ಮಡಿಕೇರಿ NEWS DESK ಫೆ.18 : ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಫೆ.21ರಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ “ಕೊಡವ ಸತ್ಯಾಗ್ರಹ” ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಬೆಳಿಗ್ಗೆ 10.30 ಕ್ಕೆ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಿ ಪ್ರಖ್ಯಾತ ಭಾಷಾ ತಜ್ಞ ಪಂಡಿತ್ ಡಾ. ಸೀತಕಾಂತ್ ಮಹಾಪಾತ್ರ ಆಯೋಗದ ವರದಿಯ ಶಿಫಾರಸ್ಸಿನಂತೆ ಕೊಡವ ತಕ್ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಈಗಾಗಲೇ ಪರಿಗಣಿಸಲ್ಪಟ್ಟ ಕೊಂಕಣಿ ಮತ್ತು ಪರಿಗಣನೆಯ ಹಂತದಲ್ಲಿರುವ ತುಳು ಪ್ರಸ್ತಾವನೆಯಂತೆಯೇ, ಸಂವಿಧಾನದ 345 ನೇ ವಿಧಿಯಡಿ ಕೊಡವ ತಕ್ ಅನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಗುರುತಿಸಬೇಕು. ಕೊಡವರ ಕುರಿತಾದ ನೈಜ ಚರಿತ್ರೆಯನ್ನು ತಿರುಚಿ ಸುಳ್ಳು ಚರಿತ್ರೆಯನ್ನು ಸೃಷ್ಟಿಸಿದವರ ವಿರುದ್ಧ ಕ್ರಮ ಜರುಗಿಸಬೇಕು. ಕೊಡವ ಜನಾಂಗೀಯ ಗುರುತು, ಕೊಡವ ಜಾನಪದ ಹಿನ್ನೆಲೆ, ಭಾಷಾಲೋಕ ಹಾಗೂ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರ ಸ್ವಾಭಿಮಾನ ಮತ್ತು ಅಸ್ತಿತ್ವವು ಬರುವ 2027 ರ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕ “ಕೋಡ್ ಮತ್ತು ಕಲಂ” ಮೂಲಕ ಸಾಂವಿಧಾನಿಕವಾಗಿ ದಾಖಲಾದಾಗ ಮಾತ್ರ ನಿರ್ಧರಿಸಲ್ಪಡುವುದರಿಂದ 2027ರ ರಾಷ್ಟ್ರೀಯ ಜನಗಣತಿಯಲ್ಲಿ “ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿಯ ಆರಾಧಕರಾದ ಕೊಡವರಿಗಾಗಿ’ ಪ್ರತ್ಯೇಕ “ಕೋಡ್” ಮತ್ತು “ಕಾಲಂ” ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ 36 ವರ್ಷಗಳಿಂದ ಸಿಎನ್ಸಿ ಸಂಘಟನೆ ಕೊಡವಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ. ಸ್ವರಾಜ್ಯ, ಸ್ವಯಂ ನಿರ್ಣಯದ ಹಕ್ಕುಗಳು, ಎಸ್ಟಿ ವರ್ಗೀಕರಣ ಮತ್ತು ಕೊಡವರಿಗೆ ವಿಶ್ವಸಂಸ್ಥೆಯ ‘ಆದಿಮಸಂಜಾತ’ ಬುಡಕಟ್ಟು ಮಾನ್ಯತೆಗಾಗಿ ಸತತವಾಗಿ ಮತ್ತು ಶಾಂತಿಯುತವಾಗಿ ಹೋರಾಡುತ್ತಿದೆ. ಆರಂಭದಿಂದಲೂ ಪ್ರತಿ ವರ್ಷ ಅಂತರರಾಷ್ಟ್ರೀಯ “ಮಾತೃಭಾಷಾ ದಿನ” ದಂದು ತನ್ನ ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಪುನಶ್ಚೇತನಗೊಳಿಸಲು ಮತ್ತು ನೋಂದಾಯಿಸಲು ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಅಲ್ಲದೆ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸುತ್ತಿದೆ. ಈ ಸತ್ಯಾಗ್ರಹವು ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸುವ ಮಹತ್ವದ ಮೇಲೆ ಕೇಂದ್ರೀಕರಿಸುತ್ತದೆ. ರಾಜ್ಯ ಮರುಸಂಘಟನೆ ಕಾಯ್ದೆ 1956 ರ ಅಡಿಯಲ್ಲಿ ಮತ್ತು ಸಂವಿಧಾನದ 7 ನೇ ತಿದ್ದಪಡಿಯನ್ವಯ ಸಂವಿಧಾನದ 29, 30, 345, 347, 350, 350ಎ, 350ಬಿ, 351 ಪ್ರತಿಪಾದಿಸಿರುವಂತೆ, ಕೊಡವ ತಕ್ ಅನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಪರಿಗಣಿಸಿ ಆಡಳಿತ ಮತ್ತು ಪಠ್ಯಕ್ರಮದಲ್ಲಿ ಜಾರಿಗೆ ತರಬೇಕು. ಇದು ನಿಖರವಾದ ಜನಗಣತಿ ಎಣಿಕೆಯೊಂದಿಗೆ, ಸಂವಿಧಾನದ ವಿಧಿ 51ಂ(ಈ) ಅಡಿಯಲ್ಲಿ ಬಾಕಿ ಇರುವ ಸಾಂವಿಧಾನಿಕ ಹಕ್ಕಾಗಿದೆ. ಸಾಂವಿಧಾನಿಕ ಮಾನ್ಯತೆ, ಅಧಿಕೃತ ಭಾಷೆಯ ಸ್ಥಾನಮಾನ ಮತ್ತು ನಿಖರವಾದ ಜನಗಣತಿಯ ಬೇಡಿಕೆಯು ಸಮುದಾಯದ ಸಬಲೀಕರಣ ಅತ್ಯಗತ್ಯವಾಗಿದೆ. 8ನೇ ಶೆಡ್ಯೂಲ್ಗೆ ಸೇರ್ಪಡೆ ಮಾಡುವುದರಿಂದ ಆಗುವ ಸಂಭಾವ್ಯ ಪರಿಣಾಮ ಮತ್ತು ಅಹಿಆ ಯ ಯೋಜನೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. 8ನೇ ಶೆಡ್ಯೂಲ್ಗೆ ಕೊಡವ ತಕ್ ಸೇರ್ಪಡೆಯಾದರೆ ಅದು ಅಧಿಕೃತ ಭಾಷೆಯಾಗಿ ಮಾನ್ಯತ ಪಡೆಯುತ್ತದೆ. ಇದು ಸರ್ಕಾರ, ಶಿಕ್ಷಣ ಮತ್ತು ಮಾಧ್ಯಮಗಳಲ್ಲಿ ಅದರ ಬಳಕೆಗೆ ದಾರಿ ಮಾಡಿಕೊಡುತ್ತದೆ. ಇದು ಕೊಡವ ಸಂಸ್ಕೃತಿ ಮತ್ತು ಭಾಷೆಯ ಪ್ರಾತಿನಿಧ್ಯ. ಸಂರಕ್ಷಣೆ ಮತ್ತು ಪ್ರಚಾರಕ್ಕೆ ಕಾರಣವಾಗಬಹುದು. ಶಾಲೆಗಳಲ್ಲಿ ಕೊಡವ ತಕ್ ಬೋಧನೆ, ಅಧಿಕೃತ ಸಂದರ್ಭಗಳಲ್ಲಿ ಬಳಕೆ ಮತ್ತು ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಸಿಗುವಂತೆ ಮಾಡುವುದು ಅಓಅಯ ಪ್ರಯತ್ನಗಳ ಗುರಿಯಾಗಿದೆ. ನಿಖರವಾದ ಜನಗಣತಿಯು ನೀತಿ ನಿರೂಪಕರಿಗೆ ಸಮುದಾಯದ ಅಗತ್ಯಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.ಅಂತರರಾಷ್ಟ್ರೀಯ ಮಾತೃಭಾಷಾ ದಿನದಂದು ಶಾಂತಿಯುತ ಸತ್ಯಾಗ್ರಹ ನಡೆಸಿ ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ವಿಶ್ವರಾಷ್ಟ್ರ ಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳಿಗೆ ವಿವರವಾದ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.







