
(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ : ತ್ರಿವಿಧ ದಾಸೋಹದ ಬ್ರಹ್ಮ : ಸದ್ದುಗದ್ದಲವಿರದ ಸಾಧನೆ ಇಲ್ಲಿ ಮೌನವಾಗಿ ಗದ್ದುಗೆಯೇರಿದೆ*)
ಸದ್ದುಗದ್ದಲವಿರದ ಸಾಧನೆ ಇಲ್ಲಿ ಮೌನವಾಗಿ ಗದ್ದುಗೆಯೇರಿದೆ. ಕಾಯಕವೇ ಕೈಲಾಸವೆನ್ನುವ ಮಾತು ಕಾರ್ಯವಾಗಿ ನಡೆ ನುಡಿಗಳಲಿ ಒಂದಾಗಿದೆ. ಕಾವಿಯ ಆದರ್ಶಕೆ ಪ್ರತಿರೂಪವಾಗಿ ತ್ರಿವಿಧ ದಾಸೋಹವು ಸರ್ವರಿಗೂ ಸಹಾಯ ಹಸ್ತ ಚಾಚಿದೆ. ಎಲ್ಲಾ ನನ್ನವರೆನ್ನುವ ಸಮಾನ ಭಾವ ಸಂಗಮಿಸಿ ಕರುಣೆಯೇ ಕಣ್ಣೆರೆದಿದೆ. ಅದಕ್ಕಿರಬೇಕು ನಭದ ಕಿರಣಗಳೂ ಇವರ ಸೇವೆಗೆ ನಮಿಸಿ ಶರಣಾಗಿದೆ!! ನಿಜವಾದ ಧರ್ಮವೆಂದರೆ ಕೇವಲ ಪೂಜೆ, ಪುನಸ್ಕಾರಗಳು, ಗುಡಿ,ಗೋಪುರ, ಪದ್ದತಿ ಶಾಸ್ತ್ರಆಚರಣೆಗಳ ಆಚರಣಾತ್ಮಕ ಕ್ರಮಗಳಲ್ಲಿ ಸೀಮಿತವಾಗಿರುವುದಲ್ಲ, ಅದು ಮಾನವನೊಳಗಿನ ಕರುಣೆ, ದಯೆ ಮತ್ತು ಸೇವಾಭಾವದಲ್ಲಿ ವ್ಯಕ್ತವಾಗುತ್ತದೆ. ಇತರರ ನೋವನ್ನು ತನ್ನದಾಗಿ ಭಾವಿಸಿ, ಸಾಧ್ಯವಾದಷ್ಟು ಸಹಾಯ ಮಾಡುವ ಮನೋಭಾವವೇ ನಿಜವಾದ ಧರ್ಮದ ಸಾರವಾಗಿದೆ. ಅದಕ್ಕಾಗಿಯೇ ಬಸವಣ್ಣನವರು “ದಯಯೇ ಧರ್ಮದ ಮೂಲವಯ್ಯ” ಎಂದು ಹೇಳಿರುವುದು. ಹಸಿದವನಿಗೆ ಅನ್ನ ನೀಡುವುದು,ಅಜ್ಞಾನಿಯನ್ನು ಶಿಕ್ಷಣದ ಮೂಲಕ ಜ್ಞಾನಿಯಾಗಿ ಬೆಳಗಿಸುವುದು ನಿರಾಶ್ರಿತನಿಗೆ ಆಶ್ರಯ ಒದಗಿಸುವುದು ಇವುಗಳೆಲ್ಲವೂ ಧರ್ಮದ ಅತ್ಯುನ್ನತ ರೂಪಗಳು. ಸೇವೆಯ ಮೂಲಕ ಸಮಾಜದಲ್ಲಿ ಸಮಾನತೆ, ಸಹಾಯ, ಸಹಾನುಭೂತಿ ಮತ್ತು ಮಾನವೀಯತೆಯನು ಬೆಳೆಸುವುದು, ಧರ್ಮದ ನಿಜವಾದ ಉದ್ದೇಶವನ್ನು ತೋರಿಸುತ್ತದೆ. ಈ ನಿಟ್ಟಿನಲ್ಲಿ ಧರ್ಮದ ಹೆಸರಿನಲ್ಲಿ, ಧರ್ಮದ ದಾರಿಯಲ್ಲಿ ನೆಡೆದು ನೆಡೆ ನುಡಿಗಳೊಂದಾಗಿ ಬಾಳಿ ಕಾಯಕ ದಾಸೋಹದ ಮೂಲಕ ಲಕ್ಷಾಂತರ ಬಡ ಬಗ್ಗರಿಗೆ ಬದುಕು ಕಟ್ಟಿಕೊಟ್ಟು ನೆಡೆದಾಡುವ ದೇವರೆಂದೇ ಪ್ರಖ್ಯಾತರಾದ ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿಗಳು ಕರ್ನಾಟಕ ನೆಲ, ಜಲ, ನಾಡು, ನುಡಿ ಕಂಡ ಹೆಮ್ಮೆಯ ನಾಯಕ. ತಾಯಿ ಭುವನೇಶ್ವರಿ ತನ್ನ ಪವಿತ್ರ ನೆಲದಲ್ಲಿ ಸಮಾಜಕ್ಕೆ ಅನೇಕ ಮಹನೀಯರನ್ನು ಕೊಡುಗೆಯಾಗಿ ಕೊಟ್ಟಿದ್ದಾಳೆ. ಅವರಲ್ಲಿ ಅಗ್ರಸ್ಥಾನದಲ್ಲಿರುವವರು ಸಿದ್ದಗಂಗಾ ಮಠದ ಮಠಾಧೀಶರಾಗಿದ್ದ ಲಿಂಗೈಕ್ಯ ಪರಮ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳು. ಇಂದು ಅವರ ಜನ್ಮ ದಿನ! ಅವರ ಜನ್ಮ ದಿನವು ಕೇವಲ ಒಂದು ಸಾಮಾನ್ಯ ದಿನವಲ್ಲ ಬದಲಿಗೆ ಅದು ಮಾನವೀಯತೆ, ಸೇವಾಭಾವ ಮತ್ತು ತ್ಯಾಗದ ಪ್ರತೀಕವಾಗಿ ಆಚರಿಸಬೇಕಾದ ಮಹತ್ವದ ಆಚರಣೆಯಾಗಿದೆ. ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿದ ಮಹನೀಯರು. “ಸೇವೆಯೇ ಧರ್ಮ” ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ಲಕ್ಷಾಂತರ ಮಕ್ಕಳಿಗೆ ಶಿಕ್ಷಣದ ಮೂಲಕ ಬದುಕಿನ ದಾರಿ ತೋರಿದವರು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ತುಮಕೂರಿನ ಸಿದ್ಧಗಂಗಾ ಮಠದ ಮೂಲಕ ಅವರು ನೀಡಿದ ಆಶ್ರಯದ ಜೊತೆ ಅನ್ನದಾನ ಮತ್ತು ವಿದ್ಯಾದಾನ ಕಾರ್ಯಗಳು ವಿಶ್ವದ ಮಟ್ಟದಲ್ಲಿ ಮಾದರಿಯಾಗಿವೆ.ಹಸಿವು ನೀಗಿಸುವುದು ದೇಹಕ್ಕೆ ಜೀವಕ್ಕೆ, ಶಕ್ತಿ ನೀಡಿದರೆ ವಿದ್ಯೆ ಕಲಿಸುವುದು ಜ್ಞಾನ ಹಾಗೂ ಬದುಕಿಗೆ ದಾರಿ ತೋರಿದರೆ ಆಶ್ರಯ ನೀಡುವುದು ಭವಿಷ್ಯಕ್ಕೆ ಭದ್ರತೆ ನೀಡುತ್ತದೆ” ಇದೇ ತ್ರಿವಿಧ ದಾಸೋಹದ ಸಾರಾಂಶ. ಈ ಮೂರು ಅಂಶಗಳೇ ಒಬ್ಬ ಮನುಷ್ಯನ ಜೀವನಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವುದು. ಇದನ್ನು ಅರಿತ ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಬಡತನ, ಜಾತಿ, ಮತ, ಪಂಥ ಎಂಬ ಬೇಧಗಳನ್ನು ಮೀರಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಊಟ,ವಸತಿ,ವಿದ್ಯೆಯ ಮುಖಾಂತರ ಲಕ್ಷಾಂತರ ಜನರ ಬದುಕಿಗೆ ಆಸರೆ ಆಗಿ ಬದುಕು ಕೊಟ್ಟ ದೈವಿಪುರುಷ.