
ಮಡಿಕೇರಿ ಫೆ.20 NEWS DESK : ಕಾರ್ಮಿಕರು ಹಾಗೂ ಜೀಪಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ನಡೆದಿದೆ. ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದೆ. ಕಾರ್ಮಿಕರು ಭಯಭೀತರಾಗಿ ಓಡುವ ಸಂದರ್ಭ ಕಾರ್ಮಿಕ ಮಹಿಳೆ ಸುನಿತಾ ಎಂಬುವವರು ಬಿದ್ದು ಗಂಭೀರ ಗಾಯಗಳಾಗಿವೆ. ಇವರಿಗೆ ಮಾಲ್ದಾರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಫಿ ತೋಟದಿಂದ ರಸ್ತೆಗೆ ಬಂದ ಕಾಡಾನೆ ಪ್ರವೀಣ ಎಂಬುವವರಿಗೆ ಸೇರಿದ ಜೀಪಿನ ಮೇಲೆ ದಾಳಿ ಮಾಡಿ ಜಖಂಗೊಳಿಸಿದೆ. ಕಾಡಾನೆಯನ್ನು ಕಾಡಿಗಟ್ಟಲು ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೂ ದಾಳಿಗೆತ್ನಿಸಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಕಾರ್ಯಾಚರಣೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು, ಕಾಡಾನೆಯನ್ನು ತಕ್ಷಣ ಸೆರೆ ಹಿಡಿಯಬೇಕೆಂದು ಕಾರ್ಮಿಕ ಮುಖಂಡರು ಆಗ್ರಹಿಸಿದ್ದಾರೆ.









