉತ್ತಮ ಮಾನಸಿಕ ಅರೋಗ್ಯ ವಿಭಾಗ ಇದೆ ಎಂದರು. ಮಾದಕ ವಸ್ತುಗಳ ಕುರಿತು ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಅವರು ಮಾತನಾಡಿ ‘ಇನ್ನು ಮುಂದೆ ಮಾದಕ ವಸ್ತು ಮುಕ್ತ ಕ್ಯಾಂಪಸ್ ಎಂದು ಘೋಷಣೆ ಮಾಡಿಕೊಂಡ ಕಾಲೇಜುಗಳಿಗೆ ಮಾತ್ರವೇ ಮಾನ್ಯತೆ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು. ಲಕ್ಷಾಂತರ ಮಂದಿ ಅಂಗಾಂಗಗಳಿಗಾಗಿ ಕಾಯುತ್ತಿದ್ದಾರೆ. ಆದರೆ, ಅಂಗಾAಗ ದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಇದೆ. ಅರಿವಿನ ಕೊರತೆಯಿಂದ ಅಮೂಲ್ಯ ಅಂಗಾಂಗಗಳು ಮಣ್ಣು ಪಾಲಾಗುತ್ತಿವೆ. ಹಾಗಾಗಿ, ಈ ಕುರಿತು ಜಾಗೃತಿ ಮೂಡಿಸಲೂ ಜಾಥಾ ಹಮ್ಮಿಕೊಳ್ಳಲಾಗಿದೆ. ಪ್ರತಿ ವಿದ್ಯಾರ್ಥಿಗಳನ್ನೂ ಉಪನ್ಯಾಸಕರು ಈ ಮಾದಕದ್ರವ್ಯದಿಂದ ರಕ್ಷಿಸಿ, ತಮ್ಮ ಕ್ಯಾಂಪಸ್ ಅನ್ನು ಮಾದಕ ವಸ್ತು ಮುಕ್ತ ಕ್ಯಾಂಪಸ್ ಎಂದು ಘೋಷಣೆ ಮಾಡಿಕೊಳ್ಳಬೇಕು. ಈ ರೀತಿ ಮಾಡಿದ ಕಾಲೇಜುಗಳಿಗೆ ಮಾತ್ರವೇ ನಾವು ಮಾನ್ಯತೆ ನೀಡುತ್ತೇವೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಿ ಹೇಳಿದರು. ದೇಶದಲ್ಲಿ ಶೇ.30ರಿಂದ 40 ರಷ್ಟು ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿ ತಮ್ಮ ಜೀವನವನ್ನೇ ಸಂಪೂರ್ಣ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದರು. ವಿದ್ಯಾರ್ಥಿಗಳೂ ಸಹ ಇನ್ನು ಮುಂದೆ ಎಚ್ಚರಿಕೆಯಿಂದಿರಬೇಕು. ಎಲ್ಲ ವಿದ್ಯಾರ್ಥಿಗಳನ್ನೂ ಪರೀಕ್ಷಿಸುತ್ತೇವೆ. ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.
1500 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜು ಹಾಗೂ ಇತರ ಸಂಸ್ಥೆಗಳು ಈ ವಿವಿ ವ್ಯಾಪ್ತಿಯಲ್ಲಿದ್ದು, ದೇಶಕ್ಕೆ ಮಾದರಿ ವಿವಿ ಎನಿಸಿದೆ. ಮಾತ್ರವಲ್ಲ, ಪ್ರಪಂಚದಲ್ಲಿಯೆ ಹೆಸರುವಾಸಿಯಾಗಿದೆ. ಇಂತಹ ವಿಶ್ವವಿದ್ಯಾಲಯ ಈಗ ನಶಾ ಮುಕ್ತ ಕ್ಯಾಂಪಸ್ ಆಗುವತ್ತ ದೃಢವಾದ ಹೆಜ್ಜೆ ಇರಿಸಿದೆ ಎಂದರು. ಈಗ ಚಟ ಎಂಬುದು ಯುವ ಸಮುದಾಯವನ್ನು ಕಾಡುತ್ತಿದೆ. ಶೇ 30-40ರಷ್ಟು ವಿದ್ಯಾರ್ಥಿಗಳು ಚಟಕ್ಕೆ ಒಳಗಾಗಿ ಅಧ್ಯಯನದಲ್ಲಿ ಹಿಂದೆ ಉಳಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇದರ ದುಷ್ಪರಿಣಾಮಗಳ ಅರಿವು ಬರಬೇಕು ಅದಕ್ಕಾಗಿ ವಿವಿ ವ್ಯಾಪ್ತಿಯ ಪ್ರತಿ ಕಾಲೇಜಿನಲ್ಲಿ ನಶಾ ಮುಕ್ತ ಕ್ಯಾಂಪಸ್ ರಚಿಸುತ್ತಿದೆ. ಇದಕ್ಕಾಗಿ ಒಂದು ಕಾರ್ಯಪಡೆ ರಚಿಸುತ್ತಿದೆ. ಮಾತ್ರವಲ್ಲ, ನಶಾ ಮುಕ್ತ ಎಂದು ಘೋಷಿಸಿದ ಕಾಲೇಜಿಗೆ ಮಾತ್ರ ಮಾನ್ಯತೆ ನೀಡಲು ತೀರ್ಮಾನಿಸಲಾಗಿದೆ ಎಂದರು. ‘ಡಿಜಿಟಲ್ ಅಡಿಕ್ಷನ್’ ಎಂಬುದು ಈಗ ಹೊಸ ಬಗೆಯ ಚಟವಾಗಿ ಪರಿಣಮಿಸಿದೆ. ಮಕ್ಕಳು ಮತ್ತು ಮಹಿಳೆಯರು ಹೆಚ್ಚು ಒಳಗಾಗಿದ್ದಾರೆ. ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನವನ್ನು ಜ್ಞಾನದ ಗಳಿಗೆಗಾಗಿ ಮಾತ್ರ ಬಳಸಬೇಕು. ಈ ಕುರಿತು ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು. ಜಂಕ್ಫುಡ್ ಸಹ ಚಟವಾಗಿದೆ. ಮಹಿಳೆಯರು ವಿಶೇಷವಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದಲೂ ಅನೇಕ ಕಾಯಿಲೆಗಳು ಬರುತ್ತಿವೆ ಎಂದು ಎಚ್ಚರಿಕೆ ನೀಡಿದರು. ಯೋಗಾಭ್ಯಾಸ ಧ್ಯಾನ ಪ್ರತಿ ಕ್ಯಾಂಪಸ್ನಲ್ಲೂ ಮಾಡುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಎಲ್ಲ ಉಪನ್ಯಾಸಕರೂ ವಿವಿ ಜೊತೆಗೆ ಕೈಜೋಡಿಸಬೇಕು ಎಂದು ಹೇಳಿದರು. ಅಂಗಾಂಗ ದಾನ ಶ್ರೇಷ್ಠ ದಾನ. ಆದರೆ, ದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ಈಗ ನೋಂದಣಿ ಮಾಡಿದರೆ ಬ್ರೇನ್ ಡೆಡ್ ಆದಾಗ ಮಾತ್ರ ಅಂಗಾಂಗ ತೆಗೆದುಕೊಳ್ಳಲಾಗುತ್ತದೆ. ದೇಶದಲ್ಲಿ 2-3 ಲಕ್ಷ ಜನ ಅಂಗಾಂಗಗಳಿಗಾಗಿ ಕಾಯುತ್ತಿದ್ದಾರೆ. ಆದರೆ, ಕೇವಲ 16-17 ಸಾವಿರ ಜನ ಮಾತ್ರ ಅಂಗಾAಗ ದಾನ ನೀಡುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಬೇಕಿದೆ ಎಂದು ಹೇಳಿದರು. ಅಂಗಾಂಗ ದಾನ ಮತ್ತು ಮಾದಕವಸ್ತು ವಿರುದ್ಧ ಪ್ರತಿಜ್ಞಾ ವಿಧಿಯನ್ನು ಅವರು ವಿದ್ಯಾರ್ಥಿಗಳಿಗೆ ಬೋಧಿಸಿದರು.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವೃಷಬ್ ಮಾತನಾಡಿ, ‘ಮಾದಕವಸ್ತು ವ್ಯಸನ ಕುರಿತು ಸಹಾಯವಾಣಿ 1933 ನ್ನು ಸಂಪರ್ಕಿಸಬಹುದು ಎಂದರು. ನಟಿ ತೇಜಸ್ವಿನಿ ಸೇರಿದಂತೆ ನಗರದ ವಿವಿಧ ಶಾಲಾ, ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದು, ಜಾಥಾದಲ್ಲಿ ಪಾಲ್ಗೊಂಡಿದ್ದರು. ನಗರಸಭೆ ಅಧ್ಯಕ್ಷ ಪಿ.ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ.ರಾಜೇಶ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್, ಡಾ.ಮೋಹನ್ ಅಪ್ಪಾಜಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ, ಡಾ.ವಿಶಾಲ್ ಕುಮಾರ್, ಡಾ.ಸೋಮಶೇಖರ್, ಡಾ.ಧನಂಜಯ್, ಡಾ.ಸುಮುಖ್, ನಟಿ ಎಸ್.ಪಿ.ತೇಜಸ್ವಿನಿ ಶರ್ಮಾ, ದಿಶಾಭೋದ್ ಫೌಂಡೇಷನ್ನ ಸಲಹೆಗಾರ ಅಜಯ ಪುರುಷೋತ್ತಮ್ ಶೆಟ್ಟಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊದ ಬೆಂಗಳೂರು ವಿಭಾಗದ ಇನ್ಸ್ಪೆಕ್ಟರ್ ರಿಷಬ್ ಮಿಶ್ರಾ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ಹುಡ್ಸ್, ಲಯನ್ಸ್, ಇನ್ನರ್ ವಿಲ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್, ರೆಡ್ ಕ್ರಾಸ್, ಕೊಡಗು ಪತ್ರಕರ್ತರ ಸಂಘ, ಕೊಡಗು ಹೋಟೆಲ್ ರೆಸಾರ್ಟ್ ಅಸೋಸಿಯೇಷನ್, ನೀಮಾ ಸಂಘ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಮತ್ತು ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು. ‘ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ’ ಹಾಗೂ ಅಂಗಾಂಗ ದಾನ ಅಭಿಯಾನ (ಜೀವ ಸಾರ್ಥಕತೆ ಅಭಿಯಾನ)ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ಇಲ್ಲಿನ ಗಾಂಧಿ ಮೈದಾನದಲ್ಲಿ ಜಾಥಾವು ನಗರದ ಗಾಂಧಿ ಮೈದಾನದಿಂದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತ, ಅಜ್ಜಮಾಡ ಬಿ.ದೇವಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ತಲುಪಿತು. ಅಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಲಾವಿದ ಇ.ರಾಜು ಮತ್ತು ತಂಡದವರಿAದ ಬೀದಿನಾಟಕ ಪ್ರದರ್ಶಿಸಲಾಯಿತು.