ಬಸವಣ್ಣನವರ ದ್ಯೇಯ ವಾಕ್ಯ “ಕಾಯಕವೇ ಕೈಲಾಸ” ಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತ ಇವರ “ತ್ರಿವಿಧ ದಾಸೋಹ”ವು ಕೇವಲ ಧಾರ್ಮಿಕ ಪರಿಕಲ್ಪನೆ ಆಗಿರದೆ ಅನ್ನದಾಸೋಹ, ವಿದ್ಯಾದಾಸೋಹ, ಆಶ್ರಯದಾಸೋಹ” ಎಂಬ ಮೂರು ಅದ್ಬುತ ಪರಿಕಲ್ಪನೆಯ ಮೂಲಕ ಸಮಗ್ರ ಮಾನವ ಅಭಿವೃದ್ಧಿಗೆ ರೂಪುಗೊಂಡ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಾದರಿ ಸ್ತಂಭಗಳಾಗಿವೆ. *ಅನ್ನದಾಸೋಹ* ಪ್ರತಿದಿನ ಸರಿ ಸುಮಾರು 12 ಸಾವಿರಕ್ಕೂ ಹೆಚ್ಚು ಮಕ್ಕಳ ಜೊತೆಗೆ ನಿತ್ಯವೂ ಬರುವ ಸಾವಿರಾರು ಭಕ್ತರಿಗೆ ಉಚಿತವಾಗಿ ಊಟ ನೀಡುವ ವ್ಯವಸ್ಥೆ, ಸಹಾಯ ಮತ್ತು ಸಮಾನತೆಯ ತತ್ವವನ್ನು ಪ್ರತಿಪಾದಿಸುತ್ತದೆ. ಇಲ್ಲಿ ಜಾತಿ, ಮತ, ಆರ್ಥಿಕ ಸ್ಥಿತಿ ಎಂಬ ಯಾವುದೇ ಭೇದವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ಊಟ ಉಪಚಾರ ನೀಡಲಾಗುತ್ತದೆ. ದಿನದ ಯಾವುದೇ ಸಮಯದಲ್ಲಿ ಯಾವುದೇ ಜಾತಿಯ ಎಷ್ಟೇ ಜನ ಹೋದರೂ ಊಟ ತಿಂಡಿಯ ವ್ಯೆವಸ್ಥೆ ಇರುತ್ತದೆ. ಇದು ಕೇವಲ ಹಸಿವು ನೀಗಿಸುವ ಕಾರ್ಯವಲ್ಲ ಬದಲಾಗಿ ‘ಮಾನವೀಯತೆ’ ಎಂಬ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿ ಕೊಂಡಿರುವ ಮಹಾ ಕಾರ್ಯವಾಗಿದೆ.