ಕುಶಾಲನಗರ NEWS DESK ಫೆ.9 : ಕುಶಾಲನಗರ ರೋಟರಿ ಸಂಸ್ಥೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆ ಸುವರ್ಣ ಸಂಭ್ರಮೋತ್ಸವ ಆಚರಿಸುತ್ತಿದೆ. ಇದರ ಅಂಗವಾಗಿ ಶನಿವಾರ ನಗರದ ಕಾವೇರಿ ನದಿ ಸೇತುವೆ ಬಳಿ ನೂತನವಾಗಿ ನಿರ್ಮಿಸಿದ ಪ್ಲಾಸ್ಟಿಕ್ ಬಾಟಲಿ ಮಾದರಿಯ ಬಾಟಲಿಗಳ ಸಂಗ್ರಹಣಾ ತೊಟ್ಟಿಯನ್ನು ರೋಟರಿ 3181 ರ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ಪ್ರವೇಶ ದ್ವಾರದಲ್ಲಿರುವ ಕಾವೇರಿ ನದಿಗೆ ಕೈ ಮುಗಿದು ಜಿಲ್ಲೆಯ ಪರಿಸರಕ್ಕೆ ಹಾನಿಯಾಗದ ಹಾಗೆ ಸ್ವಚ್ಛತೆಯನ್ನು ಮೈಗೂಡಿಸಿ ಹಾಗೆಯೇ ಮರಳಬೇಕೆಂದು ರೋಟರಿ ಸಂಸ್ಥೆ ಅವರಲ್ಲಿ ಮನವಿ ಮಾಡುತ್ತದೆ. ಈ ನಿಟ್ಟಿನಲ್ಲಿ ಸೇತುವೆಯ ಎರಡು ಗೋಡೆಗಳ ಮೇಲೆ ಜನಜಾಗೃತಿ ಮೂಡಿಸುವ ಬರಹಗಳು ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ನದಿ – ಪರಿಸರ ಹಾಗೂ ಕೊಡಗಿನ ಸ್ವಚ್ಛತೆಯ ಕುರಿತು ಮಾಹಿತಿಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು. ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ರೋಟರಿ ಸುವರ್ಣ ಸಂಭ್ರಮೋತ್ಸವದ ಸವಿ ನೆನಪಿಗೆ ಕುಶಾಲನಗರವನ್ನು ಸ್ವಚ್ಛವಾಗಿ ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಆದ್ದರಿಂದ ಕಂಡ ಕಂಡಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಕುವುದನ್ನು ತಪ್ಪಿಸಲು ನಗರದ ಪ್ರವೇಶ ದ್ವಾರದ ಕಾವೇರಿ ನದಿ ಬಳಿ ಬಾಟಲಿ ಮಾದರಿಯ ತೊಟ್ಟಿಯನ್ನು ನಿರ್ಮಿಸಿದ್ದು ಪ್ರವಾಸಿಗರು ಹಾಗೂ ಸಾರ್ವಜನಿಕರು ಇದರ ಬಳಕೆಯ ಮೂಲಕ ಪರಿಸರವನ್ನು ಸ್ವಚ್ಛವಾಗಿಡಲು ರೋಟರಿ ಹಾಗೂ ಪುರಸಭೆಯೊಂದಿಗೆ ಕೈಜೋಡಿಸಬೇಕಿದೆ. ಹಾಗೆಯೇ ಸೇತುವೆ ಬಳಿಯ ಬ್ರಿಟಿಷರ ಕಾಲದ ಹಳೆ ಸೇತುವೆಯನ್ನು ರೋಟರಿ ವತಿಯಿಂದಲೇ ಅಭಿವೃದ್ಧಿ ಗೊಳಿಸಿ ಉದ್ಯಾನವನವಾಗಿ ರೂಪಿಸಲು ಪುರಸಭೆ ಅವಕಾಶ ನೀಡಬೇಕೆಂದು ಕೋರಿದರು.
ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮಾತನಾಡಿ, ಜಿಲ್ಲೆಯ ಪ್ರವೇಶ ದ್ವಾರದ ನಗರ ಕುಶಾಲನಗರದ ಸ್ವಚ್ಛತೆಗೆ ಪುರಸಭೆಯೊಂದಿಗೆ ಕೈಜೋಡಿಸಿರುವ ರೋಟರಿ ಸಂಸ್ಥೆಗೆ ಎಲ್ಲಾ ಅಗತ್ಯ ನೆರವು ನೀಡಲಾಗುವುದು. ಹಾಗೆಯೇ ಸಾರ್ವಜನಿಕರು ಕೂಡ ನಗರದ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕೆಂದು ಕೋರಿದರು.
ಹಳೆ ಸೇತುವೆಯನ್ನು ರೋಟರಿ ಸಂಸ್ಥೆಯವರ ನಿರ್ವಹಣೆಗೆ ನೀಡುವುದಾಗಿ ಹೇಳಿದರು. ಈ ಸಂದರ್ಭ ರೋಟರಿ ಉಪರಾಜ್ಯಪಾಲ ಉಲ್ಲಾಸ ಕೃಷ್ಣ, ಸುವರ್ಣ ಸಂಭ್ರಮೋತ್ಸವದ ಅಧ್ಯಕ್ಷ ಎಸ್. ಕೆ. ಸತೀಶ್, ಪದಾಧಿಕಾರಿಗಳಾದ ಕ್ರಿಜ್ವಲ್ ಕೋಟ್ಸ್, ಶಿಭು ಥೋಮಸ್, ಎಸ್.ಎನ್.ರಾಜೇಂದ್ರ, ಡಾ. ಹರಿ ಎ. ಶೆಟ್ಟಿ, ಆರತಿ ಶೆಟ್ಟಿ, ಪ್ರಕಾಶ್, ಕುಶಾಲನಗರ ರೋಟರಿ ಕಾರ್ಯದರ್ಶಿ ಮಂಜುನಾಥ್, ಪ್ರಿನ್ಸ್ ಮತ್ತಿತರರು ಇದ್ದರು.






