
ಮಡಿಕೇರಿ ಮೇ 13 NEWS DESK : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ದೇಶದ ಜನತೆಗೆ ನೀಡಿರುವ ಸಲಹೆಯನ್ನು ಕಾಂಗ್ರೆಸ್ ಪಕ್ಷ ಕ್ಷುಲ್ಲಕ ರಾಜಕಾರಣಕ್ಕಾಗಿ ಬಳಸುತ್ತಿರುವುದು ಖಂಡನೀಯವೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಸಂದಿಗ್ಧತೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಸಮಸ್ಯೆಯಾಗಬಾರದು ಎನ್ನುವ ದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಶಿಸ್ತಿನ ಕುರಿತು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ಸಿಗರು ದೇಶದ ಆಂತರಿಕ ಸಮಸ್ಯೆ ಎಂಬಂತೆ ಪ್ರತಿಬಿಂಬಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಚಿನ್ನದ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಮಿತವಾಗಿ ಬಳಸಲು ಕರೆ ನೀಡಿದ್ದರು. ಆದರೆ ಆ ಸಂದರ್ಭ ಯಾವುದೇ ಯುದ್ಧ ಇರಲಿಲ್ಲ, ಕೇವಲ ಆರ್ಥಿಕ ನಿರ್ವಹಣೆಯ ಕೊರತೆ ಇತ್ತು ಎಂದು ಟೀಕಿಸಿದ್ದಾರೆ. ಪ್ರಸ್ತುತ ಪ್ರಧಾನಿ ಮೋದಿ ಅವರು ನೀಡಿರುವ ಸಲಹೆಗಳನ್ನು ದೇಶದ ಹಿತ ಮತ್ತು ನಮ್ಮ ಒಳಿತಿಗಾಗಿ ನಾವೆಲ್ಲರೂ ಪಾಲಿಸಬೇಕಾಗಿದೆ. ದೇಶದ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ಸಿಗರು ಈ ಹಿಂದೆ ಕೋವಿಡ್ ಸಂದರ್ಭದ ಕ್ರಮಗಳಿಗೂ ಟೀಕೆ ವ್ಯಕ್ತಪಡಿಸಿದ್ದರು. ಆದರೆ ಪ್ರಧಾನಿ ಮೋದಿ ಅವರ ದಿಟ್ಟ ನಿರ್ಧಾರದಿಂದಾಗಿ ಜನರು ಸರಕ್ಷಿತವಾಗಿದ್ದರು, ಅಲ್ಲದೆ ಭಾರತದ ಕ್ರಮಗಳು ಇತರ ದೇಶಗಳಿಗೂ ಮಾದರಿಯಾಗಿತ್ತು. ದೇಶದ ಹಿತಕ್ಕಿಂತ ಸ್ವಾರ್ಥ ರಾಜಕಾರಣವೇ ಕಾಂಗ್ರೆಸ್ಸಿಗರಿಗೆ ಮುಖ್ಯವಾಗಿದೆ. 1968 ರ ಚಿನ್ನದ (ನಿಯಂತ್ರಣ) ಕಾಯಿದೆಯು ಭಾರತದ ಆರ್ಥಿಕ ಇತಿಹಾಸದಲ್ಲಿ ಚಿನ್ನದ ಮೇಲೆ ಹೇರಲಾದ ಅತ್ಯಂತ ಕಠಿಣ ನಿಬರ್ಂಧಗಳಲ್ಲಿ ಒಂದಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸರಕಾರ ದೇಶೀಯ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಒತ್ತಡವನ್ನು ನಿರ್ವಹಿಸಲು, ವಿಶೇಷವಾಗಿ ಚಿನ್ನದ ಕಳ್ಳಸಾಗಣೆಯನ್ನು ತಡೆಯಲು ಈ ಕಾಯಿದೆಯನ್ನು ಸೆಪ್ಟೆಂಬರ್ 1, 1968 ರಂದು ಜಾರಿಗೆ ತಂದಿತು. ಈ ಕಾಯಿದೆಯು ವೈಯಕ್ತಿಕವಾಗಿ ಚಿನ್ನವನ್ನು (ಕಚ್ಚಾ ಅಥವಾ ಆಭರಣವಲ್ಲದ ರೂಪದಲ್ಲಿ) ಇಟ್ಟುಕೊಳ್ಳುವುದನ್ನು ನಿಬರ್ಂಧಿಸಿತು. ಚಿನ್ನದ ವ್ಯಾಪಾರ, ಉತ್ಪಾದನೆ ಮತ್ತು ವಿತರಣೆಯ ಮೇಲೆ ಸರಕಾರ ಸಂಪೂರ್ಣ ನಿಯಂತ್ರಣ ಸಾಧಿಸಿತು. ಇದನ್ನು ಕಾಂಗ್ರೆಸ್ಸಿಗರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರಕಾರವನ್ನು ಟೀಕಿಸುವ ಮೊದಲು ರಾಜ್ಯ ಸರಕಾರದ ಆರ್ಥಿಕ ದುಸ್ಥಿತಿಯ ಬಗ್ಗೆ ಕಾಂಗ್ರೆಸ್ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಮನಬಂದಂತೆ ಏರಿಕೆ ಮಾಡಲಾಗುತ್ತಿದೆ. ಜನರಿಗೆ ಹೊರೆಯಾಗಿರುವ ಕಾಂಗ್ರೆಸ್ ಸರಕಾರ ಕೇಂದ್ರವನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ಕ್ಷುಲ್ಲಕ ರಾಜಕಾರಣಕ್ಕಾಗಿ ಬೇಜವಾಬ್ದಾರಿ ಹೇಳಿಕೆಗಳನ್ನು ಮೊದಲು ನಿಲ್ಲಿಸಿ ಪ್ರಧಾನಿ ಮೋದಿ ಅವರ ಜನಪರ ಕಾಳಜಿಯನ್ನು ಗೌರವಿಸಲಿ ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.









