


ವಿರಾಜಪೇಟೆ ಮೇ 14 NEWS DESK : ವಿರಾಜಪೇಟೆಯ ಮಗ್ಗುಲದಲ್ಲಿರುವ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೊಡಗಿನಲ್ಲಿ ಸುಸ್ಥಿರ ಉದ್ಯಮಶೀಲತೆಗಾಗಿ ಕಂಜಿತಂಡ ಮಿಸಸ್ ರಾಣಿ ಅಯ್ಯಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕೊಡಗಿನಲ್ಲಿ ನವೀನ ಉದ್ಯಮಶೀಲತಾ ಉದ್ಯಮಗಳ ಮೂಲಕ ಸುಸ್ಥಿರತೆಯನ್ನು ಹೆಚ್ಚಿಸಲು ಬದ್ಧರಾಗಿರುವ ವ್ಯಕ್ತಿಗಳನ್ನು ಗುರುತಿಸಿ ನೀಡುವ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು, ಸುಸ್ಥಿರ ಉದ್ಯಮಶೀಲತೆಗಾಗಿ ರಾಣಿ ಅಯ್ಯಪ್ಪ ಪ್ರಶಸ್ತಿಯು ಒಂದು ವಿಶಿಷ್ಟ ಗೌರವವಾಗಿದ್ದು, ಅದರ ಹೆಸರಿನ ಮೌಲ್ಯಗಳು ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಟ್ರಸ್ಟ್ ಮುಖಾಂತರ ಕುಟುಂಬದವರಿಂದ ರಾಣಿ ಅಯ್ಯಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿ ಮತ್ತು ಅವರ ಸ್ಮರಣೆಯನ್ನು ಕಾಪಾಡುವುದು ಮತ್ತು ಕೊಡಗಿಗೆ ಅವರ ಕೊಡುಗೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಸುಸ್ಥಿರತೆಯ ನುಡಿಗಟ್ಟುಗಳೊಂದಿಗೆ ಜಗತ್ತು ಇಂದು ಹೋರಾಡುತ್ತಿದೆ. ಸುಸ್ಥಿರ ಕೃಷಿಯು ಮುಂದಕ್ಕೆ ಒಂದು ಪ್ರಮುಖ ಮಾರ್ಗವನ್ನು ನೀಡುತ್ತದೆ, ಮಣ್ಣಿನ ಪುನಃಸ್ಥಾಪನೆಗೆ ಪುನರುತ್ಪಾದಕ ಅಭ್ಯಾಸಗಳನ್ನು ಬಳಸಿಕೊಳ್ಳುವುದು, ಹಾಗೆಯೇ ಪರಿಸರವನ್ನು ರೂಪಿಸುವಲ್ಲಿ ನವೀನ ಅವಕಾಶಗಳೊಂದಿಗೆ ಯುವ ಪ್ರತಿಭೆಗಳನ್ನು ಕೃಷಿಯತ್ತ ಸೆಳೆಯಬೇಕು. ಈ ನಿಟ್ಟಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದರು. ಕೊಡಗಿನಲ್ಲಿ ಸುಸ್ಥಿರ ಉದ್ಯಮಶೀಲತೆಗಾಗಿ ಉದ್ಯಮಗಳ ಮೂಲಕ ಸುಸ್ಥಿರತೆಯನ್ನು ಹೆಚ್ಚಿಸಲು ಬದ್ಧರಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇದ್ದಲ್ಲಿ ಅಂತವರನ್ನು ಗುರುತಿಸಿ ಗೌರವಿಸಲಾಗುತ್ತದೆ. ಇದು ಭವಿಷ್ಯದ ಪೀಳಿಗೆಗೂ ಮಾದರಿಯಾಗಲಿದೆ. ರಾಣಿ ಅಯ್ಯಪ್ಪ ಅವರು ಕೊಡಗಿನ ಪರಿಸರದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದವರಾಗಿದ್ದು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅಪಾರ ಪ್ರಮಾಣದ ಸಾಮಾಜಿಕ ಭದ್ದತೆಯನ್ನು ಹೊಂದಿದ್ದ ಅವರು ಕೃಷಿಯಲ್ಲಿ ತೊಡಗಿಸಿಕೊಂಡ ಯುವ ಪೀಳಿಗೆ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು. ಇದೇ ವೇಳೆ ಕೊಡಗಿನಲ್ಲಿ ಸುಸ್ಥಿರ ಉದ್ಯಮಶೀಲತೆಗಾಗಿ ರಾಣಿ ಅಯ್ಯಪ್ಪ ಪ್ರಶಸ್ತಿ-2026ನ್ನು ಜೇನು ಕೃಷಿಯಲ್ಲಿ ಸಾಧನೆ ತೋರಿದ ನಡಿಕೇರಿಯಂಡ ಸುಬ್ಬಯ್ಯ ಅವರು ಪಡೆದುಕೊಂಡಿದ್ದು ವೇದಿಕೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಂತ ವೈದ್ಯಕೀಯ ಮಹಾವಿದ್ಯಾಲಯದ ಪೋಷಕರಾದ ಕಂಜಿತಂಡ ಅಯ್ಯಪ್ಪ ಹಾಗೂ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಕೊಡಗು ದಂತ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯವರು, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದ್ದರು.