*ವಿದ್ಯಾ ದಾಸೋಹ* ಸಿದ್ಧಗಂಗಾ ಮಠದಲ್ಲಿ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ಮೂಲಕ, ಅವರು ಜ್ಞಾನವನ್ನು ಸಮಾಜದ ಹಕ್ಕಿನಂತೆ ಪರಿಗಣಿಸಿ ಶಿಕ್ಷಣವನ್ನು ವಾಣಿಜ್ಯೀಕರಣದಿಂದ ದೂರವಿಟ್ಟು, ಅದನ್ನು ಸಾಮಾಜಿಕ ಸೇವೆಯಾಗಿ ಪರಿಗಣಿಸಿದ್ದು ನಿಜಕ್ಕೂ ಒಂದು ಅಸಾದ್ಯವಾದ ಅದ್ಭುತವೆಂದೇ ಹೇಳಬಹುದು ಕಾರಣ ಶಿಕ್ಷಣವನ್ನು ವ್ಯಾಪಾರೀಕರಣವಾಗಿ ಮಾಡಿಕೊಂಡಿರುವ ಇಂದಿನ ಸಮಾಜದಲ್ಲಿ 10 ರಿಂದ 12 ಸಾವಿರ ಮಕ್ಕಳಿಗೆ ಪ್ರತಿನಿತ್ಯ ಉಚಿತವಾಗಿ ಊಟ ವಸತಿ ಜೊತೆ ವಿದ್ಯೆ ಕೊಡುವುದು ಖಂಡಿತವಾಗಿ ಮಾತನಾಡಿದಷ್ಟು ಸುಲಭವಲ್ಲ. ವಿದ್ಯಾಭ್ಯಾಸದ ಜೊತೆ ಅಲ್ಲಿ ಕಲಿಸುವ ಸಂಸ್ಕಾರ ನಿಜಕ್ಕೂ ಒಂದು ಮೌಲ್ಯಯುತ ಚಿಂತನೆ. ಪ್ರತಿನಿತ್ಯ ಸಂಜೆ ಅಲ್ಲಿ ನೆಡೆಯುವ ಪ್ರಾರ್ಥನೆಯನ್ನು ನೋಡುವುದೇ ಒಂದು ಚಂದದ ಅನುಭವ 12 ಸಾವಿರ ಮಕ್ಕಳನ್ನು ಯಾವುದೇ ನೂಕು ನುಗ್ಗಲಿಲ್ಲದೆ ಸರತಿ ಸಾಲಿನಲ್ಲಿ ಕೂರಿಸಿ ಪ್ರಾರ್ಥನೆಗಳನ್ನು ಮಾಡಿಸುತ್ತಾರೆ ಆ ಒಕ್ಕೊರಲಿನ ದ್ವನಿಯನ್ನು ಕೇಳುವಾಗ ನಿಜವಾಗಿಯೂ ಹೆಮ್ಮೆಯ ಜೊತೆ ಮೈ ರೋಮಾಂಚನವಾಗುತ್ತದೆ. ಪ್ರಾರ್ಥನೆ ಮುಗಿದ ನಂತರ ಒಂದು ಮೌಲ್ಯಯುತ ವಿಚಾರವನ್ನು ಮಕ್ಕಳಿಗೆ ಭೋಧಿಸುತ್ತಾರೆ ಇದಲ್ಲವೇ ಸಂಸ್ಕಾರ ಎಂದರೆ. ಇಂದಿನ ಲಾಭ ಪ್ರಧಾನ ಯುಗದಲ್ಲಿ ಉಚಿತ ಶಿಕ್ಷಣ ನೀಡುವುದು ನಿಜಕ್ಕೂ ಒಂದು ಕ್ರಾಂತಿಕಾರಕ ಚಿಂತನೆ ಆಗಿದ್ದು, ಅದು ಕೇವಲ ವ್ಯಕ್ತಿಯ ಬದುಕನ್ನು ಮಾತ್ರವಲ್ಲ, ಸಮಗ್ರ ಸಮಾಜದ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. *ಆಶ್ರಯ ದಾಸೋಹ* ನಿರ್ಗತಿಕರಿಗೆ, ಆಶ್ರಯ ಬೇಡಿ ಬಂದ ಪ್ರತಿಯೊಬ್ಬ ಬಡ ಮತ್ತು ಎಲ್ಲಾ ವರ್ಗಗಳ ಮಕ್ಕಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಒದಗಿಸುವ ಮೂಲಕ ಮಕ್ಕಳಿಗೆ ಮಾನಸಿಕ ನೈತಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಆಧಾರವಾಗಿದ್ದರೆ. ಇಲ್ಲಿ ನೀಡುವ ಆಶ್ರಯ ಶಾರೀರಿಕ ಆಶ್ರಯ ಮಾತ್ರವಲ್ಲ ಅದು ಮಾನವ ಜೀವನದ ಮೂಲಭೂತ ಭದ್ರತೆಯನ್ನು ಒದಗಿಸುವ ಮಹತ್ತರ ಸೇವೆಯಾಗಿದೆ. ಬಡತನ, ಅನಾಥತೆ ಅಥವಾ ಸಾಮಾಜಿಕ ಹಿನ್ನಡೆಯಿಂದ ಶಿಕ್ಷಣದಿಂದ ದೂರವಾಗುವ ಮಕ್ಕಳಿಗೆ ಸುರಕ್ಷಿತ ವಾಸಸ್ಥಳವನ್ನು ಒದಗಿಸುವ ಮೂಲಕ, ಅವರ ಬದುಕಿಗೆ ಹೊಸ ದಿಕ್ಕನ್ನು ಪಡೆಯುತ್ತದೆ. ಹಾಗಾಗಿ ಇದು ಕೇವಲ ಶಾರೀರಿಕ ಆಶ್ರಯವಲ್ಲ. ಸುರಕ್ಷಿತ ಪರಿಸರದಲ್ಲಿ ಬೆಳೆದ ಮಕ್ಕಳು ಆತ್ಮವಿಶ್ವಾಸದಿಂದ ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಉತ್ತಮ ದಾರಿಯಲ್ಲಿ ನಡೆಯುವ ಸಾಮರ್ಥ್ಯವನ್ನು ಬೆಳೆಸುವ ಸನ್ಮಾರ್ಗವಾಗಿದೆ. ಈ ಲೇಖನವು ತ್ರಿವಿಧ ದಾಸೋಹದ ತಾತ್ವಿಕ ಮತ್ತು ಪ್ರಾಯೋಗಿಕ ಆಯಾಮಗಳನ್ನು ವಿಶ್ಲೇಷಿಸುವ ಪ್ರಯತ್ನವಾಗಿದ್ದು, ಸೇವೆಯ ಮೂಲಕ ಸಮಾಜ ನಿರ್ಮಾಣ ಸಾಧ್ಯವೆಂಬ ಸತ್ಯವನ್ನು ಸ್ಪಷ್ಟಪಡಿಸುತ್ತದೆ ಎಂಬ ನಂಬಿಕೆ. ಸಾಧನೆಗೆ ಯಾವ ಕ್ಷೇತ್ರವಾದರೇನು ಒಳಿತನ್ನು ಮಾಡುವ ಮನಸ್ಸೇ ಮುಖ್ಯವೆಂದು ತೋರುತ್ತ ಸದ್ದು ಗದ್ದಲವಿಲ್ಲದೆ, ಯಾವ ಪ್ರಚಾರವನ್ನೂ ಬಯಸದೇ ಸಾಧನೆಯ ಶಿಖರವನ್ನು ಮೌನದಿಂದೇರಿದವರು ಡಾ. ಶಿವಕುಮಾರ ಸ್ವಾಮಿಗಳು. ಬದುಕಿನ ನಿಜವಾದ ಮಹತ್ವವು ನಾವು “ಪಡೆಯುವುದರಲ್ಲಿ ಅಲ್ಲ, ನಾವು ನೀಡುವುದರಲ್ಲಿ ಇದೆ” ಈ ಸಿದ್ಧಾಂತವೇ ತ್ರಿವಿಧ ದಾಸೋಹದ ಆತ್ಮ. ಹಾಗಾಗಿ ಅದನ್ನೇ ತಮ್ಮ ಜೀವನದ ದ್ಯೆಯವನ್ನಾಗಿಸಿಕೊಂಡು ನೊಸಲಿನ ವಿಭೂತಿಯೊಳಗೆ ಜ್ಞಾನದ ಮರ್ಮವನ್ನರಿತು ಕಾಯಕದೊಳಗೆ ತಮ್ಮನ್ನು ತೊಡಗಿಸಿಕೊಂಡು ಸಾಮಾನ್ಯ ಮಾನವನಾಗಿ ಹುಟ್ಟಿ ಇಂದು ದೇವರಾಗಿದ್ದಾರೆ. ಅವರು ಇಂದು ಬೌತಿಕವಾಗಿ ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರು ಒಂದು ಮೌಲ್ಯವಾಗಿ, ಒಂದು ಉತ್ತಮ ಮಾರ್ಗವಾಗಿ, ಅದರ್ಶದ ಪ್ರತೀಕವಾಗಿ ನಮ್ಮೊಳಗೆ ಸದಾ ಜೀವಂತವಾಗಿದ್ದಾರೆ.









