
ಮಡಿಕೇರಿ ಮೇ 7 NEWS DESK : ಹಾಕಿ ಕ್ರೀಡಾ ಪ್ರೇಮಿಗಳನ್ನು ತಿಂಗಳ ಕಾಲ ರಂಜಿಸಿದ ನಾಪೋಕ್ಲುವಿನ ಚೇನಂಡ ಕಪ್ ಹಾಕಿ ಉತ್ಸವದ ಹಂತದಲ್ಲಿಯೇ, “ಗೋಲಿಗೊಂದು ಗಿಡ” ಎನ್ನುವ ಚಿಂತನೆಯೊಂದಿಗೆ ಹಾಕಿ ಉತ್ಸವ ಆಯೋಜನಾ ಸಮಿತಿ ಸದ್ದುಗದ್ದಲವಿಲ್ಲದೆ ಜಿಲ್ಲೆಯ ವಿವಿಧೆಡೆಗಳಲ್ಲಿ 2200ಕ್ಕೂ ಹೆಚ್ಚಿನ ವೃಕ್ಷಾರೋಪಣ ಮಾಡುವ ಮೂಲಕ ಹಸಿರ ಪರಿಸರ ಸಂರಕ್ಷಣೆಗೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದೆ. ಸುದ್ದಿಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ನಮ್ಮೆಯ ಆಯೋಜನಾ ಸಮಿತಿಯ ಪದಾಧಿಕಾರಿಗಳು ಉತ್ಸವದ ಯಶಸ್ವಿ ಆಯೋಜನೆಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿ, ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಪ್ರದರ್ಶನ ಪಂದ್ಯಗಳನ್ನು ಒಳಗೊಂಡಂತೆ ಒಟ್ಟು 385 ಪಂದ್ಯಗಳು ನಡೆದು 1520 ಗೋಲುಗಳು ದಾಖಲಾಗಿದೆ. ಗೋಲಿಗೊಂದು ಗಿಡ ಎನ್ನುವ ನಮ್ಮ ಪರಿಕಲ್ಪನೆಯನ್ನು ಮೀರಿ ಹೆಚ್ಚಿನ ಪ್ರಮಾಣದ ಗಿಡಗಳನ್ನು ವಿವಿಧೆಡೆಗಳಲ್ಲಿ ನೆಟ್ಟು, ಅವುಗಳ ಬೆಳವಣಿಗೆಯತ್ತ ನಿಗಾ ವಹಿಸಲಾಗಿದೆಯೆಂದು ಮಾಹಿತಿಯನ್ನಿತ್ತರು. ಚೇನಂಡ ಕುಟುಂಬಸ್ಥರ ಗೋಮಾಳ ಜಾಗದಲ್ಲಿ ನೆಟ್ಟ ಗಿಡಗಳು ಚೆನ್ನಾಗಿ ಬೆಳೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ವಿಭಾಗದಲ್ಲು ವೃಕ್ಷಾರೋಪಣ ಮಾಡಲಾಗಿದೆಯೆಂದು ತಿಳಿಸಿದರು. :: ಕಾಡು ಹಣ್ಣು ಹಂಪಲು ಗಿಡಗಳ ರಕ್ಷಣೆ :: ಚೇನಂಡ ಕಪ್ ಹಾಕಿ ಉತ್ಸವ ಸಮಿತಿ ಹಸಿರ ಪರಿಸರಕ್ಕೆ ಒತ್ತು ನೀಡುವ ಗಿಡಗಳನ್ನು ನೆಡುವ ಕಾರ್ಯಕ್ರಮದೊಂದಿಗೆ, ಕಾಡು ಜಾತಿಯ ಹಣ್ಣು ಹಂಪಲು ಗಿಡಗಳ ಸಸ್ಯಾಭಿವೃದ್ಧಿ ಮಾಡಿ, ಮತ್ತೆ ಅರಣ್ಯ ಭಾಗಗಳಲ್ಲಿ ಅವುಗಳನ್ನು ಬೆಳೆಸುವ ಚಿಂತನೆಯನ್ನು ಹೊಂದಿರುವುದಾಗಿ ತಿಳಿಸಿದ ಅವರು, ಜಿಲ್ಲೆಯ ಯಾವುದೇ ಭಾಗದಲ್ಲಿರುವವರು ಅಪರೂಪದ ಕಾಡು ಜಾತಿಯ ಹಣ್ಣು ಹಂಪಲು ಗಿಡಗಳನ್ನು ಹೊಂದಿದ್ದು, ಆ ಬಗ್ಗೆ ಮಾಹಿತಿ ನೀಡಿದಲ್ಲಿ ಚೇನಂಡ ಹಾಕಿ ನಮ್ಮೆ ಸಮಿತಿ ಆ ಗಿಡಗಳ ಸಸ್ಯಾಭಿವೃದ್ಧಿಗೆ ಅಗತ್ಯ ಪ್ರಯತ್ನಗಳನ್ನು ಮಾಡಲಿದೆಯೆಂದು ಸ್ಪಷ್ಟಪಡಿಸಿದರು. :: 500ಕ್ಕೂ ಹೆಚ್ಚಿನ ಜೇನುಪೆಟ್ಟಿಗೆ ವಿತರಣೆ :: ಚೇನಂಡ ಕಪ್ ಹಾಕಿ ಉತ್ಸವದ ಸಂದರ್ಭ ಪ್ರತಿ ಪಂದ್ಯದಲ್ಲಿ ಪರಾಭವಗೊಂಡ ತಂಡಕ್ಕೆ ಜೇನು ಪೆಟ್ಟಿಗೆಯನ್ನು ವಿತರಿಸಿದೆ. ಅದರಂತೆ ಒಟ್ಟು ಪಂದ್ಯಾವಳಿಯಲ್ಲಿ 500 ಕ್ಕೂ ಹೆಚ್ಚಿನ ಜೇನುಪೆಟ್ಟಿಗೆ ವಿತರಿಸಲಾಗಿದೆ. ಈ ಪೆಟ್ಟಿಗೆಗಳಿಗೆ ಜೇನುಹುಳುಗಳ ಅಗತ್ಯವಿರುವವರು ಸಮಿತಿಯನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿಕೊಂಡರು. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳೊಂದಿಗೆ ಜೇನುಪೆಟ್ಟಿಗೆ ವಿತರಣೆಯ ಮೂಲಕ ಜೇನುಕೃಷಿಗೆ ಉತ್ತೇಜನ ನೀಡುವ ಮೂಲಕ ಹಾಕಿ ಉತ್ಸವದ ಆಯೋಜನೆಯೊಂದಿಗೆ ಚೇನಂಡ ಕುಟುಂಬವು ಪರಿಸರ ಸಂರಕ್ಷಣೆಯ ನೆಲೆಯಲ್ಲಿ ಮಹತ್ವದ ಹೆಜ್ಜೆಯೊಂದನ್ನಿರಿಸಿರುವುದಾಗಿ ಸಂತಸ ವ್ಯಕ್ತಪಡಿಸಿದರು. :: ಪೂರ್ಣ ಸಹಕಾರ :: ಮುಂದಿನ 2027ನೇ ಸಾಲಿನಲ್ಲಿ ಪೊನ್ನಂಪೇಟೆಯಲ್ಲಿ “ಅಜ್ಜಿಕುಟ್ಟೀರ ಕಪ್ ಹಾಕಿ ನಮ್ಮೆ” ನಡೆಯಲಿದ್ದು, ಉತ್ಸವ ಆಯೋಜನೆ ಮಾಡುವ ಅಜ್ಜಿಕುಟ್ಟೀರ ಕುಟುಂಬಕ್ಕೆ ಸರ್ವ ಸಹಕಾರವನ್ನು ಚೇನಂಡ ಕುಟುಂಬ ನೀಡಲಿದೆಯೆಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ನಮ್ಮೆ ಆಯೋಜನಾ ಸಮಿತಿಯ ಅಧ್ಯಕ್ಷರಾದ ಚೇನಂಡ ಕಂಬಣಿ ಕರುಂಬಯ್ಯ, ಕಾರ್ಯಾಧ್ಯಕ್ಷರಾದ ಚೇನಂಡ ದೀನಾ ಚಂಗಪ್ಪ, ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ, ಸಹ ಕಾರ್ಯದರ್ಶಿ ಚೇನಂಡ ತಮ್ಮಿ ತಮ್ಮಯ್ಯ, ವಕ್ತಾರರಾದ ಚೇನಂಡ ಸುರೇಶ್ ನಾಣಯ್ಯ ಉಪಸ್ಥಿತರಿದ್ದರು.








