

ಮಡಿಕೇರಿ NEWS DESK ಮೇ 15 : ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದ ರಾಜ್ಯ ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳಿಗೆ ಸಮಾನತೆಯ ಪಾಠ ಮಾಡುವ ಬದಲು ಹಿಜಾಬ್ ರಾಜಕಾರಣದ ಮೂಲಕ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಭಿವೃದ್ಧಿ ಶೂನ್ಯ ರಾಜ್ಯ ಸರಕಾರ ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳಲ್ಲಿ ಅಸಮಾನತೆ ಮೂಡಿಸುತ್ತಿದೆ. ಸಮವಸ್ತ್ರ ಮತ್ತು ಸಮಾನತೆಯ ಅರಿವಿಲ್ಲದ ಕಾಂಗ್ರೆಸ್ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದೆ. ಒಂದು ಧರ್ಮದವರನ್ನು ಓಲೈಸಿಕೊಳ್ಳುವ ಭರದಲ್ಲಿ ಮತ್ತೊಂದು ಧರ್ಮದವರ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಮೂಡಿಸಲಾಗದವರು ಸಮಾಜದಲ್ಲಿ ಐಕ್ಯತೆ ಕಾಪಾಡುವ ಪಾಠ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸರಕಾರದ ಹಿಜಾಬ್ ಅನುಮತಿಯ ನಿಲುವು ಒಡೆದು ಆಳುವ ನೀತಿ ಎನ್ನುವುದು ಮತ್ತೊಮ್ಮೆ ರಾಜ್ಯದ ಜನತೆಗೆ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದೂ ಕಾರ್ಯಕರ್ತರು ಮೌನಕ್ಕೆ ಶರಣಾಗಿರುವುದು ದುರಾದೃಷ್ಟಕರ. “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಪರಿಕಲ್ಪನೆಯ ಬಿಜೆಪಿಯಿಂದ ಮಾತ್ರ ಈ ದೇಶದಲ್ಲಿ ಸಮಾನತೆ ನೆಲೆಸಲು ಸಾಧ್ಯ ಎನ್ನುವುದನ್ನು ಎಲ್ಲಾ ಧರ್ಮದವರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷ ಒಂದು ಸಮುದಾಯದ ಓಲೈಕೆಯಲ್ಲಿ ನಿರತವಾಗಿದೆ. ಆದರೆ ಕಾಂಗ್ರೆಸ್ ನ ಈ ನಿಲುವೇ ಆ ಪಕ್ಷಕ್ಕೆ ಮಾರಕವಾಗಿದ್ದು, ದೇಶದ ಎಲ್ಲಾ ಭಾಗಗಳಲ್ಲೂ ವಿನಾಶದಂಚಿನಲ್ಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಧರ್ಮದವರ ಓಲೈಕೆಗಾಗಿ ಹಿಂದೂಗಳ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ರಾಜ್ಯ ಸರಕಾರ ಮುಂದಾದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ರಾಕೇಶ್ ದೇವಯ್ಯ, ಹಿಜಾಬ್ ಧರಿಸಲು ನೀಡಿರುವ ಅನುಮತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.








