
ಮಡಿಕೇರಿ NEWS DESK ಫೆ.28 : ಹಿಂದೂ ಸಂಘಟನೆಯ ಕಾರ್ಯಕರ್ತ ಅಪ್ಪಚ್ಚಿರ ಗೌತಮ್ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌತಮ್ ಅವರನ್ನು ಭೇಟಿಯಾದ ಅವರು ಸಾಂತ್ವನ ಹೇಳಿ ಧೈರ್ಯ ತುಂಬಿದರು. ನಂತರ ಮಾತನಾಡಿದ ಎನ್.ಯು.ನಾಚಪ್ಪ ನಾಪೋಕ್ಲು ಘಟನೆ ಅತ್ಯಂತ ದುರದೃಷ್ಟಕರ, ಮುಗ್ಧ ಕೊಡವ ಯುವಕನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಕೃತ್ಯವಾಗಿದೆ. ತನ್ನದೇ ತಾಯ್ನಾಡಿನಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಆದಿಮಸಂಜಾತ ಕೊಡವ ಯುವಕನ ಮೇಲೆ ನಡೆದ ಈ ದೌರ್ಜನ್ಯ ಆತಂಕಕಾರಿ ಬೆಳವಣಿಗೆಯಾಗಿದೆ. ಇದು ತಮ್ಮದೇ ನೆಲದಲ್ಲಿ ಆದಿಮಸಂಜಾತ ಕೊಡವರಿಗೆ ಇರುವ ಸಾಮಾಜಿಕ ಅಭದ್ರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಎನ್.ಯು.ನಾಚಪ್ಪ, ಈ ಹಿಂದೆ ಕೂಡ ಆರೋಪಿಗಳು ಅಮಾಯಕರ ಮೇಲೆ ಹಲ್ಲೆ ನಡೆಸಿರುವ ಕುರಿತು ಮಾಹಿತಿ ಇದ್ದು, ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲದೆ, ಜನಾಂಗೀಯ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಹೊಂದಿರುವ ದೊಡ್ಡ ದೇಶವಾಗಿದೆ. ನಮ್ಮ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆಯನ್ನು ಆಯ್ಕೆ ಮಾಡುವ ಮತ್ತು ಆಚರಿಸುವ ಹಕ್ಕನ್ನು ಧಾರ್ಮಿಕ ಸ್ವಾತಂತ್ರ್ಯದ ವಿಧಿಯ ಮೂಲಕ ನೀಡಲಾಗಿದೆ. ಯಾರೂ ಇನ್ನೊಬ್ಬರ ವಿರುದ್ಧ ಮೇಲುಗೈ ಸಾಧಿಸಲು ಅಥವಾ ದೌರ್ಜನ್ಯ ಎಸಗಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಕೊಡವ ಲ್ಯಾಂಡ್ ನಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಬೇಕೆಂದು ನಾವು ಆಶಿಸುತ್ತೇವೆ. ಆದರೆ ಅದೇ ಸಮಯದಲ್ಲಿ ರಾಜಕೀಯ ಅಲೆಮಾರಿ ಲಾಭಕೋರರು ಹಾಗೂ ಅತೃಪ್ತ ರಾಜಕೀಯ ಪರಾವಲಂಬಿಗಳು ಈ ಪರಿಸ್ಥಿತಿಯ ದುರ್ಲಾಭವನ್ನು ಪಡೆಯಬಾರದು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದ್ದಾರೆ.








