
ಮಡಿಕೇರಿ NEWS DESK ಮೇ 9 : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿಯಾಗಿದೆ, ಕಲೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೇಜರ್ ಪ್ರೊ.ರಾಘವ ಬಿ. ಅವರು ಕರೆ ನೀಡಿದ್ದಾರೆ. ನಗರದ ಕೊಡಗು ವಿಶ್ವ ವಿದ್ಯಾನಿಲಯದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಕಾಲೇಜ್ ನಲ್ಲಿ ನಡೆದ ಪ್ರತಿಭಾನ್ವೇಷಣೆಯ ಕಲೆಯ ಹಬ್ಬ “ಕಲಾ ವೈಭವ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿಯಾಗಿದೆ. ಶಿಕ್ಷಣದ ಜೊತೆಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಶ್ರಮಿಸುತ್ತಿದ್ದು, ಕಲಾ ವೈಭವ ಇದರ ಒಂದು ಭಾಗವಾಗಿದೆ. ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಕಿವಿಮಾತು ಹೇಳಿದರು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ವಿದ್ಯಾರ್ಥಿಗಳ ರೂಪದಲ್ಲಿ ನೀಡುವ ಕಾರ್ಯವನ್ನು ನಿಸ್ವಾರ್ಥವಾಗಿ ಕಾಲೇಜುಗಳು ಮಾಡುತ್ತಿವೆ. ಎಲ್ಲರೂ ಕೈ ಜೋಡಿಸಿದರೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕಾಲೇಜು ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮೇಜರ್ ಪ್ರೊ.ರಾಘವ ಬಿ. ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿ ಸಂಘದ ಸಂಚಾಲಕ ಡಾ.ಶ್ರೀಧರ್ ಹೆಗಡೆ ಅವರು ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ “ಕಲಾ ವೈಭವ” ಕಾರ್ಯಕ್ರಮದ ಆಯೋಜನೆ ಇತರರಿಗೆ ಮಾದರಿಯಾಗಿದೆ ಮತ್ತು ಹೆಮ್ಮೆಯ ವಿಚಾರವಾಗಿದೆ ಎಂದು ಶ್ಲಾಘಿಸಿದರು. ಕಲಾ ಲೋಕದಲ್ಲಿ 64 ಪ್ರಕಾರದ ಕಲೆಗಳಿದ್ದು, ಅದನ್ನು ಅಧ್ಯಯನ ಮಾಡಬೇಕು. ಇಂತಹ ವೇದಿಕೆಗಳ ಮೂಲಕ ಕೌಶಲ್ಯವನ್ನು ಇತರರಿಗೂ ಪರಿಚಯಿಸಿ ಮುಂದಿನ ಪೀಳಿಗೆಗೂ ಇದನ್ನು ಹಸ್ತಾಂತರಿಸಬೇಕು ಎಂದು ಸಲಹೆ ನೀಡಿದರು. ಕಲಾ ವಿಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಕೀಳರಿಮೆ ಹೊಂದದೆ ಉನ್ನತ ಸಾಧನೆ ಮಾಡಬೇಕು ಎಂದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಕೃಷ್ಣ ಅವರು ಮಾತನಾಡಿ, ಕಾಲೇಜು ಪ್ರಗತಿ ಪಥದಲ್ಲಿ ಸಾಗಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಕಾರ್ಯಪ್ಪ ಕಾಲೇಜ್ ನ ಚಟುವಟಿಕೆ ಜಿಲ್ಲೆಯ ಎಲ್ಲೆಡೆ ಪಸರಿಸಲು ಬೇರೆ ಕಾಲೇಜು ವಿದ್ಯಾರ್ಥಿಗಳ ಸಂಗಮದಿoದ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ.ನಯನ ಕಶ್ಯಪ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರತಿಬಿಂಬಿಸಲು ಸೂಕ್ತ ವೇದಿಕೆಯ ಅಗತ್ಯವಿರುತ್ತದೆ, ಕೆಲವೊಮ್ಮೆ ವೇದಿಕೆ ಸಿಗದೆ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಪ್ರತಿಭೆಗಳಿಗೆ ಜೀವ ಕಳೆ ತುಂಬಿದoತಾಗುತ್ತದೆ ಎಂದು ತಿಳಿಸಿದರು. ಸುಮಾರು 77 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿರುವ ಫೀ.ಮಾ.ಕಾರ್ಯಪ್ಪ ಕಾಲೇಜು ಸಹಸ್ರಾರು ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳ ಮೂಲಕ ಬದುಕನ್ನು ಕಟ್ಟಿಕೊಟ್ಟಿದೆ. ಇದು ಹೆಮ್ಮೆಯ ವಿಚಾರವೆಂದು ಹರ್ಷ ವ್ಯಯಕ್ತಪಡಿಸಿದರು. “ಗಮನ ಸೆಳೆದ ಕಲಾ ವೈಭವ” ಕಾರ್ಯಕ್ರಮದಲ್ಲಿ ಸಮೂಹ ನೃತ್ಯ, ಹಾಡುಗಾರಿಕೆ, ನಾಟಕ, ಏಕ ಪಾತ್ರಾಭಿನಯ, ರಂಗೋಲಿ, ಫಯರ್ ಲೆಸ್ ಕುಕ್ಕಿಂಗ್, ಚರ್ಚಾ ಕೂಟ ಸಹಿತ ವಿವಿಧ ಕಲೆಗಳ ಪ್ರದರ್ಶನ ಆಕರ್ಷಿಸಿತು. ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು “ಕಲಾ ವೈಭವ” ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು. ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ತಿಪ್ಪೇಸ್ವಾಮಿ, ಕಾರ್ಯಕ್ರಮದ ಸಂಚಾಲಕಿ ಡಾ.ಎ.ಎನ್.ಗಾಯತ್ರಿ, ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಡಾ.ಡೀನಾ ಎಂ.ಪಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೋನಿಕಾ ಎ.ಎನ್, ಸೂಕ್ಷ್ಮಾಣು ವಿಭಾಗದ ಉಪನ್ಯಾಸಕಿ ಡಾ.ಸೌಮ್ಯ ಕೃಷ್ಣ ಮೂರ್ತಿ, ಭೂಗೋಳ ವಿಭಾಗದ ಉಪನ್ಯಾಸಕಿ ಡಾ.ಬೈರವಿ, ವಿದ್ಯಾರ್ಥಿ ಸಂಘಟನೆಯ ಸಂಚಾಲಕಿ ಟಿ.ವಿ.ವರ್ಷ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









